ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಕರ್ನಾಟಕದ ಯುವ ವೇಗದ ಬೌಲರ್ ಗೆ ಸ್ಥಾನ

Update: 2021-03-19 07:25 GMT
Photo: BCCI Twitter

ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ಮಾರ್ಚ್ 23ರಿಂದ ಆರಂಭವಾಗಲಿರುವ 3 ಪಂದ್ಯಗಳ ಏಕದಿನ ಸರಣಿಗೆ ಬಿಸಿಸಿಐ ಶುಕ್ರವಾರ 18 ಸದಸ್ಯರುಗಳನ್ನು ಒಳಗೊಂಡ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. 

ಈಗ ನಡೆಯುತ್ತಿರುವ ಟ್ವೆಂಟಿ-20 ಸರಣಿಯ 4ನೇ ಪಂದ್ಯದಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿ ತಂಡದ ರೋಚಕ ಗೆಲುವಿಗೆ ನೆರವಾಗಿದ್ದ ಸೂರ್ಯಕುಮಾರ್ ಯಾದವ್ ಮೊದಲ ಬಾರಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ನೇತೃತ್ವದ ತಂಡಕ್ಕೆ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಸೇರ್ಪಡೆಯಾಗಿದ್ದಾರೆ.

ಆಲ್ ರೌಂಡರ್ ರವೀಂದ್ರ ಜಡೇಜ ಬೆರಳಿನ ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಹೀಗಾಗಿ ಈ ಸರಣಿಯಿಂದಲೂ ವಂಚಿತರಾಗಲಿದ್ದಾರೆ. ಸರ್ಜರಿಯ ಬಳಿಕ ಜಡೇಜ ಅಭ್ಯಾಸ ಆರಂಭಿಸಿದ್ದಾರೆ. ಆದರೆ ಇನ್ನಷ್ಟೇ ಪೂರ್ಣ ಫಿಟ್ನೆಸ್ ಪಡೆಯಬೇಕಾಗಿದೆ.

ಕಳೆದ ವರ್ಷ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯ ಪ್ರವಾಸದ ವೇಳೆ ಕಾಣಿಸಿಕೊಂಡಿದ್ದ ಮೊಣಕೈನೋವಿನಿಂದ ಇನ್ನೂ ಚೇತರಿಸಿಕೊಳ್ಳದ ವೇಗದ ಬೌಲರ್ ಮುಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆದಿಲ್ಲ.

3 ಏಕದಿನ ಪಂದ್ಯಗಳು ಪುಣೆ ನಗರದಲ್ಲಿ ಮಾರ್ಚ್ 23, 26 ಹಾಗೂ 28ರಂದು ನಡೆಯಲಿದೆ.

ಭಾರತವು ಸುಮಾರು 1 ವರ್ಷದ ಬಳಿಕ ಏಕದಿನ ಕ್ರಿಕೆಟ್ ಪಂದ್ಯವನ್ನಾಡಲಿದೆ. 2020ರ ಜನವರಿ 19ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯ ವಿರುದ್ದ ಕೊನೆಯ ಬಾರಿ ಏಕದಿನ ಪಂದ್ಯವನ್ನಾಡಿತ್ತು.

ಭಾರತದ ಏಕದಿನ ತಂಡ

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಶಿಖರ್ ಧವನ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಯಜುವೇಂದ್ರ ಚಹಾಲ್, ಕುಲದೀಪ್ ಯಾದವ್, ಕೃನಾಲ್ ಪಾಂಡ್ಯ, ವಾಶಿಂಗ್ಟನ್ ಸುಂದರ್, ಟಿ.ನಟರಾಜನ್, ಭುವನೇಶ್ವರ ಕುಮಾರ್, ಮುಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಹಾಗೂ ಶಾರ್ದೂಲ್ ಠಾಕೂರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News