ಉತ್ತರಪ್ರದೇಶದ ಗ್ರಾಮದಲ್ಲಿ ನಿರ್ಮಿಸಿದ್ದ ಕೊರೋನ ಮಾತಾ ದೇವಾಲಯ ನೆಲಸಮ
ಪ್ರತಾಪ್ಗಢ : ಸೋಂಕಿನಿಂದ ದೂರವಿರಲು ದೇವರ ಅನುಗ್ರಹವನ್ನು ಕೋರಿ ಇಲ್ಲಿನ ಜುಹಿ ಶುಕುಲ್ಪುರ ಗ್ರಾಮದ ಜನರು "ಕೊರೋನಾ ಮಾತಾ" ದೇವಾಲಯವನ್ನು ನಿರ್ಮಿಸಿದ್ದರು. ಆದರೆ, ಜೂನ್ 7 ರಂದು ನಿರ್ಮಿಸಲಾಗಿದ್ದ ದೇವಾಲಯವನ್ನು ಶುಕ್ರವಾರ ರಾತ್ರಿ ನೆಲಸಮ ಮಾಡಲಾಗಿದೆ.
ಇದನ್ನು ಪೊಲೀಸರು ಕೆಡವಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ. ಇದನ್ನು ವಿವಾದಿತ ಸ್ಥಳದಲ್ಲಿ ನಿರ್ಮಿಸಲಾಗಿದೆ ಹಾಗೂ ಮಂದಿರ ನಿರ್ಮಾಣವನ್ನು ವಿರೋಧಿಸುತ್ತಿದ್ದವರು ಅದನ್ನು ಧ್ವಂಸ ಗೊಳಿಸಿದ್ದಾರೆ ಎಂದು ಹೇಳಿದರು.
ಸ್ಥಳೀಯ ನಿವಾಸಿಗಳ ದೇಣಿಗೆಯ ಸಹಾಯದಿಂದ ಲೋಕೇಶ್ ಕುಮಾರ್ ಶ್ರೀವಾಸ್ತವ ಅವರು ಐದು ದಿನಗಳ ಹಿಂದೆ ಈ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಶ್ತೀವಾ್ಸ್ತವ ಅವರು "ಕೊರೋನ ಮಾತಾ" ವಿಗ್ರಹವನ್ನು ಸ್ಥಾಪಿಸಿದ್ದರು. ಗ್ರಾಮದ ರಾಧೆ ಶ್ಯಾಮ್ ವರ್ಮಾ ಅವರನ್ನು ಅದರ ಅರ್ಚಕರಾಗಿ ನೇಮಿಸಲಾಯಿತು, ನಂತರ ಜನರು ಅಲ್ಲಿ ಪ್ರಾರ್ಥನೆ ಸಲ್ಲಿಸಲು ಆರಂಭಿಸಿದರು.
ನೋಯ್ಡಾದಲ್ಲಿ ವಾಸವಾಗಿರುವ ಲೋಕೇಶ್, ನಾಗೇಶ್ ಕುಮಾರ್ ಶ್ರೀವಾಸ್ತವ ಹಾಗೂ ಜೈ ಪ್ರಕಾಶ್ ಶ್ರೀವಾಸ್ತವ ಅವರೊಂದಿಗೆ ಜಂಟಿಯಾಗಿ ಭೂಮಿಯನ್ನು ಹೊಂದಿದ್ದಾರೆ. ದೇವಾಲಯವನ್ನು ನಿರ್ಮಿಸಿದ ನಂತರ ಲೋಕೇಶ್ ಅವರು ಹಳ್ಳಿಯಿಂದ ನೋಯ್ಡಾಕ್ಕೆ ಹೋಗಿದ್ದರು. ಭೂಮಿಯನ್ನು ಅತಿಕ್ರಮಿಸಿಕೊಳ್ಳಲು ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ನಾಗೇಶ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.