ಮಾಧ್ಯಮ ವರದಿ ಸರಿಯಾಗಿದ್ದರೆ ಆರೋಪಗಳು ಗಂಭೀರ: ಪೆಗಾಸಸ್ ಕುರಿತು ಸುಪ್ರೀಂಕೋರ್ಟ್

Update: 2021-08-05 07:31 GMT

ಹೊಸದಿಲ್ಲಿ:ಪ್ರತಿಪಕ್ಷದ ನಾಯಕರು, ಪತ್ರಕರ್ತರು ಹಾಗೂ  ಇತರರನ್ನು ಗುರಿಯಾಗಿಸಿಕೊಂಡು ಗೂಢಚರ್ಯೆ ನಡೆಸುತ್ತಿದ್ದ ಆರೋಪಗಳನ್ನು ಒಳಗೊಂಡ ಪೆಗಾಸಸ್ ಸ್ಪೈವೇರ್ ಪ್ರಕರಣದ ಕುರಿತು ವಿಶೇಷ ತನಿಖೆ ನಡೆಸುವಂತೆ ಕೋರಿ ಭಾರತದ ಎಡಿಟರ್ಸ್ ಗಿಲ್ಡ್ ಸಹಿತ ಹಲವರು ಸಲ್ಲಿಸಿರುವ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಾಧ್ಯಮಗಳ ವರದಿ ಸರಿಯಾಗಿದ್ದರೆ ಆರೋಪಗಳು ಗಂಭೀರವಾಗಿದೆ ಎಂದು ಹೇಳಿದೆ.

ಎಲ್ಲಾ ಅರ್ಜಿದಾರರು ತಮ್ಮ ಅರ್ಜಿಯ ಪ್ರತಿಯನ್ನು ಸರಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ ಸುಪ್ರೀಂಕೋರ್ಟ್   ವಿಚಾರಣೆಗೆ ಕೇಂದ್ರವು ಹಾಜರಾಗಬೇಕು. ಸತ್ಯ ಹೊರಬರಬೇಕು. ಯಾರ ಹೆಸರುಗಳಿವೆ ಎಂದು ನಮಗೆ ತಿಳಿದಿಲ್ಲ ಎಂದು ಹೇಳಿದೆ.  ಮಂಗಳವಾರ ಮತ್ತೊಮ್ಮೆ ಅರ್ಜಿಗಳ  ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

ಮುಖ್ಯ ನ್ಯಾಯಮೂರ್ತಿ ಎನ್ .ವಿ. ರಮಣ ನೇತೃತ್ವದ ನ್ಯಾಯಮೂರ್ತಿ ಸೂರ್ಯ ಕಾಂತ್  ಒಳಗೊಂಡ ದ್ವಿಸದಸ್ಯ ಪೀಠವು ಅರ್ಜಿಗಳ ವಿಚಾರಣೆ ನಡೆಸಿದೆ.

2019 ರಲ್ಲಿ ಪೆಗಾಸಸ್ ಪ್ರಕರಣ ಬೆಳಕಿಗೆ ಬಂದಿದ್ದು, ಯಾರೊಬ್ಬರೂ ಗೂಢಚರ್ಯೆವನ್ನು ಪರಿಶೀಲಿಸಲು ಯಾವುದೇ ಗಂಭೀರ ಪ್ರಯತ್ನವನ್ನು ಮಾಡದಿರುವುದು ಆಶ್ಚರ್ಯಕರವಾಗಿದೆ. ಹೆಚ್ಚಿನ ಅರ್ಜಿ ಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳ ಪತ್ರಿಕೆ ತುಣುಕುಗಳನ್ನು ಆಧರಿಸಿವೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಎರಡು ವರ್ಷಗಳ ಬಳಿಕ ಇದಕ್ಕಿದ್ದಂತೆ ಈ ವಿಚಾರ ಎತ್ತಿದ್ದೇಕೆ? ಎಂದು ಸಿಜೆಐ ರಮಣ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಬಲ್, ನಾವು ವಾಷಿಂಗ್ಟನ್ ಪೋಸ್ಟ್ ವರದಿ ಹಾಗೂ  ಇತರ ಮಾಧ್ಯಮ ಸಂಸ್ಥೆಗಳಿಂದ ಇದನ್ನು ತಿಳಿದುಕೊಂಡೆವು.  ಮಾಜಿ ಸುಪ್ರೀಂಕೋರ್ಟ್  ನ್ಯಾಯಾಧೀಶರು ಹಾಗೂ ಸುಪ್ರೀಂಕೋರ್ಟ್ ನ  ರಿಜಿಸ್ಟ್ರಾರ್‌ಗಳ ಫೋನ್‌ಗಳನ್ನು ಸ್ಪೈವೇರ್ ಬಳಸಿ ತಡೆಹಿಡಿಯಲಾಗಿದೆ ಎಂದು ಇಂದು ಬೆಳಿಗ್ಗೆ ನಮಗೆ ತಿಳಿಸಲಾಯಿತು ಎಂದು ಹೇಳಿದರು. 

ಸ್ಪೈವೇರ್ ಅನ್ನು ಸರಕಾರಿ ಸಂಸ್ಥೆಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ ಹಾಗೂ  ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ. "ಎನ್ ಎಸ್ ಒ ತಂತ್ರಜ್ಞಾನವು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ತೊಡಗಿಸಿಕೊಂಡಿದೆ" ಎಂದು ಹಿರಿಯ ವಕೀಲ  ಸಿಬಲ್ ಹೇಳಿದ್ದಾರೆ.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಎರಡು ದಿನಗಳ ಹಿಂದೆ ಸಲ್ಲಿಸಿದ ಅರ್ಜಿಯಲ್ಲಿ, ಸ್ಪೈವೇರ್ ಒಪ್ಪಂದದ ಬಗ್ಗೆ ಹಾಗೂ  ಟಾರ್ಗೆಟ್ ಆಗಿರುವವರ ಪಟ್ಟಿಯ ಬಗ್ಗೆ ಸರಕಾರದಿಂದ ವಿವರಗಳನ್ನು ಪಡೆಯಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು.

ಈ ಹಿಂದೆ, ಹಿರಿಯ ಪತ್ರಕರ್ತರಾದ ಎನ್. ರಾಮ್ ಹಾಗೂ ಶಶಿಕುಮಾರ್ ಅವರು ಗೂಢಚರ್ಯೆ ಆರೋಪದ ಬಗ್ಗೆ ತನಿಖೆಗೆ ಮಾಜಿ ನ್ಯಾಯಾಧೀಶರ ನೇತೃತ್ವದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಪತ್ರಕರ್ತರ ಪರ ವಕೀಲ ಕಪಿಲ್ ಸಿಬಲ್ ಮುಖ್ಯ ನ್ಯಾಯಮೂರ್ತಿಗೆ ಅರ್ಜಿಯನ್ನು ಪಟ್ಟಿ ಮಾಡುವಂತೆ ವಿನಂತಿಸಿದ್ದರು.

ಇದೇ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಈ ಹಿಂದೆ ಎರಡು ಇತರ ಅರ್ಜಿಗಳನ್ನು ಸಲ್ಲಿಸಲಾಗಿತ್ತು, ಸಿಪಿಎಂ ಸಂಸದ ಜಾನ್ ಬ್ರಿಟಾಸ್ ಹಾಗೂ  ವಕೀಲ ಎಂ.ಎಲ್. ಶರ್ಮಾ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News