ಕಡು ಬಡವರ ಸಮಸ್ಯೆ ಪರಿಹರಿಸುತ್ತಿರುವ ಕೇಂದ್ರ ಸರಕಾರ: ನಿರ್ಮಲಾ ಸೀತಾರಾಮನ್

Update: 2021-02-21 15:05 GMT

ಬೆಂಗಳೂರು, ಫೆ.21: ಬಡವರಿಗೆ ತಲುಪುವಂಥ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಾಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ರವಿವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಬಿಜೆಪಿ ಆರ್ಥಿಕ ಪ್ರಕೋಷ್ಠ ಏರ್ಪಡಿಸಿದ್ದ ‘ಆರ್ಥಿಕ ಅವಲೋಕನ, ಆತ್ಮವಿಶ್ವಾಸದ ಭಾರತಕ್ಕಾಗಿ ಆತ್ಮನಿರ್ಭರ ಬಜೆಟ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಜ್ವಲ, ಉಜಾಲಾ, ಸ್ವನಿಧಿ, ಮುದ್ರಾ, ಜನೌಷಧಿ, ಕಿಸಾನ್ ಸಮ್ಮಾನ್‍ನಂಥ ಯೋಜನೆಗಳ ಮೂಲಕ ಕೇಂದ್ರದ ಬಿಜೆಪಿ ಸರಕಾರವು ಬಡವರ ಸಮಸ್ಯೆಗಳನ್ನು ನಿವಾರಿಸಲು ಆದ್ಯತೆ ಕೊಟ್ಟಿದೆ ಎಂದು ವಿವರಿಸಿದರು.

ಹಿಂದೆ ಭಾರತವೆಂದರೆ ಮೂಲಸೌಕರ್ಯಗಳ ಕೊರತೆ ಇರುವ ದೇಶ ಎಂಬ ಚಿಂತನೆ ಸಹಜವಾಗಿತ್ತು. ದೀನ್ ದಯಾಳ್ ಉಪಾಧ್ಯಾಯರ "ಅಂತ್ಯೋದಯ" ಚಿಂತನೆಗಳೊಂದಿಗೆ ಅದನ್ನು ತೊಡೆದುಹಾಕಲು ಕೇಂದ್ರ ಸರಕಾರವು ಶ್ರಮಿಸುತ್ತಿದೆ. ಲೈಸನ್ಸ್ ರಾಜ್ ವ್ಯವಸ್ಥೆಯಲ್ಲಿ ಸುಧಾರಣೆ ತರಲಾಗಿದೆ. ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರವು ಸುಸ್ಥಿರ ಆಡಳಿತ ನೀಡಲು ಶ್ರಮಿಸಿತ್ತು ಎಂದು ಅವರು ಹೇಳಿದರು.

ಈಗಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಉಜ್ವಲ ಯೋಜನೆಯಡಿ ಈಗಾಗಲೇ 8 ಕೋಟಿ ಬಡವರಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ನೀಡಿದ್ದು, ಈ ಬಜೆಟ್‍ನಡಿ ಮತ್ತೆ ಒಂದು ಕೋಟಿ ಅರ್ಹ ಬಡವರಿಗೆ ಉಚಿತ ಸಿಲಿಂಡರ್ ಸಂಪರ್ಕ ನೀಡಲು ಮುಂದಾಗಿದೆ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.

1969ರಲ್ಲಿ ಬ್ಯಾಂಕ್‍ಗಳ ರಾಷ್ಟ್ರೀಕರಣ ನಡೆದರೂ ಬಡವರಿಗೆ ಅದರಿಂದ ವಿಶೇಷ ಪ್ರಯೋಜನ ಲಭಿಸಿರಲಿಲ್ಲ. ಆಧಾರ್ ಸಂಖ್ಯೆಯನ್ನು ಮೊಬೈಲ್‍ಗೆ ಸಂಪರ್ಕಿಸಿ ಜನಧನ್ ಕಾರ್ಯಕ್ರಮವನ್ನು ಜಾರಿಗೊಳಿಸಿದ್ದರಿಂದ ನಿಜವಾದ ಬಡವರಿಗೆ ಈ ಯೋಜನೆಯ ಪ್ರಯೋಜನ ಲಭಿಸುತ್ತಿದೆ ಎಂದು ಅವರು ತಿಳಿಸಿದರು.

ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆದಾರರ ಮೇಲೆ ನಂಬಿಕೆ ಇಡುವ ಮತ್ತು "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಚಿಂತನೆಯಡಿ ದೇಶದ ಅಭಿವೃದ್ಧಿಗೆ ಬದ್ಧತೆ ತೋರುವ ಸರಕಾರ ನಮ್ಮದು. ಉದ್ಯೋಗ ಹೆಚ್ಚಿಸುವ ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ಸುಸ್ಥಿರ ಪ್ರಗತಿ ನಮ್ಮದಾಗಿಸಲು ಸರಕಾರ ಮುಂದಾಗಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸದೆ ಇರುವ ಸಾರ್ವಜನಿಕ ಸಂಸ್ಥೆಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ದೇಶದ ಅಭಿವೃದ್ಧಿ ಸಾಧಿಸಲು ಖಾಸಗೀಕರಣ ಅನಿವಾರ್ಯ ಎಂದು ಅವರು ತಿಳಿಸಿದರು.

ದೀರ್ಘಾವಧಿ ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿರುವ ಜವಾಬ್ದಾರಿಯುತ ಚಿಂತನೆಯ ಬಜೆಟ್ ಅನ್ನು ನೀಡಲಾಗಿದೆ ಎಂದು ಅವರು ವಿಶ್ಲೇಷಿಸಿದರು. ಬಳಿಕ ಸಂವಾದದಲ್ಲೂ ಪಾಲ್ಗೊಂಡ ಸಚಿವರು, ಸಮಸ್ಯೆಗಳಿದ್ದರೆ ಅವುಗಳನ್ನು ನನ್ನ ಗಮನಕ್ಕೆ ತನ್ನಿ. ಅವುಗಳನ್ನು ಗಮನಿಸಿ ಪರಿಹರಿಸುವೆ ಎಂದು ತಿಳಿಸಿದರು.

ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಮೀರ್ ಕಾಗಲ್ಕರ್, ಪ್ರಕೋಷ್ಠದ ಸಲಹೆಗಾರ ವಿಶ್ವನಾಥ ಭಟ್, ಸಹ ಸಂಚಾಲಕ ಕರಣ್ ಜವಾಜೆ, ಆಹ್ವಾನಿತ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News