ಭಾರತದಲ್ಲಿ 9.2 ಲಕ್ಷಕ್ಕೂ ಹೆಚ್ಚು ಮಕ್ಕಳು 'ತೀವ್ರ ಅಪೌಷ್ಟಿಕತೆ’ಯಿಂದ ಬಳಲುತ್ತಿದ್ದಾರೆ: ಆರ್ ಟಿಐ

Update: 2021-06-06 15:02 GMT

ಹೊಸದಿಲ್ಲಿ,ಜೂ.6: ಭಾರತದಲ್ಲಿಯ 9.27 ಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಅತ್ಯಂತ ಹೆಚ್ಚು ಮಕ್ಕಳು ಉತ್ತರ ಪ್ರದೇಶದಲ್ಲಿದ್ದು, ನಂತರದ ಸ್ಥಾನದಲ್ಲಿ ಬಿಹಾರ ರಾಜ್ಯವಿದೆ. ಇದು ಕೋವಿಡ್ ಸಾಂಕ್ರಾಮಿಕವು ಕಡುಬಡವರಲ್ಲಿ ಆರೋಗ್ಯ ಮತ್ತು ಪೌಷ್ಟಿಕತೆ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಬಹುದು ಎಂಬ ಕಳವಳಕ್ಕೆ ಪುಷ್ಟಿ ನೀಡಿದೆ.

ಕಳೆದ ವರ್ಷದ ನ.1ರವರೆಗೆ ದೇಶಾದ್ಯಂತ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಆರು ತಿಂಗಳಿನಿಂದ ಆರು ವರ್ಷ ಪ್ರಾಯದ ಅಂದಾಜು 9,27,606 ಮಕ್ಕಳನ್ನು ಗುರುತಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸುದ್ದಿಸಂಸ್ಥೆ ಪಿಟಿಐ ಸಲ್ಲಿಸಿದ್ದ ಆರ್ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ತಿಳಿಸಿದೆ.

ಈ ಪೈಕಿ ಅತ್ಯಧಿಕ (3,98,359) ಮಕ್ಕಳು ಉತ್ತರ ಪ್ರದೇಶದಲ್ಲಿದ್ದರೆ ಬಿಹಾರದಲ್ಲಿ 2,79,427 ಮಕ್ಕಳಿದ್ದಾರೆ. ಮಹಾರಾಷ್ಟ್ರ (70665), ಗುಜರಾತ (45,749),ಛತ್ತೀಸ್ಗಡ (37,249),ಒಡಿಶಾ (15,595),ತಮಿಳುನಾಡು (12,489),ಜಾರ್ಖಂಡ್ (12,059),ಆಂಧ್ರಪ್ರದೇಶ (11,201),ತೆಲಂಗಾಣ (9,045), ಅಸ್ಸಾಂ (7,218),ಕರ್ನಾಟಕ (6,899),ಕೇರಳ (6,188) ಮತ್ತು ರಾಜಸ್ಥಾನ (5,732) ನಂತರದ ಸ್ಥಾನಗಳಲ್ಲಿವೆ. 

2011ರ ಜನಗಣತಿಯಂತೆ 
ಉತ್ತರ ಪ್ರದೇಶ ಮತ್ತು ಬಿಹಾರಗಳು ಆರು ವರ್ಷ ಪ್ರಾಯದವರೆಗಿನ ಅತ್ಯಧಿಕ ಸಂಖ್ಯೆಯ (ಅನುಕ್ರಮವಾಗಿ 2.97 ಕೋಟಿ ಮತ್ತು 1.85 ಕೋಟಿ) ಮಕ್ಕಳನ್ನು ಹೊಂದಿವೆ.
ಲಡಾಖ್, ಲಕ್ಷದ್ವೀಪ, ನಾಗಾಲ್ಯಾಂಡ್,ಮಣಿಪುರ ಮತ್ತು ಮಧ್ಯಪ್ರದೇಶಗಳಲ್ಲಿ ಕುಪೋಷಿತ ಮಕ್ಕಳು ಇರುವುದು ವರದಿಯಾಗಿಲ್ಲ. ಲಡಾಖ್ ಹೊರತುಪಡಿಸಿ ಇತರ ನಾಲ್ಕು ಕಡೆಗಳಲ್ಲಿಯ ಅಂಗನವಾಡಿ ಕೇಂದ್ರಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ದತ್ತಾಂಶಗಳನ್ನು ಒದಗಿಸಿಲ್ಲ ಎಂದು ಸಚಿವಾಲಯವು ತಿಳಿಸಿದೆ.

 ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ)ಯು ಮಕ್ಕಳಲ್ಲಿ ನ್ಯೂಟ್ರಿಷನಲ್ ಎಡಿಮಾ ಅಥವಾ ಪೌಷ್ಟಿಕಾಂಶ ದ್ರವಶೋಥ (ಊತ)ವಿದ್ದರೆ,ಎತ್ತರಕ್ಕೆ ಹೋಲಿಸಿದರೆ ದೇಹತೂಕ ತುಂಬ ಕಡಿಮೆಯಿದ್ದರೆ ಮತ್ತು ಮೇಲುತೋಳಿನ ಮಧ್ಯಭಾಗದ ಸುತ್ತಳತೆ 115 ಮಿ.ಮೀ.ಗಿಂತ ಕಡಿಮೆಯಿದ್ದರೆ ಅಂತಹ ಸ್ಥಿತಿಯನ್ನು ‘ತೀವ್ರ ದೀರ್ಘಕಾಲಿಕ ಅಪೌಷ್ಟಿಕತೆ (ಎಸ್ಎಎಂ)’ ಎಂದು ವ್ಯಾಖ್ಯಾನಿಸಿದೆ. 

ಎಸ್ಎಎಮ್ನಿಂದ ಬಳಲುತ್ತಿರುವ ಮಕ್ಕಳು ಅನಾರೋಗ್ಯಪೀಡಿತರಾದರೆ ತಮ್ಮ ದುರ್ಬಲ ನಿರೋಧಕ ವ್ಯವಸ್ಥೆಯಿಂದಾಗಿ ಸಾಯುವ ಸಾಧ್ಯತೆ ಒಂಭತ್ತು ಪಟ್ಟು ಹೆಚ್ಚಾಗಿರುತ್ತದೆ.
  ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಶೀಘ್ರ ವೈದ್ಯಕೀಯ ನೆರವು ಒದಗಿಸಲು ಅಂತಹ ಮಕ್ಕಳನ್ನು ಗುರುತಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಕಳೆದ ವರ್ಷ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು. ಈ ಪ್ರಕ್ರಿಯೆಯ ಬಳಿಕ ಲಭ್ಯವಾಗಿರುವ ಇಂತಹ ಮಕ್ಕಳ ಸಂಖ್ಯೆಯನ್ನು ಕೀಳಂದಾಜು ಮಾಡುವಂತಿಲ್ಲ ಮತ್ತು ಮೂರನೇ ಅಲೆಯು ಮಕ್ಕಳನ್ನು ಹೆಚ್ಚು ಬಾಧಿಸಲಿದೆ ಎಂಬ ಭೀತಿಯನ್ನೊಡ್ಡಿರುವ ಹಾಲಿ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಇಂತಹ ಮಕ್ಕಳ ಸಂಖ್ಯೆಯು ಇನ್ನಷ್ಟು ಹೆಚ್ಚಬಹುದು ಎಂಬ ಕಳವಳ ಸೃಷ್ಟಿಯಾಗಿದೆ.
 
ನಿರುದ್ಯೋಗ ಮತ್ತು ಕುಟುಂಬಗಳ ಆರ್ಥಿಕ ಮುಗ್ಗಟ್ಟು ಹೆಚ್ಚುತ್ತಿದ್ದು,ಇದರ ನೇರ ಪರಿಣಾಮ ಹಸಿವೆಯ ಮೇಲೆ ಉಂಟಾಗುತ್ತದೆ. ಹಸಿವು ನೀಗದಿದ್ದಾಗ ಅದು ಅಪೌಷ್ಟಿಕತೆಗೆ ಕಾರಣವಾಗುತ್ತದೆ. ಸರಕಾರವು ಸ್ಪಷ್ಟವಾದ ಶಿಷ್ಟಾಚಾರವನ್ನು ಹೊಂದಿದೆಯಾದರೂ ಈಗ ಅದನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದ ಎಚ್ಎಕ್ಯೂ ಸೆಂಟರ್ ಫಾರ್ ಚೈಲ್ಡ್ ರೈಟ್ಸ್ ನ ಸಹಸಂಸ್ಥಾಪಕಿ ಏಣಾಕ್ಷಿ ಗಂಗೂಲಿ ಅವರು,ಮಕ್ಕಳಲ್ಲಿ ಪೌಷ್ಟಿಕತೆಯನ್ನು ಹೆಚ್ಚಿಸಲು ನೆರವಾಗುವಲ್ಲಿ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರವನ್ನು ಹೊಂದಿವೆ. ಲಾಕ್ಡೌನ್ ನಿಂದಾಗಿ ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ಬರಲು ಸಾಧ್ಯವಿಲ್ಲದಿದ್ದಾಗ ಈ ಕೇಂದ್ರಗಳು ಮಕ್ಕಳ ಮನೆಗಳಿಗೇ ಪೌಷ್ಟಿಕ ಆಹಾರವನ್ನು ತಲುಪಿಸಬೇಕು. ಈ ನಿಟ್ಟಿನಲ್ಲಿ ಸರಕಾರ ಯಾವ ಯೋಜನೆಯನ್ನು ಹೊಂದಿದೆ ಎಂದು ಪ್ರಶ್ನಿಸಿದರು.

ಮೂರನೇ ಅಲೆಯು ಮಕ್ಕಳನ್ನು ಹೆಚ್ಚಾಗಿ ಕಾಡಲಿದೆ ಎಂಬ ಭವಿಷ್ಯ ನಿಜವಾದರೆ ಅಪೌಷ್ಟಿಕತೆಯು ಅತ್ಯಂತ ದೊಡ್ಡ ಸಹ ಅನಾರೋಗ್ಯವಾಗಲಿದೆ ಮತ್ತು ಸರಕಾರವು ಇದನ್ನು ಹೇಗೆ ಎದುರಿಸಲಿದೆ ಎನ್ನುವುದು ಮುಖ್ಯ ಪ್ರಶ್ನೆಯಾಗಿದೆ ಎಂದು ರೈಸ್ ಅಗೇನ್ಸ್ಟ್ ಹಂಗರ್ ಇಂಡಿಯಾದ ಕಾರ್ಯಕಾರಿ ನಿರ್ದೇಶಕ ಡೋಲಾ ಮೊಹಾಪಾತ್ರಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News