ನಿರುದ್ಯೋಗ ಸಮಸ್ಯೆ: ನಿವೃತ್ತ ಮುಖ್ಯಪೇದೆಯ ಪುತ್ರ ಆತ್ಮಹತ್ಯೆ
Update: 2021-06-23 12:31 GMT
ಬೆಂಗಳೂರು, ಜೂ.23: ಹಲವು ದಿನಗಳಿಂದ ಉದ್ಯೋಗವಿಲ್ಲದೇ ನೊಂದ ನಿವೃತ್ತ ಮುಖ್ಯ ಪೊಲೀಸ್ ಪೇದೆಯೊಬ್ಬರ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಗಲಗುಂಟೆಯ ಮಂಜುನಾಥ್(36) ಎಂಬಾತ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ನಗರದ ಪೊಲೀಸ್ ಠಾಣೆಯೊಂದರಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಮುಖ್ಯ ಪೇದೆಯ ಪುತ್ರನಾಗಿರುವ ಮಂಜುನಾಥ್, ಕಳೆದ ಐದು ತಿಂಗಳ ಹಿಂದೆಯಷ್ಟೇ ಪತ್ನಿ ಸ್ವಾತಿಯಿಂದ ವಿಚ್ಛೇದನ ಪಡೆದಿದ್ದರು ಎನ್ನಲಾಗಿದೆ. ಬಳಿಕ ವಾಹನವೊಂದರ ಚಾಲಕನಾಗಿ ದುಡಿಯುತ್ತಿದ್ದರು.
ಆದರೆ, ಕೋವಿಡ್ ಲಾಕ್ಡೌನ್ ಪರಿಣಾಮ ಉದ್ಯೋಗವಿಲ್ಲದೇ ಮನೆಯಲ್ಲಿಯೇ ಇದ್ದರು. ಇದರಿಂದ ನೊಂದು ಮಂಗಳವಾರ ರಾತ್ರಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.