ಸಮುದ್ರದ ಮಧ್ಯೆ ಶ್ರೀಲಂಕಾ ಮೀನುಗಾರರಿಂದ ತಮಿಳುನಾಡು ಮೀನುಗಾರರಿಗೆ ಹಲ್ಲೆ, ದರೋಡೆ
Update: 2021-09-25 17:13 GMT
ಚೆನ್ನೈ, ಸೆ.25: ನಾಗಪಟ್ಟಿಣಂ ಜಿಲ್ಲೆಯ ಕೊಡಿಯಕರೈ ತೀರದಿಂದ ಮೀನುಗಾರಿಕೆಗೆ ತೆರಳಿದ್ದ ಮೂವರು ಮೀನುಗಾರರ ಮೇಲೆ ಸಮುದ್ರದ ಮಧ್ಯೆ ಶ್ರೀಲಂಕಾ ಮೀನುಗಾರರ ಗುಂಪೊಂದು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.
ಅರುಕೊಟ್ಟುತುರೈನ ಈ ಮೀನುಗಾರರು ಕೊಡಿಯಕರೈ ತೀರದಿಂದ ಕೆಲವು ನಾಟಿಕಲ್ ಮೈಲುಗಳ ದೂರದಲ್ಲಿ ಮೀನುಗಾರಿಕೆಯಲ್ಲಿ ನಿರತರಾಗಿದ್ದಾಗ ಮೂರು ದೋಣಿಗಳಲ್ಲಿ ಆಗಮಿಸಿದ್ದ ಶ್ರೀಲಂಕಾ ಮೀನುಗಾರರು ಅವರನ್ನು ಕಬ್ಬಿಣದ ಸರಳುಗಳಿಂದ ಥಳಿಸಿ,ಅವರು ಹಿಡಿದಿದ್ದ ಮೀನುಗಳು, ಬಲೆಗಳು,ಮೊಬೈಲ್ ಫೋನ್ಗಳು, ಜಿಪಿಎಸ್ ಉಪಕರಣವನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಕರಾವಳಿ ಭದ್ರತಾ ಪಡೆಯ ಸಿಬ್ಬಂದಿ ತಿಳಿಸಿದರು.
ಗಾಯಗೊಂಡಿರುವ ಮೀನುಗಾರರನ್ನು ನಾಗಪಟ್ಟಿಣಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯನ್ನು ಖಂಡಿಸಿ ಅರುಕೊಟ್ಟುತುರೈನಲ್ಲಿ ಮೀನುಗಾರರ ಸಂಘವು ಶನಿವಾರ ಮಿಂಚಿನ ಮುಷ್ಕರವನ್ನು ನಡೆಸಿತು.