ದೇಶದ ಪ್ರತಿಯೊಬ್ಬ ಪ್ರಜೆಗೂ ಸರಕಾರ ಉಚಿತ ಲಸಿಕೆ ನೀಡಬೇಕು: ರಾಮಲಿಂಗಾರೆಡ್ಡಿ

Update: 2021-06-22 10:17 GMT

ಬೆಂಗಳೂರು, ಜೂ. 22: ದೇಶದ ಶೇ.75ರಷ್ಟು ಜನರಿಗೆ ಉಚಿತವಾಗಿ ಲಸಿಕೆ ನೀಡುವ ಸರಕಾರ ಉಳಿದ ಶೇ.25ರಷ್ಟು ಜನಕ್ಕೆ ಯಾಕೆ ಖಾಸಗಿಯವರ ಮೂಲಕ ನೀಡುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಗೂ ಸರಕಾರವೇ ಉಚಿತ ಲಸಿಕೆಯನ್ನು ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಅವರು ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.75ರಷ್ಟು ಜನರಿಗೆ ಉಚಿತವಾಗಿ ಲಸಿಕೆ ನೀಡುವ ಸರಕಾರ ಉಳಿದ ಶೇ.25ರಷ್ಟು ಜನರಿಗೆ ಯಾಕೆ ಉಚಿತ ಲಸಿಕೆ ನೀಡಲು ಸಾಧ್ಯವಿಲ್ಲ ? ಈ ಶೇ.25ರಷ್ಟು ಜನರನ್ನು ಹೇಗೆ ವರ್ಗೀಕರಣ ಮಾಡಲಾಗುತ್ತದೆ ? ಎಂದು ಪ್ರಶ್ನಿಸಿದರು.

ಕೇಂದ್ರ ಸರಕಾರಕ್ಕೆ ಲಸಿಕೆ ವಿಚಾರವಾಗಿ ಸಾಕಷ್ಟು ಗೊಂದಲಗಳಿವೆ. ಕೋವಿಡ್ ಮೊದಲ ಅಲೆ ಬಂದಾಗಲೇ ಸರಕಾರ ಎಚ್ಚರ ವಹಿಸಬೇಕಿತ್ತು. ಲಸಿಕೆ ತಯಾರಿಕೆ ವಿಚಾರವಾಗಿ ಸರಕಾರ ಕಾರ್ಯಪ್ರವೃತ್ತವಾಗಬೇಕಿತ್ತು. ಲಸಿಕೆ ಉತ್ಪಾದಿಸಲು ಇತರ ಕಂಪನಿಗಳಿಗೆ ಅವಕಾಶ ಕಲ್ಪಿಸಬೇಕಿತ್ತು. ಎರಡನೇ ಅಲೆ ಆರಂಭವಾಗುತ್ತದೆ ಎಂದು ಎಚ್ಚರಿಕೆ ಇದ್ದರೂ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಬಿಹಾರ ಹಾಗೂ ಪಶ್ಚಿಮ ಬಂಗಾಳ ಚುನಾವಣೆ ಸಮಯದಲ್ಲೂ ಬಿಜೆಪಿ ಸರಕಾರ ಉಚಿತ ಲಸಿಕೆ ಘೋಷಿಸಿತ್ತು. ಆದರೆ ನಂತರ ಮುಂಚೂಣಿ ವಾರಿಯರ್ಸ್, ಆನಂತರ ಹಿರಿಯರಿಗೆ, ತದನಂತರ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಎಂದು ಘೋಷಿಸಿದ್ದರು. ವಿರೋಧ ಪಕ್ಷಗಳು, ಮಾಧ್ಯಮಗಳಿಂದ ವ್ಯಾಪಕ ಟೀಕೆ ಆರಂಭವಾದ ನಂತರ, ಲಸಿಕೆ ಇದೆಯೋ ಇಲ್ಲವೋ ಎಂಬುದನ್ನು ಗಮನಿಸದೇ ಪ್ರಧಾನಿ ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಘೋಷಿಸಿದರು ಎಂದು ಅವರು ತಿಳಿಸಿದರು.

ಜವಾಬ್ದಾರಿ ಸ್ಥಾನದಲ್ಲಿ ಕೂತಿರುವ ಪ್ರಧಾನಿ ಲಸಿಕೆ ಲಭ್ಯತೆ ಬಗ್ಗೆ ಚಿಂತಿಸದೇ ಸಾಂಕೇತಿಕವಾಗಿ ಲಸಿಕೆ ಅಭಿಯಾನ ಆರಂಭಿಸಿದರು. ನಂತರ ಕೇಂದ್ರ ಸರಕಾರಕ್ಕೆ, ರಾಜ್ಯ ಸರಕಾರಕ್ಕೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ವಿವಿಧ ದರ ನಿಗದಿ ಮಾಡಿದರು. ಕೋವ್ಯಾಕ್ಸಿನ್ ಬೆಲೆ ಒಂದು ಡೋಸ್ ಗೆ 900 ರಿಂದ 1200 ರೂ.ವರೆಗೂ ನಿಗದಿ ಮಾಡಲಾಯಿತು. ಆ ಮೂಲಕ ಒಬ್ಬ ವ್ಯಕ್ತಿ ಲಸಿಕೆ ಪಡೆಯಲು 1800ರಿಂದ 2400 ರೂ. ವರೆಗೂ ವೆಚ್ಚ ಭರಿಸಬೇಕಾಯಿತು ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಒಂದೆಡೆ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗದಿದ್ದರೆ, ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಲಸಿಕೆ ಪೂರೈಕೆಯಾಗುತ್ತಿತ್ತು. ಕೇಂದ್ರ ಸರಕಾರ ಖಾಸಗಿ ಆಸ್ಪತ್ರೆಗಳಿಗೆ ಉತ್ತೇಜನ ನೀಡಿತ್ತು. ಈ ಬಗ್ಗೆ ಟೀಕೆಗಳು ವ್ಯಕ್ತವಾಯಿತು. ನಂತರ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ವೈದ್ಯಕೀಯ ಸಮಿತಿಯು ಆರೋಗ್ಯ ಮಂತ್ರಿಗಳಿಗೆ ನಿದ್ದೆಯಿಂದ ಎದ್ದೇಳಿ ಎಂದು ಪತ್ರ ಬರೆಯಲಾಯಿತು ಎಂದು ಅವರು ಟೀಕಿಸಿದರು.

ಇದೆಲ್ಲದರ ನಂತರ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಲಸಿಕೆಗಾಗಿ ಮೀಸಲಿಟ್ಟ 35 ಸಾವಿರ ಕೋಟಿ ಹಣದ ಲೆಕ್ಕ ಕೇಳಿದ ನಂತರ ಮೂರು ತಿಂಗಳ ಕಾಲ ಮನೆಯಿಂದಾಚೆಗೆ ಬಾರದ ಪ್ರಧಾನಿ ನರೇಂದ್ರ ಮೋದಿ, 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಎಂದು ಘೋಷಿಸಿದರು ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಕೇಂದ್ರ ಸರಕಾರ ತನ್ನ ನೂತನ ಲಸಿಕೆ ನೀತಿಯಲ್ಲಿ 18-44 ವಯೋಮಾನದವರಲ್ಲಿ ಶೇ.75ರಷ್ಟು ಲಸಿಕೆ ಉಚಿತವಾಗಿ ನೀಡುತ್ತೇವೆ. ಉಳಿದ ಶೇ.25ರಷ್ಟನ್ನು ಖಾಸಗಿ ಆಸ್ಪತ್ರೆಗಳ ವುೂಲಕ ನೀಡುತ್ತೇವೆ ಎಂದು ಹೇಳಿದೆ. ದೇಶದ ಜನಸಂಖ್ಯೆ 138 ಕೋಟಿ ಜನ. ಕೇಂದ್ರ ಸರಕಾರ ಹೇಳುವ ಶೇ.25ರಷ್ಟು ಜನ ಎಂದರೆ ಸುಮಾರು 34.5 ಕೋಟಿಯಷ್ಟು ಜನರು ಬರುತ್ತಾರೆ. ಅದರಲ್ಲಿ ಶೇ.61ರಷ್ಟು ಜನ 18 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅಂದರೆ ಸುಮಾರು 20 ಕೋಟಿ ಜನ 18 ವರ್ಷ ಮೇಲ್ಪಟ್ಟವರು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆಯಬೇಕಾಗಿದೆ ಎಂದು ಅವರು ಹೇಳಿದರು.

ಒಬ್ಬ ವ್ಯಕ್ತಿಗೆ ಪ್ರತಿ ಡೋಸ್ ಗೆ 300 ರೂ.ನಂತೆ ಎರಡು ಡೋಸ್ ಗೆ 600 ರೂ ಖರ್ಚು ಮಾಡಿದರೆ ಸುಮಾರು 54 ಸಾವಿರ ಕೋಟಿ ರೂ.ನಷ್ಟು ವೆಚ್ಚ ತಗುಲುತ್ತದೆ. ಕೇಂದ್ರ ಸರಕಾರ ಈಗಾಗಲೇ 35 ಸಾವಿರ ಕೋಟಿ ರೂ.ಬಜೆಟ್ ನಲ್ಲಿ ಮೀಸಲಿಟ್ಟದ್ದು, ಇನ್ನು 19 ಸಾವಿರ ಕೋಟಿಯನ್ನು ಕೊಟ್ಟರೆ ಈ ಶೇ.25ರಷ್ಟು ಜನರಿಗೂ ಉಚಿತವಾಗಿ ಸರಕಾರವೇ ಲಸಿಕೆ ನೀಡಬಹುದಾಗಿದೆ. ಆಗ ದೇಶದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಿದಂತಾಗುತ್ತದೆ ಎಂದು ರಾಮಲಿಂಗಾರೆಡ್ಡಿ ವಿವರಿಸಿದರು.

ಇದೇ ಶೇ.25ರಷ್ಟು ಜನ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದರೆ ಒಬ್ಬರಿಗೆ ಕನಿಷ್ಠ ಸರಾಸರಿಯಲ್ಲಿ 2 ಸಾವಿರ ರೂ. ನಂತೆ ಎಷ್ಟು ಕೋಟಿ ಹಣ ಖರ್ಚಾಗುತ್ತದೆ ಎಂಬುದನ್ನು ಗಮನಿಸಬೇಕು. ಈ ಶೇ.25ರಷ್ಟು ಜನ ಯಾವ ಪಾಪ ಮಾಡಿದ್ದರು? ಅವರಿಗೆ ಸರಕಾರ ಯಾಕೆ ಉಚಿತ ಲಸಿಕೆ ನೀಡಲು ನಿರಾಕರಿಸುತ್ತದೆ? ಇವರಿಗೆ ಸರಕಾರ ಉಚಿತವಾಗಿ ಲಸಿಕೆ ನೀಡಿದರೆ 8-9 ಸಾವಿರ ಕೋಟಿ ರೂ.ನಲ್ಲಿ ಮುಗಿಯುತ್ತದೆ, ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದರೆ ಜನರಿಗೆ 50 ಸಾವಿರ ಕೋಟಿಗಿಂತ ಹೆಚ್ಚು ಹೊರೆ ಬೀಳುತ್ತದೆ ಎಂದು ಅವರು ಹೇಳಿದರು.

ಇದು ಸರಕಾರದ ದ್ವಂದ್ವ ನೀತಿಗೆ ಸಾಕ್ಷಿ. ಒಬ್ಬೊಬ್ಬರಿಗೆ ಒಂದಂದು ನ್ಯಾಯಾ ಯಾಕೆ ಎಂಬುದು ನಮ್ಮ ಪ್ರಶ್ನೆ. ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡಬೇಕು ಎಂದು ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿಯನ್ನು ಒತ್ತಾಯಿಸುತ್ತದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಮೂರನೇ ಅಲೆ ರಾಜ್ಯದಲ್ಲಿ ಸುಮಾರು 1.50 ಲಕ್ಷ ಮಕ್ಕಳಿಗೆ ಸೋಂಕು ತಗುಲಲಿದೆ ಎಂದು ನಾರಾಯಣ ಹೃದಯಾಲಯದ ತಜ್ಞ ವೈದ್ಯ ಡಾ.ದೇವಿ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಸರಕಾರ ಮೊದಲ ಹಾಗೂ ಎರಡನೇ ಅಲೆಯಲ್ಲಿ ಎಡವಿದ್ದು, ಮೂರನೆ ಅಲೆಯನ್ನು ಎದುರಿಸಲು ಸಿದ್ಧವಾಗಬೇಕು. ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಜೆಪಿ ಸರಕಾರ ಸುಳ್ಳು ಸಾವಿನ ಸಂಖ್ಯೆಗಳನ್ನು ನೀಡಿದೆ ಎಂದು ಅವರು ದೂರಿದರು.

ನಮ್ಮ ರಾಜ್ಯದಲ್ಲೂ 30 ಸಾವಿರ ಮಂದಿ ಸಾವಿನ ಲೆಕ್ಕ ತೋರಿಸುತ್ತಿದ್ದು, 1 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದಾರೆ. ಸರಕಾರ ಮೂರನೇ ಅಲೆ ವಿಚಾರವಾಗಿ ಸರ್ವಪಕ್ಷ ಹಾಗೂ ತಜ್ಞರ ಸಭೆ ಕರೆದು ಎಲ್ಲರ ಸಲಹೆಗಳನ್ನು ಪರಿಗಣಿಸಬೇಕು ಎಂದು ರಾಮಲಿಂಗಾರೆಡ್ಡಿ ಸಲಹೆ ನೀಡಿದರು.

ಇನ್ನು ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರದ ಚರ್ಚೆಗೆ ಸಂಬಂಧಿಸಿದಂತೆ ನಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಎಲ್ಲರಿಗೂ ಸೂಚನೆಯನ್ನು ನೀಡಿದ್ದು, ಪ್ರತಿಯೊಬ್ಬರೂ ಅವರ ನಿರ್ದೇಶನವನ್ನು ಪಾಲಿಸಬೇಕು ಎಂದಷ್ಟೇ ಹೇಳುತ್ತೇನೆ. ಅದನ್ನು ಹೊರತಾಗಿ ಬೇರೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News