ಬೆಂಗಳೂರು: ವೃದ್ಧ ದಂಪತಿಯ ಹತ್ಯೆ

Update: 2021-08-21 13:09 GMT

ಬೆಂಗಳೂರು, ಆ.21: ವೃದ್ಧ ದಂಪತಿಯನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಕೊಲೆಗೈದಿರುವ ಘಟನೆ ಇಲ್ಲಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಿಎಂಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದಿದ್ದ ಶಾಂತರಾಜು(65) ಮತ್ತು ಪ್ರೇಮಲತಾ(62) ಎಂಬುವರು ಕೊಲೆಯಾಗಿರುವುದಾಗಿ ಪೊಲೀಸರು ಗುರುತಿಸಿದ್ದಾರೆ.

ಇಲ್ಲಿನ ಕಾಶಿ ನಗರದಲ್ಲಿ ಸ್ವಂತ ಮನೆಯೊಂದರಲ್ಲಿ ನೆಲೆಸಿದ್ದ ಈ ದಂಪತಿಗೆ ಮಕ್ಕಳಿರಲಿಲ್ಲ. ಎರಡು ಮನೆಗಳನ್ನು ಬಾಡಿಗೆಗೆ ನೀಡಿದ್ದರು. ಶುಕ್ರವಾರ ಬೆಳಗ್ಗೆ ಸಂದರ್ಭದಲ್ಲಿ ಪ್ರೇಮಲತಾ ಅವರು ಕಾಣಿಸಿಕೊಂಡಿದ್ದರು ನಂತರ ಮಧ್ಯಾಹ್ನ ಶಾಂತರಾಜು ಅವರು ಮೆಟ್ಟಿಲುಗಳ ಮೇಲೆ ಕೂತು ನಂತರ ಹೊರಗೆ ಓಡಾಡುತ್ತಿದ್ದದನ್ನು ಸ್ಥಳೀಯರು ಗಮನಿಸಿದ್ದಾರೆ.

ತದನಂತರ, ದುಷ್ಕರ್ಮಿಗಳು ಮನೆಗೆ ನುಗ್ಗಿ  ಶಾಂತರಾಜು ಅವರ ಕುತ್ತಿಗೆಯನ್ನು ಕುಯ್ದ ಬಳಿಕ ಪ್ರೇಮಲತಾ ಅವರ ಕುತ್ತಿಗೆಗೆ ವಾಹನದ ಕ್ಲಚ್‍ವೈರ್‍ನಿಂದ ಬಿಗಿದು ಕೊಲೆ ಮಾಡಿರುವುದಾಗಿ ಹೇಳಲಾಗುತ್ತಿದೆ.

ಬಾಡಿಗೆಗಿದ್ದ ಮನೆಯವರು ಹೊರಗೆ ಹೋಗಿ ವಾಪಾಸ್ಸು ಬಂದಿದ್ದು, ಈ ಸಂದರ್ಭದಲ್ಲಿ ಮಾಲಕರ ಮನೆಯಲ್ಲಿ ಬೀಗದ ಕೀ ಕೇಳಿದಾಗ ಯಾವುದೇ ಶಬ್ದ ಬರಲಿಲ್ಲ. ನಂತರ ಒಳಗೆ ಹೋಗಿ ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. 

ಘಟನೆ ಸಂಬಂಧ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ವಿಶೇಷ ತಂಡವನ್ನು ರಚಿಸಿ ತನಿಖೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News