ಕಸ ವಿಲೇವಾರಿ ಬಗ್ಗೆ ಮಾರ್ಷಲ್ಸ್ ಗಮನಹರಿಸಬೇಕು: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
ಬೆಂಗಳೂರು, ಡಿ.9: ನಗರದಲ್ಲಿ ರಸ್ತೆ ಬದಿಗಳಲ್ಲಿ ಕಸ ಸುರಿಯದಂತೆ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು. ರಸ್ತೆ ಬದಿ ಬಿಸಾಡುವ ಅಥವಾ ದಿನನಿತ್ಯ ಸುರಿವ ಕಸದಿಂದ ಬ್ಲಾಕ್ ಸ್ಪಾಟ್ಗಳಾಗಿರುವ ಸ್ಥಳಗಳ ಮೇಲೆ ಮಾರ್ಷಲ್ಗಳು ನಿಗಾವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಗುರುವಾರ ಪಾಲಿಕೆಯ ಕಚೇರಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಕಸ ವಿಲೇವಾರಿ ಮಾಡಲು ವೈಜ್ಞಾನಿಕ ಕ್ರಮವಹಿಸಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಹಸಿ-ಕಸ, ಒಣ-ಕಸ ವಿಂಗಡಿಸಿಕೊಡುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
ಮಾರ್ಷಲ್ಗಳು ಆಟೋ-ಟಿಪ್ಪರ್ ಗಳಿಗೆ ಕಸ ಕೊಡದೆ, ಬಿಸಾಡಿದರೆ, ದಂಡ ವಿಧಿಸಿ ಕಸ ಎಸೆಯದಂತೆ ಬೆಳಗಿನ ಜಾವ ಬರುವ ಆಟೋ ಟಿಪ್ಪರ್ಗೆ ಕಸ ನೀಡುವಂತೆ ಸೂಚಿಸಬೇಕು. ಇದೆಲ್ಲದರ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಿರಬೇಕು. ಹಾಗೆಯೇ ಪೌರಕಾರ್ಮಿಕರಿಗೆ ಸುರಕ್ಷಾ ಸಾಮಗ್ರಿಗಳನ್ನು ನೀಡಿ, ಆರೋಗ್ಯದ ದೃಷ್ಟಿಯಿಂದ ಎಲ್ಲರೂ ಸುರಕ್ಷಾ ಸಾಮಗ್ರಿಗಳನ್ನು ಬಳಸುವ ತಿಳಿವಳಿಕೆ ನೀಡಬೇಕು ಎಂದರು.