ಜನಾದೇಶ ಒಪ್ಪಿಕೊಂಡು ಇನ್ನಾದರೂ ನಮಗೆ ಕೆಲಸ ಮಾಡಲು ಬಿಡಿ: ಕೇಂದ್ರ ವಿರುದ್ಧ ಗುಡುಗಿದ ದೀದಿ

Update: 2021-05-07 03:59 GMT

ಕೊಲ್ಕತ್ತಾ, ಮೇ 7: "ಜನಾದೇಶವನ್ನು ಒಪ್ಪಿಕೊಳ್ಳುವುದನ್ನು ಇನ್ನಾದರೂ ಕಲಿತುಕೊಂಡು, ನಮ್ಮ ಪಾಡಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ" ಎಂದು ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತಿನ ಚಾಟಿ ಬೀಸಿದ್ದಾರೆ.

ರಾಜ್ಯದಲ್ಲಿ ಕೇಂದ್ರ ಸಚಿವರು ಕೋಮುಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿರುವ ದೀದಿ, "ನಿಮ್ಮೊಂದಿಗೆ ಈ ಪರಿಸ್ಥಿತಿಯಲ್ಲಿ ಜಗಳ ಮಾಡಲು ನಾವು ಬಯಸುವುದಿಲ್ಲ" ಎಂದು ಹೇಳಿದ್ದಾರೆ.

"ಬುಧವಾರ ಬೆಳಗ್ಗೆ 10:45ಕ್ಕೆ ನಾವು ಅಧಿಕಾರ ಸ್ವೀಕರಿಸಿದ್ದೇವೆ. ಕೇಂದ್ರ ಸರ್ಕಾರದ ಮೊದಲ ಕಟುಪತ್ರ ಸಂಜೆ 7ರ ವೇಳೆಗೆ ನಮ್ಮ ಕೈಸೇರಿದೆ. ಗುರುವಾರ ಬೆಳಗ್ಗೆ ಕೇಂದ್ರ ತಂಡ ಬಂದಿಳಿದಿದೆ. ಕೇಂದ್ರ ತಂಡ ಆಮ್ಲಜನಕ ಅಥವಾ ಲಸಿಕೆ ಕೊರತೆ ಬಗ್ಗೆ ಕೇಳಿದೆಯೇ? ಹತ್ರಾಸ್ ಸಾಮೂಹಿಕ ಅತ್ಯಾಚಾರ ನಡೆದಾಗ ಮತ್ತು ದಿಲ್ಲಿ ಗಲಭೆ ವೇಳೆ ಕೂಡಾ ಕೇಂದ್ರ ಇಷ್ಟೇ ಸಕ್ರಿಯವಾಗಿರಬೇಕಿತ್ತು ಎಂದು ನಾವು ಬಯಸುತ್ತೇವೆ" ಎಂದು ವಾಗ್ದಾಳಿ ನಡೆಸಿದರು.

ಚುನಾವಣೋತ್ತರ ಹಿಂಸಾಚಾರದಲ್ಲಿ ಬಲಿಯಾದ 16 ಮಂದಿಯ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಅವರು ಘೋಷಿಸಿದರು. ಈ ಪೈಕಿ ಬಹುತೇಕ ಎಲ್ಲ ಸಾವು ಮೇ 3ರ ಮೊದಲು ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದ ಅವಧಿಯಲ್ಲಿ ಸಂಭವಿಸಿವೆ. ಆಗ ಕಾನೂನು ಹಾಗೂ ಸುವ್ಯವಸ್ಥೆ ಚುನಾವಣಾ ಆಯೋಗದ ಕೈಲಿತ್ತು" ಎಂದು ಮಮತಾ ಹೇಳಿದರು.

"ಒಳ್ಳೆಯ ದೃಶ್ಯಗಳೇ ಉಳಿಯಲಿ. ಸಾಕಷ್ಟು ನಕಲಿ ವಿಡಿಯೊಗಳು ಹರಿದಾಡುತ್ತಿವೆ. ಜನರನ್ನು ಪ್ರಚೋದಿಸುವುದು ನಿಲ್ಲಿಸಿ. ನನಗೆ ಬುಧವಾರ ರಾತ್ರಿ ಮಹಿಳೆಯ ಮೇಲೆ ಹಲ್ಲೆ ಮಾಡುತ್ತಿರುವ ನಕಲಿ ವಿಡಿಯೊ ಕಳುಹಿಸಲಾಗಿದೆ. ಆದರೆ ವಾಸ್ತವವಾಗಿ ಅದು ಮರ ಬಿದ್ದ ವಿವಾದಕ್ಕೆ ಸಂಬಂಧಿಸಿದ್ದು" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News