ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗೆ ಮೀಸಲಾತಿ ಶೇ.50ಕ್ಕೆ ಹೆಚ್ಚಳ: ಸಚಿವ ಬಿ.ಸಿ.ಪಾಟೀಲ್

Update: 2021-06-22 09:49 GMT

ಬೆಂಗಳೂರು, ಜೂ.22: 2021-22ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ರೈತರ ಮಕ್ಕಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ. 40 ರಿಂದ ಶೇ. 50ಕ್ಕೆ ಏರಿಸಿ ಸಂಪುಟ ಸಭೆ ಅಸ್ತು ಎಂದಿರುವುದಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಹರ್ಷ ವ್ಯಕ್ತಪಡಿಸಿದ್ದಾರೆ.

2014ರ ಜು.5ರಂದು ಬಿ.ಎಸ್ಸಿ(ಎಜಿ ) ಮತ್ತು ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಸಮಾನ ಪದವಿಗಳಿಗೆ ಪ್ರವೇಶಕ್ಕಾಗಿ ಪ್ರಸ್ತುತ ಮೀಸಲಾತಿಯನ್ನು ಶೇ.40ಕ್ಕೆ ನಿಗಧಿಪಡಿಸಲಾಗಿತ್ತು. ರೈತಾಪಿ ಮಕ್ಕಳ ಅನುಕೂಲಕ್ಕಾಗಿ ಇನ್ನಷ್ಟು ಮೀಸಲಾತಿ ಹೆಚ್ಚಿಸಿದಲ್ಲಿ ಕೃಷಿ ಪದವೀಧರರು ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ಯಮದಾರರಾಗಿ ಕೃಷಿಯಲ್ಲಿ ಯಶಸ್ವಿ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಗ್ರಾಮೀಣ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವ ಉದ್ದಿಮೆದಾರರಾಗುತ್ತಾರೆ ಎಂದು ಅವರು ಹೇಳಿದ್ದಾರೆ.

ಆದುದರಿಂದ, ಮೀಸಲಾತಿಯನ್ನು ಶೇ.10%ರಷ್ಟು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಿ, ಈ ಸಂಬಂಧ ಕೃಷಿ ವಿಶ್ವವಿದ್ಯಾಲಯಗಳ ಜೊತೆಯೂ ಚರ್ಚಿಸಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಕೆಲವು ದಿನಗಳ ಹಿಂದೆ ತಮ್ಮ ಅಧ್ಯಕ್ಷತೆಯಲ್ಲಿ ಕೃಷಿ ವಿಶ್ವವಿದ್ಯಾಲಯಗಳ ಸಮನ್ವಯ ಸಮಿತಿಯ ಸಭೆ ನಡೆದಿದ್ದು, ಸಭೆಯಲ್ಲಿ ಮೀಸಲಾತಿ ಹೆಚ್ಚಳ ಕುರಿತು ಸುದೀರ್ಘ ಹಾಗೂ ಸಮಗ್ರ ಚರ್ಚೆ ನಡೆಸಿ ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಮೀಸಲಿಟ್ಟಿರುವ ಸೀಟುಗಳ ಪ್ರಮಾಣವನ್ನು ಶೇ.40 ರಿಂದ 50 ರವರೆಗೆ ಹೆಚ್ಚಿಸಲು ನಿರ್ಧರಿಸಲಾಯಿತು ಎಂದು ಅವರು ಹೇಳಿದ್ದಾರೆ.

ರೈತರ ಅಭಿವೃದ್ಧಿಯ ಉದ್ದೇಶಿತ ಪ್ರಸ್ತಾವವನ್ನು ಸಚಿವ ಸಂಪುಟದ ಸಭೆಯು ಸೋಮವಾರ ಇದಕ್ಕೆ ಅಸ್ತು ಎಂದಿದೆ. ನಗರ ಮತ್ತು ಪಟ್ಟಣದ ಮಕ್ಕಳನ್ನು ಹೋಲಿಸಿದರೆ ರೈತರು ಮತ್ತು ಕೃಷಿ ಕಾರ್ಮಿಕರ ಮಕ್ಕಳ ಸಾಮಾಜಿಕ-ಆರ್ಥಿಕ ಸ್ಥಿತಿ ಮತ್ತು ಶೈಕ್ಷಣಿಕ ಸೌಲಭ್ಯಗಳ ಗುಣಮಟ್ಟವನ್ನು ಬಲವರ್ಧಿಸಲು ಅವಶ್ಯಕತೆಗಳನ್ನು ಕಲ್ಪಿಸಿದಂತಾಗುತ್ತದೆ ಎಂದು ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ರೈತರ ಅಭಿವೃದ್ಧಿಗೆ ಸಹಕರಿಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿರುವ ಬಿ.ಸಿ.ಪಾಟೀಲ್, ಕೃಷಿ ಪದವಿಯನ್ನು ವ್ಯಾಸಾಂಗ ಮಾಡಿದ ನಂತರ ರೈತರ ಮಕ್ಕಳು ಕೃಷಿ ವೈಜ್ಞಾನಿಕ ಪತಿ ಕೃಷಿ ಚಟುವಟಿಕೆಯನ್ನು ಮಾಡುವುದರ ಜೊತೆಗೆ ಹಲವು ವರ್ಗದ / ಕ್ಷೇತ್ರದ ವಿಷಯಗಳಾದ ಅಗ್ರಾನಮಿ , ಮಣ್ಣು ವಿಜ್ಞಾನ ಪಾಂಟ್ ಜೆನೆಟಿಕ್ಸ್ ಹಾಗೂ ಇತರೆ ವಿಷಯಗಳ ಜ್ಞಾನಹೊಂದಿರುವುದರಿಂದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಜೊತೆಗೆ ಹಲವು ಕ್ಷೇತ್ರಗಳಲ್ಲಿಯೂ ಈ ವಿದ್ಯಾರ್ಥಿಗಳಿಗೆ ವೃತ್ತಿಯ ಅವಕಾಶ ಅವಕಾಶ ಹೆಚ್ಚಾಗಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಕೃಷಿ ಪದವೀಧರರು ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ದಿಮೆದಾರರಾಗಿ ಕೃಷಿಯಲ್ಲಿ ಯಶಸ್ವಿ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ, ಗ್ರಾಮೀಣ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಒದಗಿಸುವ ಉದ್ದಿಮೆದಾರರಾಗಲು ಕಲ್ಪಿಸಿದಂತಾಗುತ್ತದೆ ಎಂದು ಬಿ.ಸಿ.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News