ಹಗಲು ಕಂಡ ಬಾವಿಗೆ ರಾತ್ರಿ ಬೀಳುವ ಕಾಂಗ್ರೆಸ್ ನಾಯಕರು

Update: 2021-05-25 17:43 GMT

ಮಾನ್ಯರೇ,

ಹಗಲು ಕಂಡ ಬಾವಿಯನ್ನು ರಾತ್ರಿ ತಾವಾಗಿ ಹುಡುಕಿಕೊಂಡು ಹೋಗಿ ಬೀಳುವವರಿಗೆ ಅತ್ಯುತ್ತಮ ಉದಾಹರಣೆ ಯಾರು ಗೊತ್ತೇ? ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರು!.

ಐಎಂಎ ಎಂಬ ಹಗರಣವೊಂದು ನಡೆದು ಸಾವಿರಾರು ಜನರು ಸಾವಿರಾರು ಕೋಟಿ ರೂ. ಕಳಕೊಂಡ ನೆನಪು ಇನ್ನೂ ಮಾಸಿಲ್ಲ. ಆಗಲೇ ಚಿನ್ನಾಭರಣ ಅಂಗಡಿಯ ಹೆಸರಲ್ಲಿ ಉದ್ಯಮ ನಡೆಸುವ ಇನ್ನೊಬ್ಬ ವ್ಯಕ್ತಿಯ ಅಂಗಡಿ ಬಾಗಿಲಿಗೆ ಹೋಗಿ ಆತನೊಂದಿಗೆ ಫೋಟೊಕ್ಕೆ ಪೋಸ್ ನೀಡಿ ಬಂದಿದ್ದಾರೆ ರಾಜ್ಯ ಕಾಂಗ್ರೆಸ್‌ನ ಮುಂಚೂಣಿ ನಾಯಕರು. ಅದೂ ಆತ 25 ಲಕ್ಷ ರೂ.ಯ ಆಕ್ಸಿಜನ್ ಕಾನ್ಸಂಟ್ರೇಟರ್ ಕೊಡುತ್ತೇನೆ ಅಂದಿದ್ದಕ್ಕೆ. ಇದಕ್ಕೆ ಏನು ಹೇಳಬೇಕು? ಆತ ತನ್ನದೇ ಇಷ್ಟೆತ್ತರದ ಫೋಟೊ ಇಟ್ಟುಕೊಂಡು ಮದುವೆ ಗಂಡಿನಂತೆ ಸಿಂಗರಿಸಿಕೊಂಡು ಇವರ ಜೊತೆ ಕೂತಿದ್ದಾನೆ. ಇದೇ ದಾನ ಶೂರ ಒಂದೆರಡು ವರ್ಷದ ಹಿಂದೆ ಕಳವು ಚಿನ್ನ ಖರೀದಿ ಮಾಡಿದ ಹಾಗೂ ದರೋಡೆ ಪ್ರಕರಣದಲ್ಲಿ ಬಂಧಿತನಾದವನು! 25 ಲಕ್ಷ ರೂ. ಪರಿಹಾರವನ್ನು ಆತನೇ ತಂದು ಕೆಪಿಸಿಸಿ ಕಚೇರಿಗೆ ಕೊಟ್ಟು ಹೋಗಲು ಹೇಳುವಷ್ಟು ವಿವೇಕ ಕಾಂಗ್ರೆಸ್ ನಾಯಕರಿಗೆ ಇಲ್ಲವಾಯಿತೇ? ಆತನ ಜೊತೆ ಈ ನಾಯಕರ ಫೋಟೊ, ವೀಡಿಯೊಗಳನ್ನು ನೋಡಿ ಆತನ ಬಳಿ ಜನ ಹೂಡಿಕೆ ಮಾಡಿ ನಾಳೆ ಏನಾದರೂ ಆಗಬಾರದ್ದು ಆದರೆ ಆ ಜನರಿಗೆ ಇವರು ನ್ಯಾಯ ಕೊಡಿಸುತ್ತಾರಾ? ಸದ್ಯದ ಪರಿಸ್ಥಿತಿ ನೋಡಿದರೆ ನಾಳೆ ಆತನೇ ಬೆಂಗಳೂರಿನ ಯಾವುದಾದರೂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಆಶ್ಚರ್ಯವಿಲ್ಲ!

Writer - ಹುಸೇನ್ ಪಾಳ್ಯ, ಹಾಸನ

contributor

Editor - ಹುಸೇನ್ ಪಾಳ್ಯ, ಹಾಸನ

contributor

Similar News