ಭಾರತವನ್ನು ‘ಭಾಗಶಃ ಮುಕ್ತ ’ದರ್ಜೆಗಿಳಿಸಿದ ಅಮೆರಿಕದ ಚಿಂತನ ಚಿಲುಮೆಯ ವರದಿಗೆ ಕೇಂದ್ರದ ತಿರಸ್ಕಾರ

Update: 2021-03-05 16:49 GMT

ಹೊಸದಿಲ್ಲಿ,ಮಾ.5: ಮುಕ್ತ ದೇಶವೆಂಬ ಭಾರತದ ಸ್ಥಾನಮಾನವು ‘ಭಾಗಶಃ ಮುಕ್ತ ’ದರ್ಜೆಗೆ ಕುಸಿದಿದೆ ಎಂದು ಹೇಳಿರುವ ಅಮೆರಿಕದ ಚಿಂತನ ಚಿಲುಮೆ ‘ದಿ ಫ್ರೀಡಂ ಹೌಸ್ ’ನ ವರದಿಯನ್ನು ಶುಕ್ರವಾರ ತಿರಸ್ಕರಿಸಿರುವ ಕೇಂದ್ರ ಸರಕಾರವು ಇದೊಂದು ದಾರಿ ತಪ್ಪಿಸುವ,ತಪ್ಪುಗಳು ಮತ್ತು ಸುಳ್ಳುಮಾಹಿತಿಗಳಿಂದ ಕೂಡಿರುವ ವರದಿಯಾಗಿದೆ ಎಂದು ಹೇಳಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕಿಂತ ಬೇರೆಯಾದ ಪಕ್ಷಗಳು ಸ್ವತಂತ್ರ ಚುನಾವಣಾ ಆಯೋಗವು ನಡೆಸುವ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಮೂಲಕ ದೇಶದ ಹಲವಾರು ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದು ಈ ವರದಿಯು ಸಂಪೂರ್ಣ ತಪ್ಪುಗಳಿಂದ ಕೂಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸರಕಾರವು,ಇದು ವಿವಿಧ ದೃಷ್ಟಿಕೋನಗಳಿಗೆ ಅವಕಾಶವಿರುವ ಸ್ಪಂದನಶೀಲ ಪ್ರಜಾಪ್ರಭುತ್ವದ ಕಾರ್ಯವೈಖರಿಯನ್ನು ಪ್ರತಿಫಲಿಸುತ್ತಿದೆ ಎಂದಿದೆ.

ದಿ ಫ್ರೀಡಂ ಹೌಸ್ ತನ್ನ ವರದಿಯಲ್ಲಿ ದಿಲ್ಲಿ ದಂಗೆಗಳು,ದೇಶದ್ರೋಹ ಕಾನೂನುಗಳ ಬಳಕೆ ಮತ್ತು ಕೊರೋನವೈರಸ್ ಸಾಂಕ್ರಾಮಿಕವನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಲಾಕ್‌ಡೌನ್ ಘೋಷಿಸಿದ ನಂತರದ ವಲಸೆ ಕಾರ್ಮಿಕರ ಬಿಕ್ಕಟ್ಟು ಇತ್ಯಾದಿಗಳನ್ನು ಪ್ರಸ್ತಾಪಿಸಿದೆ.

ಭಾರತ ಸರಕಾರವು ಸಂವಿಧಾನದಲ್ಲಿ ಅಡಕವಾಗಿರುವಂತೆ ತನ್ನ ಎಲ್ಲ ಪ್ರಜೆಗಳನ್ನು ಸಮಾನತೆಯಿಂದ ನಡೆಸಿಕೊಳ್ಳುತ್ತಿದೆ ಮತ್ತು ಎಲ್ಲ ಕಾನೂನುಗಳನ್ನು ಯಾವುದೇ ತಾರತಮ್ಯವಿಲ್ಲದೆ ಅನ್ವಯಿಸಲಾಗುತ್ತಿದೆ. ಆರೋಪಿತ ಪ್ರಚೋದಕರು ಯಾರು ಎನ್ನುವುದನ್ನು ಪರಿಗಣಿಸದೆ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಲ್ಲಿ ಸೂಕ್ತ ಕಾನೂನು ಕ್ರಮವನ್ನು ಅನುಸರಿಸಲಾಗುತ್ತಿದೆ ಎಂದು ತಿಳಿಸಿರುವ ಹೇಳಿಕೆಯು,ಫೆಬ್ರವರಿ 2020ರ ಈಶಾನ್ಯ ದಿಲ್ಲಿ ದಂಗೆಗಳ ಸಂದರ್ಭದಲ್ಲಿ ಕಾನೂನು ಜಾರಿ ವ್ಯವಸ್ಥೆಯು ನಿಷ್ಪಕ್ಷ ಮತ್ತು ನ್ಯಾಯಯುತವಾದ ರೀತಿಯಲ್ಲಿ ಚುರುಕಾಗಿ ಕಾರ್ಯಾಚರಿಸಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಸ್ವೀಕರಿಸಲಾದ ಎಲ್ಲ ದೂರುಗಳು/ಕರೆಗಳ ಕುರಿತು ಕಾನೂನು ಮತ್ತು ವಿಧಿವಿಧಾನಗಳ ಅನ್ವಯ ಅಗತ್ಯ ಕಾನೂನಾನಾತ್ಮಕ ಮತ್ತು ಪ್ರತಿಬಂಧಕ ಕ್ರಮಗಳನ್ನು ಕಾನೂನು ಜಾರಿ ಸಂಸ್ಥೆಗಳು ತೆಗೆದುಕೊಂಡಿದ್ದವು ಎಂದಿದೆ.

ದೇಶದ್ರೋಹ ಕಾನೂನಿನ ಬಳಕೆ ಕುರಿತಂತೆ ಸರಕಾರವು, ಸಾರ್ವಜನಿಕ ಸುವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳಾಗಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವ ಹಾಗೂ ಅಪರಾಧಗಳ ತನಿಖೆಯ ಹೊಣೆಗಾರಿಕೆಯು ರಾಜ್ಯ ಸರಕಾರಗಳದ್ದಾಗಿದೆ. ಹೀಗಾಗಿ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅರ್ಹವೆಂದು ಕಂಡುಬಂದ ಕ್ರಮಗಳನ್ನು ಕಾನೂನು ಜಾರಿ ಅಧಿಕಾರಿಗಳು ತೆಗೆದುಕೊಂಡಿದ್ದಾರೆ ಎಂದು ಹೇಳಿದೆ.

ಲಾಕ್‌ಡೌನ್ ಕುರಿತು ಟೀಕೆಗೆ ಉತ್ತರಿಸಿರುವ ಸರಕಾರವು, ಜನರ ಯಾವುದೇ ಸಾಮೂಹಿಕ ಚಲನವಲನಗಳು ದೇಶಾದ್ಯಂತ ಸಾಂಕ್ರಾಮಿಕವನ್ನು ಹರಡಲು ಕಾರಣವಾಗುತ್ತಿದ್ದವು. ಈ ಅಂಶವನ್ನು,ಜಾಗತಿಕ ಅನುಭವವನ್ನು ಮತ್ತು ದೇಶಾದ್ಯಂತ ವಿವಿಧ ನಿರ್ಬಂಧಕ ಕ್ರಮಗಳ ಅನುಷ್ಠಾನದಲ್ಲಿ ನಿರಂತರತೆಯ ಅಗತ್ಯವನ್ನು ಪರಿಗಣಿಸಿ ಲಾಕ್‌ಡೌನ್ ಅನ್ನು ಘೋಷಿಸಲಾಗಿತ್ತು. ನಿರ್ವಸಿತರು ಮತ್ತು ವಲಸೆ ಕಾರ್ಮಿಕರಿಗೆ ಆಹಾರ,ವೈದ್ಯಕೀಯ ನೆರವು ಮತ್ತು ಆಶ್ರಯವನ್ನು ಒದಗಿಸಲು ವಿಕೋಪ ನಿಧಿಗಳನ್ನು ಬಳಸಲು ರಾಜ್ಯಗಳಿಗೆ ಅವಕಾಶ ನೀಡುವ ಮೂಲಕ ಹಾಗೂ 1.7 ಲ.ಕೋ.ರೂ.ಗಳ ಪರಿಹಾರ ಪ್ಯಾಕೇಜ್‌ನ್ನು ಪ್ರಕಟಿಸುವ ಮೂಲಕ ಜನರ ಬವಣೆಗಳನ್ನು ನೀಗಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ಹೇಳಿದೆ.

ವಿದ್ವಾಂಸರು ಮತ್ತು ಪತ್ರಕರ್ತರಿಗೆ ಬೆದರಿಕೆಗಳು ಮತ್ತು ಮಾಧ್ಯಮಗಳಿಂದ ಭಿನ್ನಾಭಿಪ್ರಾಯಗಳ ಅಭಿವ್ಯಕ್ತಿಯ ಮೇಲಿನ ದಾಳಿಗಳ ಕುರಿತು ವರದಿಯಲ್ಲಿನ ಟೀಕೆಗೆ ಪ್ರತಿಕ್ರಿಯಿಸಿರುವ ಸರಕಾರವು,ಸಂವಿಧಾನವು ವಿಧಿ 19ರಡಿ ಎಲ್ಲ ಪ್ರಜೆಗಳಿಗೆ ಅಭಿವ್ಯಕ್ತಿ ಸ್ವಾತಂತ್ರವನ್ನು ನೀಡಿದೆ. ಚರ್ಚೆ ಮತ್ತು ಭಿನ್ನಾಭಿಪ್ರಾಯಗಳು ಭಾರತೀಯ ಪ್ರಜಾಪ್ರಭುತ್ವದ ಭಾಗಗಳಾಗಿವೆ, ಭಾರತ ಸರಕಾರವು ಪತ್ರಕರ್ತರು ಸೇರಿದಂತೆ ದೇಶದ ಎಲ್ಲ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆಗೆ ಅತ್ಯಂತ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ಹೇಳಿದೆ.

ಅಂತರ್ಜಾಲ ಸ್ಥಗಿತ,ವಿದೇಶಿ ವಿನಿಮಯ ಕಾಯ್ದೆಯ ಉಲ್ಲಂಘನೆಗಾಗಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಮೇಲಿನ ದಾಳಿಗಳನ್ನೂ ಸರಕಾರವು ಹೇಳಿಕೆಯಲ್ಲಿ ಸಮರ್ಥಿಸಿಕೊಂಡಿದೆ.

ರಾಜಕೀಯ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರಗಳಲ್ಲಿ ಕುಸಿತಕ್ಕಾಗಿ ದಿ ಫ್ರೀಡಂ ಹೌಸ್ ಕೆಳದರ್ಜೆಗಿಳಿಸಿರುವ 73 ದೇಶಗಳಲ್ಲಿ ಭಾರತವು ಒಂದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News