ಬೆಂಗಳೂರು: ಎಟಿಎಂಗೆ ಹಣ ತುಂಬಿಸುವ ವಾಹನ ಸಮೇತ ಪರಾರಿಯಾದ ಚಾಲಕ
ಬೆಂಗಳೂರು, ಫೆ.3: ಎಟಿಎಂಗೆ ಹಣ ತುಂಬಿಸುವ ವಾಹನದ ಚಾಲಕನೊಬ್ಬ ಸುಮಾರು 65 ಲಕ್ಷರೂ. ಸಮೇತ ಪರಾರಿಯಾಗಿರುವ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸುಬ್ರಹ್ಮಣ್ಯನಗರದ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಮಂಗಳವಾರ ರಾತ್ರಿ 7ರ ವೇಳೆ ಹಣ ತುಂಬಲು ಹೋಗಿದ್ದ ವೇಳೆ ಹಣದ ಸಮೇತ ಚಾಲಕ ಪರಾರಿಯಾಗಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಧರ್ಮೇಂದ್ರಕುಮಾರ್ ಮೀನಾ ತಿಳಿಸಿದ್ದಾರೆ.
ಸೆಕ್ಯೂರ್ ವ್ಯಾಲಿ ಕಂಪೆನಿಯಿಂದ ಹಣವನ್ನು ಎಟಿಎಂಗೆ ತುಂಬಿಸಲು ಗುತ್ತಿಗೆ ಪಡೆದಿದ್ದು ಅದರಂತೆ ರಾತ್ರಿ 7ರ ವೇಳೆ ಭದ್ರತಾ ವಾಹನದಲ್ಲಿ ಸುಬ್ರಹ್ಮಣ್ಯನಗರದ ಆಕ್ಸಿಸ್ ಬ್ಯಾಂಕ್ಗೆ ಸೇರಿದ ಎಟಿಎಂಗೆ ಹಣ ತುಂಬಲು ಅಧಿಕಾರಿಗಳು ಮತ್ತು ಗನ್ ಮ್ಯಾನ್ ಒಳಗೆ ಹೋಗಿದ್ದಾರೆ.
ಕೂಡಲೇ ವಾಹನದಲ್ಲಿದ್ದ ಚಾಲಕ 65 ಲಕ್ಷ ಹಣದ ಚೀಲದ ಸಮೇತ ಪರಾರಿಯಾಗಿದ್ದಾನೆ. ತಕ್ಷಣವೇ ಸುಬ್ರಮಣ್ಯಪುರ ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿ ಪತ್ತೆಗೆ ತೀವ್ರ ಶೋಧ ಕೈಗೊಳ್ಳಲಾಗಿದೆ ಎಂದು ಡಿಸಿಪಿ ತಿಳಿಸಿದರು.