ಜಕ್ಕೂರು ವೈಮಾನಿಕ ತರಬೇತಿ ಶಾಲೆ ಕಾರ್ಯಾರಂಭಕ್ಕೆ ದಿನಗಣನೆ ಶುರು: ಸಚಿವ ಡಾ.ನಾರಾಯಣಗೌಡ

Update: 2021-12-08 07:09 GMT

ಬೆಂಗಳೂರು, ಡಿ.8: ಜಕ್ಕೂರು ಸರಕಾರಿ ವೈಮಾನಿಕ ತರಬೇತಿ ಶಾಲೆ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಈ ನಡುವೆ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿ ನಡೆಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಕ್ಕೂರು ವೈಮಾನಿಕ ತರಬೇತಿ ಶಾಲೆಗೆ ಮತ್ತೆ ಕಾಯಕಲ್ಪ ನೀಡುತ್ತಿರುವ ಸಚಿವರು, ತಮ್ಮ ಕನಸಿನ ಸಾಕಾರಕ್ಕೆ ಅಧಿಕಾರಗಳ ಜೊತೆ ನಿರಂತರ ಸಭೆ ನಡೆಸಿ ರನ್‌ ವೇ, ದುರಸ್ಥಿ ಸೇರಿದಂತೆ ಪುನರಾಂಭಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದರು. ಅದರಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ರನ್ ವೇ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದೀಗ ತರಬೇತಿ ಶಾಲೆ ಆರಂಭಕ್ಕೆ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ವೈಮಾನಿಕ ಶಾಲೆ ಆರಂಭಕ್ಕೂ ಮುನ್ನ ವಿಮಾನ ಹಾರಾಟದ ಪರೀಕ್ಷೆ ನಡೆಸಲಾಗಿದೆ.

ಇತ್ತೀಚೆಗಷ್ಟೇ ಟ್ವಿನ್ ಇಂಜಿನ್ ವಿಮಾನ ಪರೀಕ್ಷಾರ್ಥ ಹಾರಾಟ ನಡೆಸಿದ್ದು ಯಶಸ್ವಿಯಾಗಿದೆ. ಡಿಜಿಸಿಎ ಅನುಮೋದನೆ ಪಡೆದು ಜಕ್ಕೂರು ವೈಮಾನಿಕ ತರಬೇತಿ ಶಾಲೆ ಮುಖ್ಯ ಬೋಧಕ ಕ್ಯಾ.ಕಮಲ್ ಕಿಶೋರ್ ಮತ್ತು ನಾಗಪುರ ಏವಿಯೇಷನ್‌ ಡೆಪ್ಯುಟಿ ಮುಖ್ಯ ಬೋಧಕ ಕ್ಯಾ.ಎಜಿಲರಸನ್ ಟ್ವಿನ್‌‌ ಎಂಜಿನ್ ವಿಮಾನದ ಪರೀಕ್ಷಾರ್ಥ ಹಾರಾಟ ನಡೆಸಿದ್ದಾರೆ.

ವೈಮಾನಿಕ ತರಬೇತಿ ಶಾಲೆಯಲ್ಲಿ ಟ್ವಿನ್ ಎಂಜಿನ್ ಮಹತ್ವ ಏನು?

ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ಡಿಜಿಸಿಎ ನಿಯಮಾವಳಿ ಪ್ರಕಾರ ವಾಣಿಜ್ಯ ಪೈಲಟ್ ಲೈಸೆನ್ಸ್ ಪಡೆಯಲು 200 ಗಂಟೆಗಳ ಹಾರಾಟ ತರಬೇತಿ ಪೂರ್ಣಗೊಳಿಸಿರಬೇಕು. ಇದರಲ್ಲಿ 185 ತಾಸು ಸಿಂಗಲ್ ಎಂಜಿನ್ ಹಾಗೂ 15 ತಾಸು ಟ್ವಿನ್ ಎಂಜಿನ್‌ ಮಿಮಾನದಲ್ಲಿ ತರಬೇತಿ ನೀಡಲಾಗುತ್ತದೆ. ಈ ಹಿಂದೆ ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ ಟ್ವಿನ್ ಎಂಜಿನ್ ವಿಮಾನ ಇಲ್ಲದ ಕಾರಣಕ್ಕೆ 185 ತಾಸುಗಳ ಸಿಂಗಲ್ ಎಂಜಿನ್ ತರಬೇತಿ ನೀಡಿ, ಉಳಿದ 15 ತಾಸಿನ ಟ್ವಿನ್ ಎಂಜಿನ್ ವಿಮಾನ ಹಾರಾಟ ತರಬೇತಿಗೆ ಬೇರೆ ರಾಜ್ಯಗಳಿಗೆ ಹೋಗಬೇಕಾಗಿತ್ತು. ಇದು ಕರ್ನಾಟಕದ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆಯಾಗುತ್ತಿತ್ತು. ಇದನ್ನು ಮನಗಂಡು ಜಕ್ಕೂರು  ಸರ್ಕಾರಿ ವೈಮಾನಿಕ ಶಾಲೆಗೆ 5 ಕೋಟಿ ವೆಚ್ಚದಲ್ಲಿ ಟ್ವಿನ್ ಎಂಜಿನ್ ವಿಮಾನ ಖರೀದಿಸಲಾಗಿದೆ.  ಇದರಿಂದಾಗಿ ವಿದ್ಯಾರ್ಥಿಗಳು 185 ತಾಸು ಸಿಂಗಲ್ ಎಂಜಿನ್ ಮತ್ತು 15 ತಾಸು ಟ್ವಿನ್ ಎಂಜಿನ್ ಹಾರಾಟ ತರಬೇತಿಯನ್ನು ಹೆಚ್ಚಿನ ಹೊರೆಯಾಗದೇ ಇಲ್ಲೇ ಪಡೆಯಲು ಅನುಕೂಲವಾಗಲಿದೆ.

ಜಕ್ಕೂರು ಸರಕಾರಿ ವೈಮಾನಿಕ ತರಬೇತಿ ಶಾಲೆಯಲ್ಲಿ 5 ಸಿಂಗಲ್ ಎಂಜಿನ್ ವಿಮಾನಗಳಿದ್ದು, ಹೊಸದಾಗಿ ಒಂದು ಟ್ವಿನ್ ಎಂಜಿನ್ ವಿಮಾನ ಖರೀದಿಸಿ ತರಬೇತಿಗೆ ಒದಗಿಸಲಾಗಿದೆ. ಟ್ವಿನ್ ಎಂಜಿನ್ ವಿಮಾನ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದ್ದು, ವೈಮಾನಿಕ ತರಬೇತಿ ಶಾಲೆ ಉದ್ಘಾಟನೆಗೆ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಡಿಜಿಸಿಎ Flying Training organization approval  ನೀಡಿದ ತಕ್ಷಣವೇ ತರಬೇತಿಯನ್ನು ಆರಂಭಿಸಲಾಗುವುದು ಎಂದು ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News