ನಾಚಿಕೆ ಇಲ್ಲದ ಪ್ರಧಾನಿ ಕೋವಿಡ್ ಬಿಕ್ಕಟ್ಟು ನಿರ್ವಹಿಸಲು ವಿಫಲ: ಮಮತಾ ಬ್ಯಾನರ್ಜಿ

Update: 2021-07-07 17:47 GMT

ಕೋಲ್ಕತಾ, ಜು. 7: ರಾಜ್ಯದ ಲಸಿಕೆಯ ಅಗತ್ಯ ಪೂರೈಸಲು ಕೇಂದ್ರ ಸರಕಾರ ವಿಫಲವಾಗಿದೆ. ಆದುದರಿಂದ ರಾಜ್ಯ ಸರಕಾರ ಲಸಿಕೆ ಖರೀದಿ ಮಾಡಬೇಕಾಯಿತು ಎಂದು ಮಂಗಳವಾರ ಹೇಳಿದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೋರ್ಡಿಂಗ್ನಿಂದ ಹಿಡಿದು ಲಸಿಕೆ ಹಾಕಿದ ಪ್ರಮಾಣ ಪತ್ರದವರೆಗೆ ಎಲ್ಲೆಲ್ಲೂ ತನ್ನ ಭಾವಚಿತ್ರ ಮುದ್ರಿಸಿರುವ ನರೇಂದ್ರ ಮೋದಿ ಅವರು ‘ನಾಚಿಕೆ ಇಲ್ಲದ ಪ್ರಧಾನ ಮಂತ್ರಿ’ ಎಂದಿದ್ದಾರೆ.

ವಿಧಾನ ಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿದ ಬ್ಯಾನರ್ಜಿ, ನಾವು ಇದುವರೆಗೆ ಕೇಂದ್ರ ಸರಕಾರದಿಂದ ಲಸಿಕೆಯ 2 ಕೋಟಿ ಡೋಸ್ ಗಳನ್ನು ಸ್ವೀಕರಿಸಿದ್ದೇವೆ. ರಾಜ್ಯದ ಜನಸಂಖ್ಯೆಯನ್ನು ಪರಿಗಣಿಸಿದರೆ, ನಾವು ಸ್ವೀಕರಿಸಿದ ಡೋಸ್ ತುಂಬಾ ಕಡಿಮೆ. ಇಂತಹ ಸನ್ನಿವೇಶದಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡುವುದು ತನ್ನ ಸರಕಾರಕ್ಕೆ ಸವಾಲು ಎಂದು ಅವರು ಹೇಳಿದ್ದಾರೆ.

‘‘ನಾವು ಈಗಾಗಲೇ 2.26 ಕೋಟಿ ಜನರಿಗೆ ಲಸಿಕೆಯ ಡೋಸ್ ನೀಡಿದ್ದೇವೆ. ಅಗತ್ಯ ಇರುವ ಡೋಸ್ ಗಳನ್ನು ಪೂರೈಸುವ ಕೇಂದ್ರ ಸರಕಾರದ ಭರವಸೆಯ ಹೊರತಾಗಿಯೂ ನಾವು ಕನಿಷ್ಠ 26 ಲಕ್ಷ ಡೋಸ್ ಗಳನ್ನು ಖರೀದಿಸಿದ್ದೇವೆ’’ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಲಸಿಕೀಕರಣದ ವೆಚ್ಚವನ್ನು ಭರಿಸಲು ಪಿಎಂ ಕೇರ್ಸ್ ನಿಧಿಯ ಹಣವನ್ನು ಯಾಕೆ ಬಳಸುತ್ತಿಲ್ಲ ಎಂಬುದನ್ನು ತಿಳಿಯಲು ಬಯಸುವುದಾಗಿ ಮಮತಾ ಬ್ಯಾನರ್ಜಿ ಹೇಳಿದರು. ತಪ್ಪಾದ ನೀತಿಯ ಕಾರಣದಿಂದ ಕೇಂದ್ರ ಸರಕಾರಕ್ಕೆ ಕೋವಿಡ್ ಬಿಕ್ಕಟ್ಟನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.

ದೇಶದಲ್ಲಿ ಕೋವಿಡ್ ಅನ್ನು ನಿಯಂತ್ರಿಸಲು ನಮ್ಮ ನಾಚಿಕೆ ಇಲ್ಲದ ಪ್ರಧಾನಿ ವಿಫಲರಾಗಿದ್ದಾರೆ. ಆದರೆ, ಅವರ ಭಾವಚಿತ್ರ ಲಸಿಕೆಯ ಪ್ರಮಾಣ ಪತ್ರದಿಂದ ಹಿಡಿದು ಹೋರ್ಡಿಂಗ್ ವರೆಗೆ ಎಲ್ಲೆಲ್ಲೂ ರಾರಾಜಿಸುತ್ತಿದೆ. ನಾನು ಹಲವು ಪ್ರಧಾನಿಗಳನ್ನು ನೋಡಿದ್ದೇನೆ. ಆದರೆ, ಇಂತಹ ನಾಚಿಕೆ ಇಲ್ಲದ ಪ್ರಧಾನಿಯನ್ನು ನೋಡಿಲ್ಲ ಎಂದು ಅವರು ತಿಳಿಸಿದರು.

ಕೊರೋನ ಸಾಂಕ್ರಾಮಿಕ ರೋಗದ ಸಂಭಾವ್ಯ ನಾಲ್ಕನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರಕಾರ ಸಿದ್ಧತೆ ಆರಂಭಿಸಿದೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News