ಬೆಂಗಳೂರು; ಬೈಕ್ ಸವಾರನ ಮೇಲೆ ಗುಂಡು ಹಾರಿಸಿದ ಪ್ರಕರಣ: ಓರ್ವ ವಶಕ್ಕೆ
Update: 2021-10-15 13:29 GMT
ಬೆಂಗಳೂರು, ಅ.15: ಬೈಕ್ ಸವಾರನ ಮೇಲೆ ಕಾರು ಚಾಲಕ ಗುಂಡು ಹಾರಿಸಿದ ಪ್ರಕರಣ ಸಂಬಂಧ ಓರ್ವನನ್ನು ಇಲ್ಲಿನ ಯಶವಂತಪುರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ನಿವಾಸಿ ರವೀಶ್ ಗೌಡ ಬಂಧಿತ ಆರೋಪಿಯಾಗಿದ್ದು, ಈತ ಖಾಸಗಿ ಹೊಟೇಲ್ನ ಮಾಲಕ ಎಂದು ಪೊಲೀಸರು ಹೇಳಿದ್ದಾರೆ.
ಯಶವಂತಪುರ ಠಾಣಾ ವ್ಯಾಪ್ತಿಯ ಎಂ.ಎಸ್.ರಾಮಯ್ಯ ಆಸ್ಪತ್ರೆ ಹಿಂಬದಿಯ ರಸ್ತೆಯಲ್ಲಿ ತನ್ನ ಐಷರಾಮಿ ಕಾರಿಗೆ ಬೈಕ್ ತಾಗಿಸಿದ್ದಾನೆ ಎಂದು ಕೋಪಗೊಂಡ ಕಾರು ಚಾಲಕ ರವೀಶ್ ಗೌಡ, ಅನಿಲ್ ಎಂಬ ಬೈಕ್ ಸವಾರನ ಮೇಲೆ ಎರಡು ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದ ಎನ್ನಲಾಗಿದೆ.
ಅದೃಷ್ಟವಶಾತ್ ಅನಿಲ್ ಪ್ರಾಣಾಪಾಯದಿಂದ ಪಾರಾಗಿದ್ದನು. ಈ ಘಟನೆ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಯಶವಂತಪುರ ಠಾಣಾ ಪೊಲೀಸರು, ಇದೀಗ ಕಾರು ಚಾಲಕನನ್ನು ತಮ್ಮ ವಶಕ್ಕೆ ಪಡೆದುಕೊಂಡು ಆತನ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.