ಬಲವಂತದ ಮತಾಂತರದ ಉದಾಹರಣೆ ನೀಡಿದರೆ ಅಂತಹ ಸಂಸ್ಥೆಗಳನ್ನು ಮುಚ್ಚುತ್ತೇವೆ: ಬಿಷಪ್ ಡೆರಿಕ್ ಫರ್ನಾಂಡೀಸ್

Update: 2021-10-23 12:43 GMT
photo: twitter

ಬೆಳಗಾವಿ, ಅ. 23: `ರಾಜ್ಯದಲ್ಲಿ ನೂರಾರು ಶಾಲಾ-ಕಾಲೇಜುಗಳನ್ನು, ಆಸ್ಪತ್ರೆಗಳನ್ನು ನಾವು ನಡೆಸುತ್ತಿದ್ದು, ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿದ್ದೇವೆ. ನಾವು ನಡೆಸುವ ಯಾವುದಾದರೂ ಶಾಲೆ-ಕಾಲೇಜುಗಳಲ್ಲಿ ಬಲವಂತದ ಮತಾಂತರ ಮಾಡಿದ ಉದಾಹರಣೆ ನೀಡಿದರೆ ಕೂಡಲೇ ಅಂತಹ ಸಂಸ್ಥೆಗಳನ್ನು ಮುಚ್ಚುತ್ತೇವೆ' ಎಂದು ಬೆಳಗಾವಿ ಧರ್ಮಪ್ರಾಂತ್ಯದ ಬಿಷಪ್ ಡೆರಿಕ್ ಫರ್ನಾಂಡೀಸ್ ಸವಾಲು ಹಾಕಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, `ರಾಜ್ಯದಲ್ಲಿ ಆಮಿಷ ಅಥವಾ ಬಲವಂತದಿಂದ ಮತಾಂತರ ಮಾಡುವುದು ಪಾಪದ ಕೆಲಸ. ಯಾರನ್ನು ಯಾರೂ ಆ ರೀತಿ ಮಾಡಬಾರದು. ಕ್ರೈಸ್ತ ಧರ್ಮದ ಕಾನೂನಿನ ಪ್ರಕಾರವೂ ಇದನ್ನು ನಿಷೇಧಿಸಲಾಗಿದೆ. ಯೇಸು ಕ್ರಿಸ್ತನೂ ಯಾರನ್ನು ತಮ್ಮತ್ತ ಬಲವಂತವಾಗಿ ಕರೆಯಲಿಲ್ಲ, ತಮ್ಮನ್ನು ಅನುಸರಿಸುವಂತೆ ಯಾರಿಗೂ ಒತ್ತಾಯಿಸಲಿಲ್ಲ. ಇದನ್ನು ನಾವೂ ಅನುಸರಿಸಿಕೊಂಡು ಬಂದಿದ್ದೇವೆ' ಎಂದು ಸ್ಪಷ್ಟಣೆ ನೀಡಿದರು.

ಮತಾಂತರ ನಿಷೇಧ ಕಾಯ್ದೆ ಅಗತ್ಯವಿಲ್ಲ: `ಮತಾಂತರ ನಿಷೇಧ ಕಾಯ್ದೆ ಅಗತ್ಯವಿಲ್ಲವಾದ್ದರಿಂದ, ಸರಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಬಲವಂತದ ಹಾಗೂ ಆಮಿಷಗಳನ್ನು ಒಡ್ಡಿ ಮಾಡುವ ಮತಾಂತರವನ್ನು ನಾವು ವಿರೋಧಿಸುತ್ತೇವೆ. ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸುವುದಕ್ಕೆ ಸಂವಿಧಾನದಲ್ಲಿ ಈಗಾಗಲೇ ಹಲವು ರೀತಿಯ ಕ್ರಮಗಳನ್ನು ನೀಡಲಾಗಿದೆ. ಹೀಗಾಗಿ, ಪ್ರತ್ಯೇಕ ಕಾಯ್ದೆಯ ಅಗತ್ಯವಿಲ್ಲ' ಎಂದು ಅವರು ಪ್ರತಿಪಾದಿಸಿದರು.

`ಕ್ಯಾಥೊಲಿಕ್ ಕ್ರಿಸ್ತ ಸಭೆಯು ಅಂತರ್ಜಾತಿ ಅಥವಾ ಕ್ರೈಸ್ತರಲ್ಲದವರೊಂದಿಗೆ ವಿವಾಹವನ್ನು ಪ್ರೋತ್ಸಾಹಿಸುತ್ತದೆ. ಆದರೆ, ಮತಾಂತರವಾಗಬೇಕೆಂದು ಹೇಳುವುದಿಲ್ಲ. ಅವರವರ ಧರ್ಮವನ್ನು ಅನುಸರಿಸುವುದಕ್ಕೆ ಅವಕಾಶವಿದೆ. ಪರಸ್ಪರರ ನಂಬಿಕೆ ಹಾಗೂ ಧರ್ಮಾಚರಣೆಯನ್ನು ಗೌರವಿಸಲಾಗುತ್ತದೆ. ಮತಾಂತರ ನಿಷೇಧ ಕಾಯ್ದೆಯನ್ನು, ಕೆಲವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಕಾಯ್ದೆಗಿಂತಲೂ ಅದನ್ನು ಅಸ್ತ್ರವಾಗಿ ಮಾಡಿಕೊಂಡು ತೊಂದರೆ ಕೊಡುವವರ ಬಗ್ಗೆ ನಮಗೆ ಆತಂಕವಿದೆ' ಎಂದು ಅವರು ನುಡಿದರು.

`ಸುಳ್ಳು ಆಪಾದನೆ ಮಾಡಿ ಜನರಿಗೆ ತೊಂದರೆ ಕೊಡುವುದು ಅಥವಾ ಮತಾಂತರ ಮಾಡಲಾಗುತ್ತಿದೆ ಅನವಶ್ಯವಾಗಿ ಗುಲ್ಲೆಬ್ಬಿಸಿ ಶಾಂತಿ ಕದಡುವ ಕೆಲಸಗಳು ನಡೆಯುವ ಸಾಧ್ಯತೆ ಇರುತ್ತದೆ. ಅಲ್ಲದೆ, ಯಾರನ್ನೂ ಯಾರೂ ಬಲವಂತದಿಂದ ಮತಾಂತರ ಮಾಡಲು ಬರುವುದಿಲ್ಲ. ಅದು, ಆಯಾ ವ್ಯಕ್ತಿಯ ಆಂತರಿಕ ಸಂಗತಿಯಾಗಿದೆ. ಯಾರದೋ ವೈಯಕ್ತಿಕ ಹಿತಾಸಕ್ತಿ ಕಾಯುವುದಕ್ಕಾಗಿ ಸರಕಾರ ಮಣಿಯಬಾರದು. ಅಲ್ಪಸಂಖ್ಯಾತರಾದ ನಮಗೆ ರಕ್ಷಣೆ ಕೊಡುವ ಬದಲಿಗೆ ಮೂಲೆಗುಂಪು ಮಾಡುವುದು ಅಥವಾ ಗುರಿಯಾಗಿಸುವುದು ಸರಿಯಲ್ಲ' ಎಂದು ಡೆರಿಕ್ ಫನಾರ್ಂಡೀಸ್ ಆಕ್ಷೇಪಿಸಿದರು.

`ಸಂವಿಧಾನದ ಆಶಯಗಳನ್ವಯ ಕೆಲಸ ಮಾಡುತ್ತಿರುವ ಕ್ರೈಸ್ತ ಸಮುದಾಯದವರಿಗೆ ತೊಂದರೆ ನೀಡುವುದು ಸರಿಯಲ್ಲ. ನಮ್ಮ ಧ್ವನಿಯಲ್ಲಿನ ದುಗುಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರ್ಥ ಮಾಡಿಕೊಳ್ಳಬೇಕು. ಬಲವಂತದ ಮತಾಂತರಕ್ಕೆ ಸಂವಿಧಾನದಲ್ಲಿ ಶಿಕ್ಷೆಗೆ ಅವಕಾಶವಿದೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಅಗತ್ಯವಿಲ್ಲ'

-ಡೆರಿಕ್ ಫರ್ನಾಂಡೀಸ್ ಬಿಷಪ್, ಬೆಳಗಾವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News