12 ಸಂಸದರ ಅಮಾನತು ವಿರೋಧಿಸಿ ಪ್ರತಿಭಟನೆಗೆ 120 ರಾಜ್ಯಸಭೆ ಸದಸ್ಯರ ಬೆಂಬಲ

Update: 2021-12-08 01:40 GMT

ಹೊಸದಿಲ್ಲಿ: ರಾಜ್ಯಸಭೆಯ 12 ಮಂದಿ ಸದಸ್ಯರನ್ನು ಅಮಾನತುಗೊಳಿಸಿದ ಕ್ರಮವನ್ನು ವಿರೋಧಿಸಿ ಬುಧವಾರ ಸಂಸತ್ ಸಂಕೀರ್ಣದಲ್ಲಿ ನಡೆಸಲು ಉದ್ದೇಶಿಸಿರುವ ಧರಣಿ ಪ್ರತಿಭಟನೆಗೆ ವಿರೋಧ ಪಕ್ಷಗಳ ಕನಿಷ್ಠ 120 ಸಂಸದರು ಬೆಂಬಲ ಸೂಚಿಸಿದ್ದಾರೆ.

ಗುರುವಾರ ಹಲವು ಮಂದಿ ಲೋಕಸಭೆ ಸದಸ್ಯರು ಕೂಡಾ ಮಹಾತ್ಮಾಗಾಂಧಿ ಪ್ರತಿಮೆಯ ಎದುರು ನಡೆಯುವ ಧರಣಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.

ಅಮಾನತು ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್ ಪಕ್ಷದ ಆರು ಮಂದಿ, ಟಿಎಂಸಿ ಮತ್ತು ಶಿವಸೇನೆಯ ಇಬ್ಬರು, ಸಿಪಿಐಎಂ ಮತ್ತು ಸಿಪಿಐನ ತಲಾ ಒಬ್ಬರು ಸದಸ್ಯರು ಅನಿರ್ದಿಷ್ಟಾವಧಿಯ ಧರಣಿ ನಡೆಸುತ್ತಿದ್ದಾರೆ.

ಮುಂಗಾರು ಅಧಿವೇಶನದ ವೇಳೆ ಸದನದಲ್ಲಿ ಕೋಲಾಹಲ ಎಬ್ಬಿಸಿದ ಕಾರಣಕ್ಕೆ ನಿಯಮ 256ರ ಅನ್ವಯ ಅವರನ್ನು ಅಮಾನತು ಮಾಡುವ ಕುರಿತ ನಿರ್ಣಯ ಚಳಿಗಾಲದ ಅಧಿವೇಶನದಲ್ಲಿ ಆಂಗೀಕಾರ ಪಡೆದ ಹಿನ್ನೆಲೆಯಲ್ಲಿ ಕಳೆದ ವಾರ 12 ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು.

ಹಿರಿಯ ಕಾಂಗ್ರೆಸ್ ಮುಖಂಡರು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಅವರನ್ನು ಭೇಟಿ ಮಾಡಿ, ವಿರೋಧ ಪಕ್ಷಗಳ ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದಾರೆ. ತಮ್ಮ ಪಕ್ಷದ ಸದಸ್ಯರು ಡಿಸೆಂಬರ್ 23ರ ವರೆಗೆ ಪ್ರತಿ ದಿನ ಧರಣಿ ನಡೆಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಪ್ರಕಟಿಸಿದ್ದಾರೆ.

ವಿರೋಧ ಪಕ್ಷಗಳ ನಡುವೆ ಮಾತುಕತೆ ನಡೆಯುತ್ತಿರುವ ಮಧ್ಯೆಯೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರು ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನು ಬೆಳಗ್ಗೆ ಸಂಸತ್‌ನ ಸೆಂಟ್ರಲ್ ಹಾಲ್‌ನಲ್ಲಿ ಕರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News