"ನಾನೂ ಸಾರಿಗೆ ಸಂಸ್ಥೆಯ ಚಾಲಕನ ಮಗ": ಮುಷ್ಕರ ನಿರತ ಸಾರಿಗೆ ನೌಕರರಿಗೆ ನಟ ಯಶ್ ಬರೆದ ಪತ್ರದಲ್ಲೇನಿದೆ?

Update: 2021-04-15 15:08 GMT

ಬೆಂಗಳೂರು, ಎ.15: ರಾಜ್ಯ ಸಾರಿಗೆ ನೌಕರರ ವೇತನ ತಾರತಮ್ಯ ನಿವಾರಣೆ ಮಾಡುವಂತೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೊಂದಿಗೆ ಚರ್ಚಿಸಿದ್ದೇನೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಕನ್ನಡ ಚಲನಚಿತ್ರ ನಟ ಯಶ್ ಹೇಳಿದ್ದಾರೆ.

ಈ ಬಗ್ಗೆ ಗುರುವಾರ ಟ್ವಿಟರ್ ನಲ್ಲಿ ಸುದೀರ್ಘ ಪತ್ರದೊಂದಿಗೆ ಪ್ರತಿಕ್ರಿಯೆ ನೀಡಿರುವ ಯಶ್, ಸದ್ಯ ನಿಮ್ಮ ಯಶ್ ಏನೇ ಆಗಿರಬಹುದು. ಆದರೆ, ಇದಕ್ಕೂ ಮೊದಲು ನಾನು ಸಾರಿಗೆ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ ಎಂದು ಹೇಳಿಕೊಂಡಿದ್ದಾರೆ.

ಮನೆಯಲ್ಲಿ ನಾನು ತಡ ಮಾಡಿದರೆ ಪ್ರತಿದಿನ ನನ್ನ ಬಸ್ಸಿನಲ್ಲೇ ಬರುವ ಪ್ರಯಾಣಿಕರಿಗೆ ಟ್ರೈನ್ ತಪ್ಪಿ ಹೋಗುತ್ತೇನೋ, ಕಚೇರಿಗೆ ತಡವಾಗುತ್ತೇನೋ ಅಂತ ನಮ್ಮಪ್ಪ ಎಷ್ಟೋ ದಿನ ಬೆಳಗ್ಗೆ ಮನೆಯಲ್ಲಿ ತಿಂಡಿ ಕೂಡ ತಿನ್ನದೆ ಗಡಿಬಿಡಿಯಲ್ಲಿ ನಡೆಯುತ್ತಿದ್ದ ಆ ದಿನಗಳು ಈಗಲೂ ನೆನಪಾಗುತ್ತದೆ ಎಂದು ಯಶ್ ಕರ್ನಾಟಕ ರಾಜ್ಯ ಸಾರಿಗೆ ನೌಕರರ ಒಕ್ಕೂಟಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇದು ನನ್ನ ಅಪ್ಪನ ಕತೆ ಮಾತ್ರವಲ್ಲ. ಕರ್ತವ್ಯ ನಿಷ್ಠೆ ಮೆರೆಯುವ ಸಾವಿರಾರು ಸಾರಿಗೆ ನೌಕರರ ದಿನಚರಿ ಹೀಗೆ ಇರುತ್ತದೆ. ಸಾರಿಗೆ ಸಂಸ್ಥೆ ನೌಕರರು ಮತ್ತು ಪ್ರಯಾಣಿಕರ ನಡುವಿನ ಸಂಬಂಧ ಹಾಗೂ ಸಹಕಾರ ಲೆಕ್ಕವಿಲ್ಲದಷ್ಟು ಗೆಳೆತನಗಳಿಗೆ ಸಾಕ್ಷಿಯಾಗಿವೆ. ಆದರೆ, ನಮ್ಮ ಸಾರಿಗೆ ಸಂಸ್ಥೆ ನೌಕರರ ಸಂಬಳದ ತಾರತಮ್ಯವಿರಬಹುದು, ರಜೆಗಳಿಗಾಗಿ ನಡೆಯುವ ತಕರಾರುಗಳಿರಬಹುದು, ಓವರ್ ಡ್ಯೂಟಿಗಳಿಗಾಗಿ ನಡೆಯುವ ಜಟಾಪಟಿಗಳಿರಬಹುದು ಎಲ್ಲವನ್ನೂ ನಾನು ಹತ್ತಿರದಿಂದ ಬಲ್ಲವನು ಎಂದಿದ್ದಾರೆ.

ಸಮಾಧಾನ ವಿಷಯ ಅಂದರೆ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರಿಗೆ ಸಾರಿಗೆ ನೌಕರರ ಬೇಡಿಕೆ ಬಗ್ಗೆ ಇದ್ದ ಅರಿವು ಮತ್ತು ಕಳಕಳಿ, ಜತೆಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಾರಿಗೆ ನೌಕರರ ಮುಖ್ಯ ಬೇಡಿಕೆಯಾದ ವೇತನ ತಾರತಮ್ಯವನ್ನು ತಪ್ಪದೇ ಈಡೇರಿಸುವ ಭರವಸೆಯನ್ನು ನನಗೆ ಕೊಟ್ಟಿದ್ದು ಮತ್ತಷ್ಟು ಖುಷಿಕೊಟ್ಟಿದೆ ಎಂದಿದ್ದಾರೆ.

ಮುಕ್ತ ಮನಸ್ಸುಗಳ ಬಿಚ್ಚು ಮಾತು ಈ ಸಮಸ್ಯೆಗೆ ಪರಿಹಾರವಾಗಬಲ್ಲದು ಎಂಬುದು ನನ್ನ ದೃಢ ವಿಶ್ವಾಸ. ವಿರಸ ಬಿಟ್ಟು ಸಾಮರಸ್ಯದೊಂದಿಗೆ ಮುನ್ನಡೆಯೋಣ. ಪ್ರೀತಿಯ ಸಾರಿಗೆ ನೌಕರರ ಕುಟುಂಬಕ್ಕೆ ನಿಮ್ಮ ಯಶ್‍ನ ನಮಸ್ಕಾರಗಳು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಸಾರಿಗೆ ನೌಕರರ ಕೂಟದ ಮುಖಂಡರು ಯಶ್ ಅವರಿಗೆ ಪತ್ರ ಬರೆದು, ನಿಮ್ಮ ತಂದೆ ಸಾರಿಗೆ ನೌಕರರಾಗಿದ್ದರು. ನಿಮಗೆ ಅವರ ಕಷ್ಟದ ಅರಿವಿದೆ. ಮುಷ್ಕರಕ್ಕೆ ನಿಮ್ಮ ಬೆಂಬಲ ನೀಡಿ ಎಂದು ಮನವಿ ಮಾಡಿದ್ದರು.

ಸಮಸ್ಯೆ ಮನವರಿಕೆಗೆ ಯತ್ನ

ನ್ಯಾಯ ಕೊಡಿ ಎಂದು ಪ್ರಾಮಾಣಿಕವಾಗಿ ಹೋರಾಟಕ್ಕಿಳಿದಿರುವ ಸಾರಿಗೆ ನೌಕರರ ಕೂಗು ಮತ್ತು ಸಾರಿಗೆ ಬಸ್‍ಗಳ ಮೇಲೆಯೇ ಅವಲಂಬಿತವಾಗಿರುವ ಮಧ್ಯಮವರ್ಗದ ಜನರ ಅಳಲು ಈ ಎರಡೂ ನನ್ನನ್ನು ಬಹುವಾಗಿ ಕಾಡುತ್ತಿವೆ. ದೊಡ್ಡ ಸಮಸ್ಯೆಯೊಂದರ ಪರಿಹಾರಕ್ಕೆ ಚಿಕ್ಕ ಪ್ರಯತ್ನವೆಂಬಂತೆ ಸನ್ಮಾನ್ಯ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರೊಂದಿಗೆ ಈ ಬಗ್ಗೆ ವಿವರವಾಗಿ ಮಾತನಾಡಿ, ಸಾರಿಗೆ ನೌಕರರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇನೆ.

-ಯಶ್, ಕನ್ನಡ ಚಲನಚಿತ್ರ ನಟ

ಯಶ್ ಅವರ ಪತ್ರ ....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News