ಐಎಂಎ ಬಹುಕೋಟಿ ವಂಚನೆ ಪ್ರಕರಣ: ಗ್ರಾಹಕರಿಗೆ ಹಣ ಮರು ಪಾವತಿ ಪ್ರಕ್ರಿಯೆ ಆರಂಭ

Update: 2021-03-12 11:36 GMT

ಬೆಂಗಳೂರು, ಮಾ. 12: ನಗರದ ಐ-ಮಾನಿಟರಿ ಅಡ್ವೈಸರಿ(ಐಎಂಎ) ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದ ಹೂಡಿಕೆದಾರರಿಗೆ ಜಪ್ತಿ ಮಾಡಲಾದ ಚಿನ್ನಾಭರಣ ಹಾಗೂ ಆಸ್ತಿ ಮಾರಾಟದಿಂದ ಬಂದ ಹಣವನ್ನು ಇಂದಿನಿಂದಲೇ (ಮಾ.12) ಗ್ರಾಹಕರಿಗೆ ಮರು ಪಾವತಿಗೆ ರಾಜ್ಯ ಸರಕಾರ ನೇಮಿಸಿದ ಸಕ್ಷಮ ಪ್ರಾಧಿಕಾರ ಮುಂದಾಗಿದೆ ಎಂದು ಪ್ರಾಧಿಕಾರದ ವಿಶೇಷಾಧಿಕಾರಿ ಹರ್ಷಗುಪ್ತ ತಿಳಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಪ್ರಕಟಣೆ ನೀಡಿರುವ ಅವರು, ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ಆದೇಶದಂತೆ ವಂಚನೆಗೆ ಒಳಗಾದ ಠೇವಣಿದಾರರಿಗೆ ಗರಿಷ್ಠ 50 ಸಾವಿರ ರೂ.ಗಳನ್ನು ಮರುಪಾವತಿಸಲಾಗುವುದು. ಅತಿ ಕಡಿಮೆ ಹಣ ಕಳೆದುಕೊಂಡಿರುವವರ ಬ್ಯಾಂಕ್ ಖಾತೆಗೆ ಮೊದಲು ನೇರವಾಗಿ ಹಣ ಜಮಾ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

50 ಸಾವಿರ ರೂ.ಗಳಿಗಿಂತ ಕಡಿಮೆ ಹಣ ವಂಚನೆಗೆ ಒಳಗಾದವರ ಕ್ಲೈಮ್ ಅರ್ಜಿಗಳನ್ನು ಮೊದಲು ಇತ್ಯರ್ಥಪಡಿಸಲಿದೆ. ಕೆಲ ಅರ್ಜಿದಾರರು ಈಗಾಗಲೇ ಹೂಡಿಕೆ ಮಾಡಿದ ಹಣಕ್ಕಿಂತ ಅಧಿಕ ಲಾಭಾಂಶ ಪಡೆದಿದ್ದು, ಹೂಡಿಕೆ ಮೊತ್ತದಲ್ಲಿ ಹೊಂದಾಣಿಕೆ ಮಾಡಿಕೊಂಡು ಲೆಕ್ಕ ಹಾಕಲಾಗುತ್ತದೆ. ಅಂತಹವರಿಗೆ ಹಣ ಪಾವತಿಸಲಾಗುವುದಿಲ್ಲ ಎಂದು ಹರ್ಷಗುಪ್ತ ಸ್ಪಷ್ಟನೆ ನೀಡಿದ್ದಾರೆ.

ಪ್ರಸ್ತುತ ಕಂಪೆನಿಯಿಂದ ಜಪ್ತಿ ಮಾಡಲಾಗಿರುವ 5 ಕೋಟಿ ರೂ.ಮೊತ್ತವಿದ್ದು, ಕ್ಲೈಮ್‍ದಾರರ ಬ್ಯಾಂಕ್ ಖಾತೆಗೆ ಮಾ.12ರಿಂದ ಹಣ ಜಮೆ ಪ್ರಕ್ರಿಯೆ ಆರಂಭವಾಗಲಿದೆ. ಹಣ ಜಮೆ ಆಗುತ್ತಿದ್ದಂತೆ ಠೇವಣಿದಾರರ ಮೊಬೈಲ್‍ ಫೋನ್ ಸಂಖ್ಯೆಗೆ ಎಸ್‍ಎಂಎಸ್ ಸಂದೇಶ ರವಾನೆಯಾಗಲಿದೆ. ಪ್ರಾಧಿಕಾರ ವೆಬ್‍ಸೈಟ್‍ನಲ್ಲೂ ಈ ಬಗ್ಗೆ ಪರಿಶೀಲಿಸಬಹುದು ಎಂದು ಅವರು ತಿಳಿಸಿದ್ದಾರೆ.

ಹೆಚ್ಚುವರಿ ದೃಢೀಕರಣ ಮಾಡಲು ಅರ್ಜಿದಾರರು ಆಧಾರ್ ಕಾರ್ಡ್ ಸಂಖ್ಯೆ ಹೊಂದಿರದಿದ್ದರೆ ಅಥವಾ ಐಎಂಎ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರದಿದ್ದರೆ, ಆ ಅರ್ಜಿದಾರರು ಪಾಸ್‍ಪೋರ್ಟ್, ಚಾಲನಾ ಪರವಾನಗಿ, ಪಾನ್‍ಕಾರ್ಡ್, ಚುನಾವಣಾ ಗುರುತಿನ ಚೀಟಿ, ಭಾವಚಿತ್ರವಿರುವ ಬ್ಯಾಂಕ್‍ಪಾಸ್ ಪುಸ್ತಕ ಇತ್ಯಾದಿಗಳೊಂದಿಗೆ ಸಕ್ಷಮ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಬಹುದು ಎಂದು ಸೂಚಿಸಲಾಗಿದೆ.

ಎಲ್ಲ ಅರ್ಜಿದಾರರಿಗೆ ಏಕಕಾಲದಲ್ಲಿ ಹಣ ಪಾವತಿ ಮಾಡಲಾಗುವುದಿಲ್ಲ. ಸಕ್ಷಮ ಪ್ರಾಧಿಕಾರಿಯವರಲ್ಲಿ ಲಭ್ಯವಿರುವ ಮೊತ್ತಕ್ಕೆ ಅನುಗುಣವಾಗಿ ಠೇವಣಿದಾರರಿಗೆ ಪಾವತಿ ಮಾಡಲಾಗುವುದು. ಸಕ್ಷಮ ಪ್ರಾಧಿಕಾರಿಯವರಲ್ಲಿ ಹೆಚ್ಚಿನ ಹಣ ಲಭ್ಯವಾದಂತೆ ಉಳಿದ ಠೇವಣಿದಾರರಿಗೆ ಆಗಿದ್ದಾಗ್ಗೆ ಹಣ ಪಾವತಿ ಮಾಡಲಾಗುತ್ತದೆ.

ಅರ್ಜಿದಾರರು ತಮ್ಮ ಕ್ಲೈಮ್ ಪರಿಶೀಲನೆ ಮತ್ತು ಪಾವತಿಗೆ ಸಂಬಂಧಿಸಿದ ಮಾಹಿತಿಯನ್ನು imaclaims.karnataka.gov.in ವೆಬ್‍ಸೈಟ್‍ನಲ್ಲಿ ‘online Claim Information' Menu Button Click ಮಾಡಿದ ಬಳಿಕ Know Your Claim Status ಆಯ್ಕೆ ಮಾಡಿಕೊಳ್ಳುವುದರ ಮೂಲಕ ತಿಳಿದುಕೊಳ್ಳಬಹುದು. 

ಅರ್ಜಿದಾರರ ಯಾವುದೇ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ-080-4688 5959ಕ್ಕೆ ಕರೆ ಮಾಡಬಹುದು ಅಥವಾ splocaima20@gmail.com ಇ-ಮೇಲ್ ಸಂದೇಶ ಕಳುಹಿಸಬಹುದು ಎಂದು ಸಕ್ಷಮ ಪ್ರಾಧಿಕಾರಿ ಹಾಗೂ ವಿಶೇಷಾಧಿಕಾರಿ ಹರ್ಷಗುಪ್ತ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News