ಆರೆಸ್ಸೆಸ್ ನಾಯಕರು ತುರ್ತುಪರಿಸ್ಥಿತಿ ಬೆಂಬಲಿಸಿದ್ದರು!

Update: 2021-06-29 19:30 GMT

ಈ ವರ್ಷದ ಜೂನ್ 25ರಂದು ಬಿಜೆಪಿ ಮತ್ತು ಆರೆಸ್ಸೆಸ್‌ನವರು ಯಥಾಪ್ರಕಾರ ತಾವು ಹೇಗೆ ಭಾರತವನ್ನು ತುರ್ತುಪರಿಸ್ಥಿತಿಯಿಂದ ಕಾಪಾಡಿದೆವು ಎಂದು ಕೊಚ್ಚಿಕೊಳ್ಳುತ್ತಾ ವಾಜಪೇಯಿ, ಮೊರಾರ್ಜಿ ಹಾಗೂ ಇನ್ನಿತರ ನಾಯಕರ ಬಂಧನದ ಬಗ್ಗೆ ವರದಿ ಮಾಡಿದ್ದ 1977ರ ಜೂನ್ 26ರ ಪತ್ರಿಕೆಗಳ ಮುಖಪುಟವನ್ನು ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದರು. ಮತ್ತು ಏಕೆ ಈ ಪಟ್ಟಿಯಲ್ಲಿ ಪ್ರಜಾತಂತ್ರದ ಬಗ್ಗೆ ಮಾತನಾಡುವ ಸಮಾಜವಾದಿಗಳ, ಕಮ್ಯುನಿಷ್ಟರ ಹೆಸರಿರಲಿಲ್ಲ ಎಂದು ವ್ಯಂಗ್ಯವಾಡಿದ್ದರು. ಆದರೆ ಬಿಜೆಪಿ ನಾಯಕರಿಗಿಂತ ಹೆಚ್ಚಿನ ಸಾವು ನೋವುಗಳನ್ನು ಎಮರ್ಜೆನ್ಸಿಯಲ್ಲಿ ಅನುಭವಿಸಿದವರು ಸಮಾಜವಾದಿಗಳು, ಲೋಹಿಯಾವಾದಿಗಳು, ಸಿಪಿಎಂ ಮತ್ತು ನಕ್ಸಲೈಟ್ ಪಕ್ಷಗಳ ಸಾವಿರಾರು ನಾಯಕರು ಹಾಗೂ ಕಾರ್ಯಕರ್ತರು. ಅದು ಅಂದಿನ ಗೃಹ ಇಲಾಖೆಯ ಕಡತಗಳನ್ನು ಹಾಗೂ ಗುಪ್ತ ವರದಿಗಳನ್ನೂ ಗಮನಿಸಿದರೆ ಗೊತ್ತಾಗುತ್ತದೆ.


ಸ್ವಾತಂತ್ರ್ಯಾನಂತರದ ಭಾರತದ ಅತ್ಯಂತ ಕರಾಳ ಘಟ್ಟ ಇಂದಿರಾಗಾಂಧಿಯವರು ಭಾರತದ ಮೇಲೆ ಹೇರಿದ ತುರ್ತುಪರಿಸ್ಥಿತಿಯ 20 ತಿಂಗಳುಗಳು. ಆದರೆ ಅದನ್ನು ಮರೆಸುವಂತೆ ಮತ್ತು ಮೀರಿಸುವಂತೆ ಮೋದಿ ನೇತೃತ್ವದ ಕಳೆದ ಏಳು ವರ್ಷಗಳ ಅಘೋಷಿತ ಮತ್ತು ಸರ್ವವ್ಯಾಪಿ ತುರ್ತುಪರಿಸ್ಥಿತಿ ಅಸ್ಥಿತ್ವದಲ್ಲಿದೆ.

ಅದೇನೇ ಇರಲಿ. ನೈಜ ಪ್ರಜಾತಂತ್ರವಾದಿಗಳು ತುರ್ತುಪರಿಸ್ಥಿತಿಯ ಪ್ರಮಾದಗಳನ್ನು ಹಾಗೂ ಅದನ್ನು ಸಾಧ್ಯಗೊಳಿಸಿದ ರಾಜಕೀಯ-ಆರ್ಥಿಕ ಸಂದರ್ಭವನ್ನೂ ಹಾಗೂ ಅದಕ್ಕೆ ಅವಕಾಶ ಮಾಡಿಕೊಟ್ಟ ಸಾಂವಿಧಾನಿಕ ಸಾಧ್ಯತೆಗಳನ್ನೂ ಮರೆಯುವಂತಿಲ್ಲ. ಹೀಗಾಗಿಯೇ ಪ್ರತಿವರ್ಷ ಜೂನ್ 25ರಂದು ಈ ದೇಶ ತುರ್ತುಪರಿಸ್ಥಿತಿಯ ಕರಾಳತೆಯನ್ನು ನೆನೆಸಿಕೊಳ್ಳುತ್ತದೆ. ಈ ನೆನಪು ಪ್ರಜಾತಾಂತ್ರಿಕ ಎಚ್ಚರವನ್ನು ಕಾದುಕೊಳ್ಳುವ ಪ್ರಕ್ರಿಯೆಯ ಭಾಗ.

ಆದರೆ ಆರೆಸ್ಸೆಸ್ ಮತ್ತು ಬಿಜೆಪಿ ಎಮರ್ಜೆನ್ಸಿಯನ್ನು ನೆನೆಪಿಸಿಕೊಳ್ಳುವುದು ಹಾಗೂ ತುರ್ತುಪರಿಸ್ಥಿತಿಯ ಗಂಡಾಂತರದಿಂದ ಈ ದೇಶವನ್ನು ಕಾಪಾಡಿದ್ದು ನಾವೇ ಎಂದು ಕೊಚ್ಚಿಕೊಳ್ಳುವುದು ಮಾತ್ರ ದೊಡ್ಡ ಸೋಗಲಾಡಿತನ.

ತುರ್ತುಪರಿಸ್ಥಿತಿಯನ್ನು ಘೋಷಿಸಲು ಕಾರಣವಾದ ರಾಜಕೀಯ ಹೋರಾಟಗಳಲ್ಲಿ ಆರೆಸ್ಸೆಸ್ ಮತ್ತು ಅದರ ಜನಸಂಘ ಹಾಗೂ ಇತರ ಅಂಗಸಂಸ್ಥೆಗಳ ಪಾತ್ರ ಒಂದಿಷ್ಟಿದ್ದದ್ದು ನಿಜ. ಆದರೆ, ತುರ್ತುಪರಿಸ್ಥಿತಿಯನ್ನು ಘೋಷಿಸಿದ ಆನಂತರ ಆರೆಸ್ಸೆಸ್ ಮತ್ತು ಭಾರತೀಯ ಜನಸಂಘದ ನಾಯಕರು ತಾವು ಸರ್ವಾಧಿಕಾರಿ ಎಂದು ಕರೆಯುತ್ತಿದ್ದ ಇಂದಿರಾಗಾಂಧಿಯವರ ಜೊತೆ ಗುಪ್ತ ಒಪ್ಪಂದವನ್ನು ಮಾಡಿಕೊಂಡು ಎಮರ್ಜೆನ್ಸಿಯನ್ನು ಬೆಂಬಲಿಸಿದ್ದು ಕೂಡಾ ಅಷ್ಟೇ ನಿಜ. ಆದರೆ, ಆರೆಸ್ಸೆಸ್ ಮತ್ತು ಬಿಜೆಪಿಯ ಈ ಸೋಗಲಾಡಿತನದ ಮತ್ತು ಜನದ್ರೋಹದ ಇತಿಹಾಸವನ್ನು ಜನರು ಮರೆಯಬೇಕೆಂದೇ ಪ್ರತಿ ಜೂನ್ 25ರಂದು ಅವರು ಇಂದಿರಾ ಎಮರ್ಜೆನ್ಸಿಯ ವಿರುದ್ಧ ಯಾರೂ ಮಾಡದಷ್ಟು ಅಬ್ಬರವನ್ನು ಮಾಡುತ್ತಾರೆೆ. ಆದರೆ ಆರೆಸ್ಸೆಸ್ ನಾಯಕರು ಇಂದಿರಾ ಗಾಂಧಿಗೆ ಬರೆದ ಪತ್ರಗಳು, ಅಂದಿನ ಜನಸಂಘದ ಹಲವಾರು ಪ್ರಮುಖ ನಾಯಕರ ಬರಹಗಳು ಹಾಗೂ ಹಲವಾರು ಇತಿಹಾಸಕಾರರ ಹಾಗೂ ಅಂದಿನ ಎಮರ್ಜೆನ್ಸಿ ವಿರೋಧಿ ನಾಯಕರ ಆತ್ಮ ಕಥನಗಳು ಹೇಗೆ ಆರೆಸ್ಸೆಸ್ ಮತ್ತು ಜನಸಂಘದ ನಾಯಕರು ಎಮರ್ಜೆನ್ಸಿ ವಿರೋಧಿ ಚಳವಳಿಗೆ ದ್ರೋಹವನ್ನು ಬಗೆದದ್ದು ಎಂಬುದನ್ನು ಸಾಬೀತು ಪಡಿಸುತ್ತವೆ.

ಅಟಲ್ ಬಿಹಾರಿಯವರು ಜೈಲಿನಲ್ಲಿದ್ದರೇ?!

ಈ ವರ್ಷದ ಜೂನ್ 25 ರಂದು ಬಿಜೆಪಿ ಮತ್ತು ಆರೆಸ್ಸೆಸ್‌ನವರು ಯಥಾಪ್ರಕಾರ ತಾವು ಹೇಗೆ ಭಾರತವನ್ನು ತುರ್ತುಪರಿಸ್ಥಿತಿಯಿಂದ ಕಾಪಾಡಿದೆವು ಎಂದು ಕೊಚ್ಚಿಕೊಳ್ಳುತ್ತಾ ವಾಜಪೇಯಿ, ಮೊರಾರ್ಜಿ ಹಾಗೂ ಇನ್ನಿತರ ನಾಯಕರ ಬಂಧನದ ಬಗ್ಗೆ ವರದಿ ಮಾಡಿದ್ದ 1977ರ ಜೂನ್ 26ರ ಪತ್ರಿಕೆಗಳ ಮುಖಪುಟವನ್ನು ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿದ್ದರು ಮತ್ತು ಏಕೆ ಈ ಪಟ್ಟಿಯಲ್ಲಿ ಪ್ರಜಾತಂತ್ರದ ಬಗ್ಗೆ ಮಾತನಾಡುವ ಸಮಾಜವಾದಿಗಳ, ಕಮ್ಯುನಿಷ್ಟರ ಹೆಸರಿರಲಿಲ್ಲ ಎಂದು ವ್ಯಂಗ್ಯವಾಡಿದ್ದರು.

ಆದರೆ ಬಿಜೆಪಿ ನಾಯಕರಿಗಿಂತ ಹೆಚ್ಚಿನ ಸಾವು ನೋವುಗಳನ್ನು ಎಮರ್ಜೆನ್ಸಿಯಲ್ಲಿ ಅನುಭವಿಸಿದವರು ಸಮಾಜವಾದಿಗಳು, ಲೋಹಿಯಾವಾದಿಗಳು, ಸಿಪಿಎಂ ಮತ್ತು ನಕ್ಸಲೈಟ್ ಪಕ್ಷಗಳ ಸಾವಿರಾರು ನಾಯಕರು ಹಾಗೂ ಕಾರ್ಯಕರ್ತರು. ಅದು ಅಂದಿನ ಗೃಹ ಇಲಾಖೆಯ ಕಡತಗಳನ್ನು ಹಾಗೂ ಗುಪ್ತ ವರದಿಗಳನ್ನೂ ಗಮನಿಸಿದರೆ ಗೊತ್ತಾಗುತ್ತದೆ.

ಅದಿರಲಿ. ಮುಖಪುಟದಲ್ಲಿ ಹೆಸರು ಹಾಕಿಸಿಕೊಂಡ ಅಟಲ್ ಬಿಹಾರಿ ವಾಜಪೇಯಿಯವರು ನಿಜಕ್ಕೂ ತುರ್ತುಪರಿಸ್ಥಿತಿಯಲ್ಲಿ ಜೈಲುವಾಸ ಅನುಭವಿಸಿದ್ದರೇ?

ಖಂಡಿತಾ ಇಲ್ಲ.

ತುರ್ತುಪರಿಸ್ಥಿತಿಯ 20 ತಿಂಗಳುಗಳಲ್ಲಿ ಅತಿ ಹೆಚ್ಚು ಭಾಗ ಅಟಲ್ ಬಿಹಾರಿ ವಾಜಪೇಯಿಯವರು ಪೆರೋಲ್ ಮೇಲೆ ಮನೆಯಲ್ಲಿ ಕಳೆದಿದ್ದರು ಹಾಗೂ ಪೆರೋಲ್ ಪಡೆದುಕೊಳ್ಳಲು ತುರ್ತುಪರಿಸ್ಥಿತಿಯನ್ನು ತಾವು ವಿರೋಧಿಸುವುದಿಲ್ಲ ಎಂದು ಮುಚ್ಚಳಿಕೆಯನ್ನೂ ಬರೆದುಕೊಟ್ಟಿದ್ದರು!

ಇದನ್ನು ದಾಖಲೆ ಸಮೇತ ಜನರ ಗಮನಕ್ಕೆ ತಂದಿದ್ದು ಕಮ್ಯುನಿಷ್ಟರೂ ಅಲ್ಲ, ಸಮಾಜವಾದಿಗಳೂ ಅಲ್ಲ. ಬದಲಿಗೆ ಬಿಜೆಪಿ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾದ ಸುಬ್ರಮಣಿಯನ್ ಸ್ವಾಮಿಯವರು. 2000ನೇ ಇಸವಿಯ ಜೂನ್ 13ರಂದು "The Hindu' ಪತ್ರಿಕೆಗೆ ಬರೆದ “The Unlearnt Lessons Of Emergency”  ಎಂಬ ಸುದೀರ್ಘ ಲೇಖನದಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಹೇಗೆ ಆರೆಸ್ಸೆಸ್ ಮತ್ತು ಜನಸಂಘದ ಹಲವಾರು ನಾಯಕರು ಇಂದಿರಾ ಗಾಂಧಿಯವರ ಜೊತೆಗೆ ಗುಪ್ತ ಮಾತುಕತೆಗಳಲ್ಲಿ ತೊಡಗಿದ್ದರು ಎಂಬುದನ್ನು ಬಯಲಿಗೆಳೆಯುತ್ತಾರೆ. ಅದರಲ್ಲೂ ಅಟಲ್ ಬಿಹಾರಿ ವಾಜಪೇಯಿಯವರು ಬಂಧನಕ್ಕೊಳಗಾದ ಕೆಲವೇ ದಿನಗಳಲ್ಲಿ ಇಂದಿರಾ ಗಾಂಧಿಯವರ ಜೊತೆ ಒಂದು ಒಪ್ಪಂದಕ್ಕೆ ಬರುತ್ತಾರೆ. ತಮಗೆ ಪೆರೋಲ್ ನೀಡಿ ಹೊರಬರಲು ಅವಕಾಶ ನೀಡಿದರೆ ತಾವು ಸರಕಾರಿ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟು ಹೊರಬರುತ್ತಾರೆ. ಹಾಗೆಯೇ ಹೊರಗಿದ್ದ ಅಷ್ಟೂ ಅವಧಿಯಲ್ಲಿ ಸರಕಾರ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಅವರು ದಾಖಲಿಸಿದ್ದಾರೆ. ಇದು ಆಶ್ಚರ್ಯವೂ ಅಲ್ಲ. ಹೊಸತೂ ಅಲ್ಲ. ಏಕೆಂದರೆ, ವಾಜಪೇಯಿಯವರು ಸ್ವಾತಂತ್ರ್ಯ ಪೂರ್ವದಲ್ಲಿ ಸಹ ಹೀಗೆ ಮಾಡಿದ್ದರು. 1942ರ ಕ್ವಿಟ್ ಇಂಡಿಯಾ ಚಳವಳಿಯ ಪ್ರದರ್ಶನವೊಂದನ್ನು ನೋಡುತ್ತಿದ್ದಾಗ ಬ್ರಿಟಿಷ್ ಸರಕಾರದಿಂದ ಬಂಧಿಸಲ್ಪಟ್ಟ ವಾಜಪೇಯಿಯವರು, ಆಗಲೂ ಬಂಧನದಿಂದ ಹೊರಬಂದದ್ದು ತಮ್ಮ ಪರಿಚಿತ ಚಳವಳಿಗಾರರ ಹೆಸರನ್ನು ಬಿಟ್ಟುಕೊಟ್ಟು ಮತ್ತು ಇನ್ನೆಂದಿಗೂ ಬ್ರಿಟಿಷ್ ಸರಕಾರದ ವಿರೋಧಿ ಚಳವಳಿಯಲ್ಲಿ ಭಾಗವಹಿಸುವುದಿಲ್ಲ ಎಂದು ಬರೆದುಕೊಟ್ಟೇ ಅಲ್ಲವೇ?

ಆರೆಸ್ಸೆಸ್‌ನ ಸರೆಂಡರ್ ಡಾಕ್ಯುಮೆಂಟ್
ಅದೇ ಲೇಖನದಲ್ಲಿ ಸುಬ್ರಮಣಿಯನ್ ಸ್ವಾಮಿಯವರು ಹೇಗೆ ಆರೆಸ್ಸೆಸ್‌ನ ನಾಯಕರು 1976ರ ಡಿಸೆಂಬರ್ ಹೊತ್ತಿಗೆ ಇಂದಿರಾ ಗಾಂಧಿಯವರ ಎಮರ್ಜೆನ್ಸಿಗೆ ಸಂಪೂರ್ಣ ಹಾಗೂ ಬಹಿರಂಗ ಬೆಂಬಲ ಘೋಷಿಸುವ ‘ಸರೆಂಡರ್ ಡಾಕ್ಯುಮೆಂಟ್’ಗೆ ಸಹಿಹಾಕಲು ತೀರ್ಮಾನ ತೆಗೆದುಕೊಂಡಿದ್ದರು ಎಂಬುದನ್ನು ವಿವರಿಸುತ್ತಾರೆ. ವಾಸ್ತವವಾಗಿ ತುರ್ತುಪರಿಸ್ಥಿತಿಯ ಘೋಷಣೆಯಾದ ನಂತರ ಸರಕಾರಕ್ಕೆ ವಿರೋಧ ಮಾಡದಂತೆ ಸಂಘಟನಾತ್ಮಕ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಆರೆಸ್ಸೆಸ್‌ನ ಹಿರಿಯ ನಾಯಕರಾದ ಮಧುಕರ್ ಮೂಳೆಯವರಿಗೆ ವಹಿಸಲಾಗಿತ್ತು. ಸರಕಾರದೊಡನೆ ಸಂಧಾನ ಮಾತುಕತೆಯ ಜವಾಬ್ದಾರಿಯನ್ನು ರಾನಡೆಯವರಿಗೆ ವಹಿಸಲಾಗಿತ್ತು. ಸುಬ್ರಮಣಿಯನ್‌ಸ್ವಾಮಿಯವರಿಗೆ ಅಮೆರಿಕವನ್ನೂ ಒಳಗೊಂಡಂತೆ ವಿದೇಶಗಳಲ್ಲಿ ಎಮರ್ಜೆನ್ಸಿ ವಿರೋಧಿ ಹೋರಾಟದ ಬಗ್ಗೆ ಸರಕಾರಗಳ ಬೆಂಬಲ ಪಡೆದುಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ 1976ರ ನವೆಂಬರ್‌ನಲ್ಲಿ ಮಧುಕರ್ ಮೂಳೆಯವರು ಸುಬ್ರಮಣಿಯನ್ ಸ್ವಾಮಿಯವರಿಗೆ ತಮ್ಮ ಪ್ರಯತ್ನಗಳನ್ನು ನಿಲ್ಲಿಸಲು ಅತ್ಯಂತ ವಿಷಾದದಿಂದ ಸಲಹೆ ಮಾಡುತ್ತಾರೆ. ಏಕೆಂದರೆ:

“the RSS had finalised the document of surrender to be signed at the end of January 1977”

ಆರೆಸ್ಸೆಸ್ 1977ರ ಜನವರಿಯ ಕೊನೆಯ ವೇಳೆಗೆ ಶರಣಾಗತಿ ಒಪ್ಪಂದಕ್ಕೆ ಸಹಿ ಹಾಕಲು ತೀರ್ಮಾನಿಸಿದೆ-ಎಂದು ಮಧುಕರ್ ಮೂಳೆಯವರು ವಿಷಾದದಿಂದ ನನಗೆ ತಿಳಿಸಿದರು ಎಂದು ಸುಬ್ರಮಣಿಯನ್ ಸ್ವಾಮಿಯವರು ಆ ಲೇಖನದಲ್ಲಿ ದಾಖಲಿಸುತ್ತಾರೆ. ಹೆಚ್ಚಿನ ವಿವರಗಳಿಗೆ ಆಸಕ್ತರು ಸುಬ್ರಮಣಿಯನ್ ಸ್ವಾಮಿಯವರ ಲೇಖನವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು.
https://www.thehindu.com/todays-paper/tp-miscellaneous/tp-others/unlearnt-lessons-of-the-emergency/article28026968.ece

ಆರೆಸ್ಸೆಸ್ ನಾಯಕರ ಈ ಸರೆಂಡರ್ ತೀರ್ಮಾನದ ಬಗ್ಗೆ ಆ ದಿನಗಳಲ್ಲಿ ಐಬಿಯ ಮುಖ್ಯಸ್ಥರಾಗಿದ್ದ ಟಿ.ವಿ. ರಾಜೇಶ್ವರ್ ಅವರು ತಮ್ಮ “India- Crucial Years” ಪುಸ್ತಕದಲ್ಲೂ ದಾಖಲಿಸಿದ್ದಾರೆ. ಹಾಗೆಯೇ ಈ ವಿದ್ಯಮಾನವನ್ನು ಆ ದಿನಗಳಲ್ಲಿ ಇಂದಿರಾ ಗಾಂಧಿಯವರ ವಾರ್ತಾಧಿಕಾರಿಯಾಗಿದ್ದ ಹಿರಿಯ ಪತ್ರಕರ್ತ ಎಚ್.ವೈ. ಶಾರದಾಪ್ರಸಾದ್ ಅವರೂ ದಾಖಲಿಸಿರುವುದನ್ನು ಅವರ ಮಗ ರವಿ ವಿಶ್ವೇಶ್ವರ ಶಾರದಾ ಪ್ರಸಾದ್ ಅವರು ‘ದಿ ಪ್ರಿಂಟ್’ ವೆಬ್ ಪತ್ರಿಕೆಗೆ ಇತ್ತೀಚೆಗೆ ಬರೆದ ಲೇಖನದಲ್ಲಿ ನೆನಪಿಸಿದ್ದಾರೆ. (https://theprint.in/opinion/rss-leaders-deserted-jayaprakash-resistance-during-indira-emergency/448294/)

ಸರಸಂಘಚಾಲಕರ ‘ಸರೆಂಡರ್’ ಪತ್ರಗಳು 
ಇವೆಲ್ಲಕ್ಕಿಂತ ಮುಖ್ಯವಾಗಿ ತುರ್ತುಪರಿಸ್ಥಿತಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೆಸ್ಸೆಸ್‌ನ ಪರಮೋಚ್ಚ ನಾಯಕರಾದ ಸರಸಂಘಚಾಲಕ ಮಧುಕರ್ ದೇವರಸ್ ಅಲಿಯಾಸ್ ಬಾಳಾಸಾಹೇಬ್ ದೇವರಸ್ ಅವರು ಯರವಾಡ ಜೈಲಿನಿಂದ ಇಂದಿರಾ ಗಾಂಧಿಯವರಿಗೆ ಬರೆದ ಸರೆಂಡರ್ ಪತ್ರಗಳು ಹಾಗೂ ಅದನ್ನು ಪರಿಗಣಿಸಲು ಇಂದಿರಾ ಅವರ ಮೇಲೆ ಪ್ರಭಾವ ಬೀರಬೇಕೆಂದು ವಿನೋಭಾ ಭಾವೆಯವರಿಗೆ ಬರೆದ ಗೋಗೆರೆವ ಪತ್ರಗಳು ತುರ್ತುಪರಿಸ್ಥಿತಿಯಲ್ಲಿ ಆರೆಸ್ಸೆಸ್ ಮತ್ತು ಜನಸಂಘದ ನಿಜವಾದ ಪಾತ್ರವೇನಿತ್ತು ಎಂದು ತಿಳಿಯಲೂ ಹಾಗೂ ಅವರ ಸೋಗಲಾಡಿತನವನ್ನೂ ಅರಿಯಲು ಸಹಾಯ ಮಾಡುತ್ತವೆ. ಬಾಳಾಸಾಹೇಬ್ ದೇವರಸ್ ಅವರು ಹಿಂದಿಯಲ್ಲಿ ಬರೆದ ‘ಹಿಂದೂ ಸಂಘಟನ್ ಔರ್ ಸತ್ತಾವದಿ ರಾಜನೀತಿ’ ಎಂಬ ಪುಸ್ತಕದ ಕೊನೆಯಲ್ಲಿ ಅಪೆಂಡಿಕ್ಸ್‌ನ ರೂಪದಲ್ಲಿ ಈ ಎಲ್ಲಾ ಪತ್ರಗಳನ್ನೂ ಸೇರಿಸಲಾಗಿದೆ. ವಿದ್ವಾಂಸ ಹಾಗೂ ರಾಜಕೀಯ ಕಾರ್ಯಕರ್ತರೂ ಆದ ಯೋಗೇಂದ್ರ ಯಾದವ್ ಅವರು ಹಿಂದಿಯಲ್ಲಿರುವ ಆ ಇಡೀ ಪುಸ್ತಕವನ್ನು ತಮ್ಮ ಟ್ವಿಟರಿನಲ್ಲಿಯೂ ಪ್ರಕಟಿಸಿದ್ದಾರೆ. ಆಸಕ್ತರು ಅದನ್ನು ನೇರವಾಗಿ ಈ ವೆಬ್ ವಿಳಾಸದಲ್ಲಿ ಓದಬಹುದು:

https://images.app.goo.gl/MXPKDDSwtniZFp1n9

ಈ ಎಲ್ಲಾ ಪತ್ರಗಳ ಇಂಗ್ಲಿಷ್ ಆವೃತ್ತಿಯನ್ನು ಆಗ ಭಾರತೀಯ ಲೋಕದಳದ ನಾಯಕರಾಗಿದ್ದ ಬ್ರಹ್ಮದತ್ ಅವರು ಬರೆದಿರುವ “Five headed monster: A factual narrative of the genesis of Janata Party” ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅದೇ ರೀತಿ ಕಳೆದ ಮೂರು ನಾಲ್ಕು ದಶಕಗಳಿಂದ ಭಾರತದ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗೆಗಳ ಬಗ್ಗೆ ತಳಮಟ್ಟದ ಅಧ್ಯಯನ ಮಾಡಿ ಹಲವಾರು ಮೌಲಿಕ ಗ್ರಂಥಗಳನ್ನು ಬರೆದಿರುವ ಕ್ರಿಸ್ಟೋಫೋ ಜಾಫರ್ಲೆ ಯವರು ಮತ್ತೊಬ್ಬ ವಿದ್ವಾಂಸ ಪ್ರತಿನಾವ್ ಅನಿಲ್ ಅವರ ಜೊತೆಗೂಡಿ ತುರ್ತುಪರಿಸ್ಥಿತಿಯ ಬಗ್ಗೆ ನಡೆಸಿದ ಹಲವಾರು ವರ್ಷಗಳ ಸಂಶೋಧನೆಯ ನಂತರ 2021ರಲ್ಲಿ ಪ್ರಕಟಿಸಿರುವ “Indias First Dictatorship- The Emergency-1975-77” ಎಂಬ ಪುಸ್ತಕದಲ್ಲೂ ಈ ಪತ್ರಗಳ ಇಂಗ್ಲಿಷ್ ಅನುವಾದವಿದೆ. ಆಸಕ್ತರು ಪುಸ್ತಕದ ಆ ಭಾಗವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: https://www.rediff.com/news/special/christophe-jaffrelot-pratinav-anil-emergency-was-a-windfall-for-the-rss/20210625.htm

ಮೊದಲ ಸರೆಂಡರ್ ಪತ್ರ- 1975ರ ಆಗಸ್ಟ್ 22
1975ರ ಜೂನ್ 25ರಂದು ತುರ್ತುಪರಿಸ್ಥಿತಿಯನ್ನು ಘೋಷಿಸಿದ ನಂತರ 1975ರ ಆಗಸ್ಟ್ 15ರಂದು ಇಂದಿರಾ ಗಾಂಧಿಯವರು ಕೆಂಪುಕೋಟೆಯಿಂದ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಿದರು. ಅದರಲ್ಲಿ ಎಲ್ಲಾ ಸರ್ವಾಧಿಕಾರಿಗಳಂತೆ ತಾವು ಕೈಗೊಂಡ ತುರ್ತುಪರಿಸ್ಥಿತಿ ನಿರ್ಣಯ ಹೇಗೆ ದೇಶದ ಭದ್ರತೆಗೆ ಅತ್ಯಗತ್ಯವಾಗಿದೆಯೆಂದೂ ಅದನ್ನು ವಿರೋಧಿಸುವವರು ದೇಶದ್ರೋಹಿಗಳೆಂದೂ ಭಾಷಣ ಮಾಡಿದರು. ದೇಶಾದ್ಯಂತ ಸಕಲ ಪ್ರಜಾತಂತ್ರವಾದಿಗಳೂ ಈ ಭಾಷಣವನ್ನು ಹಾಗೂ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು. ಆದರೆ ಆರೆಸ್ಸೆಸ್‌ನ ಸರಸಂಘ ಚಾಲಕರಾದ ದೇವರಸ್ ಅವರು ಮಾತ್ರ ಇಂದಿರಾ ಗಾಂಧಿಯವರಿಗೆ ಬರೆದ 1975ರ ಆಗಸ್ಟ್ 22 ರಂದು ಬರೆದ ಪ್ರಥಮ ಪತ್ರದಲ್ಲಿ ಆ ಭಾಷಣವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಾರೆ!! ಅಷ್ಟು ಮಾತ್ರವಲ್ಲ ಅವರ ಭಾಷಣವು ‘‘ಸಮಯೋಚಿತವೂ ಆಗಿತ್ತು ಹಾಗೂ ಸಮತೋಲದಿಂದಲೂ ಕೂಡಿತ್ತು’’ ಎಂದು ಕೊಂಡಾಡುತ್ತಾರೆ. ಆ ನಂತರ ಇಂದಿರಾ ಸರಕಾರಕ್ಕೆ ಆರೆಸ್ಸೆಸ್ ಬಗ್ಗೆ ಇರುವ ತಪ್ಪುಅಭಿಪ್ರಾಯವನ್ನು ಹೋಗಲಾಡಿಸಲು ಈ ಪತ್ರ ಬರೆಯುತ್ತಿದ್ದೇನೆಂದು ಹೇಳುತ್ತಾ ಹೇಗೆ ಆರೆಸ್ಸೆಸ್ ಹಿಂದೂಗಳ ಸಂಘಟನೆಯನ್ನು ಮಾಡುತ್ತಿದ್ದರೂ ಯಾವತ್ತಿಗೂ ಇಂದಿರಾ ಸರಕಾರದ ವಿರೋಧಿಯಾಗಿರಲಿಲ್ಲವೆಂಬ ಭರವಸೆಯನ್ನು ಕೊಡುತ್ತಾರೆ ಹಾಗೂ ಅಂತಿಮವಾಗಿ:

"This is my humble prayer to you that you shall kindly keep the above in view and shall lift the ban on  RSS. If you think it proper, my meeting with you will be a source of pleasure to me.”

(ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ತೆಗೆಯಬೇಕೆಂದು ಪ್ರಾರ್ಥಿಸುತ್ತೇನೆ. ನಿಮಗೆ ಸೂಕ್ತವೆಂದು ಕಂಡುಬಂದಲ್ಲಿ ತಮ್ಮನ್ನು ಖುದ್ದು ಭೇಟಿಯಾಗುವುದು ನನಗೆ ಅತ್ಯಂತ ಸಂತೋಷದ ವಿಷಯವಾಗಿರುತ್ತದೆ)
ಹೀಗೆ ಮೊದಲನೇ ಪತ್ರದಲ್ಲಿ ತುರ್ತುಪರಿಸ್ಥಿತಿಯ ಬಗ್ಗೆ ಸಮ್ಮತಿಯನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೆ ಅಂತಿಮವಾಗಿ ಅವರು ವಿನಂತಿಸಿದ್ದು ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ಕಿತ್ತುಹಾಕಬೇಕೆಂದೇ ವಿನಾ ತುರ್ತುಪರಿಸ್ಥಿತಿಯನ್ನು ತೆಗೆಯಬೇಕೆಂದಲ್ಲ! ಇದು ಆರೆಸ್ಸೆಸ್!

ಎರಡನೇ ಸರೆಂಡರ್ ಪತ್ರ- 1975ರ ನವೆಂಬರ್ 10
ಆರೆಸ್ಸೆಸ್‌ನ ಸರಸಂಘಚಾಲಕರ ಪತ್ರಕ್ಕೆ ಇಂದಿರಾ ಗಾಂಧಿಯವರು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಈ ಮಧ್ಯೆ ತುರ್ತುಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿಯವರು ‘‘ಬಗ್ಗಿರಿ ಎಂದರೆ ತೆವಳಲೂ ಸಿದ್ಧವಾಗಿದ್ದ’’ ಮಾಧ್ಯಮಗಳು ಹಾಗೂ ಸುಪ್ರೀಂ ಕೋರ್ಟ್ ಇಂದಿರಾಗಾಂಧಿ ಹೇಳಿದಂತೆ ಕೇಳುತ್ತಿದ್ದವು. ಆದ್ದರಿಂದಲೇ ಇಂದಿರಾ ಗಾಂಧಿಯವರ ಚುನಾವಣಾ ಆಯ್ಕೆಯನ್ನು ಅಸಿಂಧುಗೊಳಿಸಿದ್ದ ಅಲಹಾಬಾದಿನ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟಿನ ಐದು ನ್ಯಾಯಾಧೀಶರ ಪೀಠ ಅನೂರ್ಜಿತಗೊಳಿಸಿ ಇಂದಿರಾ ಗಾಂಧಿಯವರ ಆಯ್ಕೆಯನ್ನು ಎತ್ತಿಹಿಡಿಯಿತು. ಸ್ವತಂತ್ರ ನ್ಯಾಯಾಂಗದ ಈ ದುಸ್ಥಿತಿಯು ಸರ್ವಾಧಿಕಾರದ ಮುಂದುವರಿಕೆಯೆಂದು ಜೈಲಿನಲ್ಲಿ ಹಾಗೂ ಬಯಲಿನಲ್ಲಿ ಇದ್ದ ಎಲ್ಲಾ ಪ್ರಜಾತಂತ್ರವಾದಿಗಳು ಒಕ್ಕೊರಲಿನಿಂದ ಖಂಡಿಸಿದರು. ಆದರೆ ಸರಸಂಘಚಾಲಕರು ಮಾಡಿದ್ದೇನು? 1975ರ ನವೆಂಬರ್ 10ರಂದು ಇಂದಿರಾ ಗಾಂಧಿಯವರನ್ನುದ್ದೇಶಿಸಿ ಎರಡನೇ ಪತ್ರವನ್ನು ಬರೆಯುವ ದೇವರಸ್ ಅವರು ಪತ್ರವನ್ನು ಪ್ರಾರಂಭಿಸುವುದೇ ಸುಪ್ರೀಂ ಕೋರ್ಟ್ ಅವರ ಪರವಾಗಿ ಕೊಟ್ಟ ಆದೇಶಕ್ಕೆ ಅಭಿನಂದನೆ ಸಲ್ಲಿಸುವ ಮೂಲಕ!

"Let me congratulate you as five judges of the Supreme Court have declared the validity of your election.”
(ನಿಮ್ಮ ಚುನಾವಣೆಯನ್ನು ಸಿಂಧು ಎಂದು ಘೋಷಿಸಿದ ಸುಪ್ರೀಂಕೋರ್ಟ್ ನ ಐದು ಸದಸ್ಯರ ಪೀಠದ ಆದೇಶಕ್ಕೆ ಮೊದಲಿಗೆ ಅಭಿನಂದನೆಗಳು)
ಆ ನಂತರ ಮತ್ತೊಮ್ಮೆ ಆ ಪತ್ರದುದ್ದಕ್ಕೂ ಹೇಗೆ ಆರೆಸ್ಸೆಸ್ ಸರಕಾರದ ಹಾಗೂ ತುರ್ತುಪರಿಸ್ಥಿತಿಯ ವಿರೋಧಿಯಲ್ಲ ಎಂದು ಮನವರಿಕೆ ಮಾಡಿಕೊಡಲು ಯತ್ನಿಸುವ ದೇವರಸ್ ಅವರು ಕೊನೆಗೆ ಹೇಳುವುದೇನೆಂದರೆ:
ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ಹಿಂದೆಗೆದುಕೊಂಡಲ್ಲಿ:

“…power of selfless work on the part of lakhs of RSS volunteers will be utilized for the national upliftment (government as well as non-government)"

(ಲಕ್ಷಾಂತರ ಆರೆಸ್ಸೆಸ್ ಸ್ವಯಂಸೇವಕರ ನಿಸ್ವಾರ್ಥ ಕಾರ್ಯಶಕ್ತಿಯನ್ನು ಸರಕಾರದ ದೇಶಾಭಿವೃದ್ಧಿ ಕೆಲಸಕ್ಕೆ ಬಳಸಬಹುದು)

ಅರ್ಥಾತ್ ಆರೆಸ್ಸೆಸ್‌ನ ಮೇಲೆ ನಿಷೇಧವನ್ನು ತೆಗೆದುಹಾಕಿದರೆ ಆರೆಸ್ಸೆಸ್‌ನ ಕಾರ್ಯಕರ್ತರು ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಸರಕಾರದ ಜೊತೆಗೂಡಿ ಕೆಲಸ ಮಾಡುವುದಾಗಿ ಖುಲ್ಲಂಖುಲ್ಲಾ ಆಶ್ವಾಸನೆಯನ್ನು ಸರಸಂಘಚಾಲಕರು ನೀಡುತ್ತಾರೆ. ಮೂರನೇ ಸರೆಂಡರ್ ಪತ್ರ- 1976ರ ಫೆಬ್ರವರಿ 24 ಆದರೆ ಇಂದಿರಾ ಸರಕಾರ ಅದನ್ನೂ ಪರಿಗಣಿಸುವುದಿಲ್ಲ. ಆಗ ಇಂದಿರಾ ಗಾಂಧಿಯವರ ಮೇಲೆ ಪ್ರಭಾವವಿದ್ದ ಹಾಗೂ ಆರೆಸ್ಸೆಸ್‌ನ ಸೈದ್ಧಾಂತಿಕ ಮಿತ್ರರೂ ಆಗಿದ್ದ ವಿನೋಭಾ ಭಾವೆಯವರ ಮಧ್ಯಸ್ಥಿಕೆಯನ್ನು ಗೋಗೆರೆಯುತ್ತಾ ಸರಸಂಘಚಾಲಕರು ಮತ್ತೊಂದು ಪತ್ರ ಬರೆಯುತ್ತಾರೆ. ಏಕೆಂದರೆ ಫೆಬ್ರವರಿಯ ಕೊನೆಯ ವೇಳೆಗೆ ಇಂದಿರಾ ಗಾಂಧಿಯವರು ಭಾವೆಯವರ ಆಶ್ರಮಕ್ಕೆ ಭೇಟಿ ನೀಡುವ ಕಾರ್ಯಕ್ರಮವಿರುತ್ತದೆ. ಹೀಗಾಗಿ ದೇವರಸ್ ಅವರು ಆ ಭೇಟಿಯಲ್ಲಿ ಆರೆಸ್ಸೆಸ್‌ನ ಪರವಾಗಿ ಆರೆಸ್ಸೆಸ್ ಮೇಲಿನ ನಿಷೇಧವನ್ನು ತೆಗೆದುಹಾಕಲು ಪ್ರಭಾವ ಬೀರಬೇಕೆಂದು ಗೋಗೆರೆಯುತ್ತಾರೆ ಹಾಗೂ ಆರೆಸ್ಸೆಸ್‌ನ ಮೇಲಿನ ನಿಷೇಧವನ್ನು ತೆಗೆದುಹಾಕಿದಲ್ಲಿ

“…a condition will prevail as to enable the volunteers of the Sangh to participate in the planned programme of action relating to country's progress and prosperity under the leadership of the prime minister.

ಅಂದರೆ -‘‘ಪ್ರಧಾನಿ ಇಂದಿರಾ ಗಾಂಧಿ ಅವರ ನೇತೃತ್ವದಲ್ಲಿ ಯೋಜಿತವಾದ ದೇಶದ ಅಭಿವೃದ್ಧಿ ಮತ್ತು ಪ್ರಗತಿಯನ್ನು ಸಾಧಿಸುವ ಕಾರ್ಯಕ್ರಮಗಳಲ್ಲಿ ಸಂಘದ ಕಾರ್ಯಕರ್ತರೂ ಭಾಗವಹಿಸಬಹುದು’’ ಎಂದು ಮುಕ್ತವಾಗಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಸರಕಾರದ ಜೊತೆ ಕೈಜೋಡಿಸುವ ಇರಾದೆಯನ್ನು ಮತ್ತೊಮ್ಮೆ ಪ್ರಕಟಿಸುತ್ತಾರೆ. ಇದು ತುರ್ತುಪರಿಸ್ಥಿತಿಯಲ್ಲಿ ಆರೆಸ್ಸೆಸ್‌ನ ನಾಯಕರ ನಿಜವಾದ ರೂಪ. ಇಡೀ ದೇಶದಲ್ಲಿ ಇಂದಿರಾ ಗಾಂಧಿಯವರು ಯೋಜಿತವಾಗಿ ಹಕ್ಕುಗಳ ದಮನವನ್ನು ನಡೆಸುತ್ತಿದ್ದಾಗ, ಪ್ರಜಾತಂತ್ರದ ಕಗ್ಗೊಲೆ ನಡೆಯುತ್ತಿದ್ದಾಗ ಆರೆಸ್ಸೆಸ್ ಮತ್ತು ಜನಸಂಘ ಹಿಂಬಾಗಿಲ ಮೂಲಕ ಆ ದಮನಕಾಂಡಕ್ಕೆ ಜೊತೆಯಾಗುವ ಆಶ್ವಾಸನೆ ಕೊಟ್ಟು ಹೊರಬರುವ ಯತ್ನದಲ್ಲಿತ್ತು.

ಇದರ ಮುಂದುವರಿಕೆಯಾಗಿಯೇ ಉತ್ತರಪ್ರದೇಶದ ಜನಸಂಘವು ತುರ್ತುಪರಿಸ್ಥಿತಿಯ ಮೊದಲನೇ ವಾರ್ಷಿಕೋತ್ಸವದ ದಿನವಾದ 1976ರ ಜೂನ್ 25 ರಂದು ಇಂದಿರಾ ಸರಕಾರಕ್ಕೆ ಸಂಪೂರ್ಣ ಬೆಂಬಲ ಘೋಷಿಸಿದ್ದು ಮಾತ್ರವಲ್ಲದೆ ಯಾವುದೇ ಸರಕಾರ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲವೆಂದು ಪ್ರತಿಜ್ಞೆ ತೊಟ್ಟರು. ಅಷ್ಟು ಮಾತ್ರವಲ್ಲ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶದ 34 ಜನಸಂಘದ ನಾಯಕರು ಇಂದಿರಾ ಗಾಂಧಿ ಕಾಂಗ್ರೆಸ್‌ನ್ನು ಸೇರಿಕೊಂಡರು. ಇದೆಲ್ಲದರ ಕ್ಲೈಮಾಕ್ಸೇ 1977ರ ಜನವರಿ ಕೊನೆಯ ವೇಳೆಗೆ ಇಂದಿರಾ ಸರಕಾರದ ಜೊತೆ ಒಪ್ಪಂದಕ್ಕೆ ಬಂದು ಆರೆಸ್ಸೆಸ್ ಸಹಿ ಹಾಕಲು ಸಿದ್ಧವಾಗಿದ್ದ ‘ಸರೆಂಡರ್ ಡಾಕ್ಯುಮೆಂಟ್’. ಅದಕ್ಕೆ ಮುಂಚೆಯೇ ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯನ್ನು ಹಿಂದೆಗೆದುಕೊಂಡಿದ್ದರಿಂದ ಆ ಸರೆಂಡರ್ ದಸ್ತಾವೇಜಿಗೆ ಸಹಿಹಾಕುವ ಅಗತ್ಯ ಆರೆಸ್ಸೆಸ್‌ಗೆ ಬೀಳಲಿಲ್ಲ. ಅಷ್ಟೆ.

ಇಂತಹ ಆರೆಸ್ಸೆಸ್- ಇಂತಹ ಜನಸಂಘ-ಬಿಜೆಪಿ ನಾಯಕರು. ಭಕ್ತರನ್ನು ದೇಶವೇ ಕಾಪಾಡಬೇಕು! ಅಲ್ಲವೇ?

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News