‘ಲವ್ ಜಿಹಾದ್’- ನಿಜವೆಷ್ಟು? ಸುಳ್ಳೆಷ್ಟು?

Update: 2021-12-14 19:30 GMT

ಕರ್ನಾಟಕದಲ್ಲಿ ಶ್ರೀರಾಮ ಸೇನೆ ಹಾಗೂ ಬಜರಂಗದಳಗಳು 2007-9ರಲ್ಲಿ ಹುಟ್ಟುಹಾಕಿದ ಈ ಕಥನ ಜಗತ್ತಿನಾದ್ಯಂತ ವ್ಯಾಪಿಸಿ ನಂತರ ಸರಕಾರ ಹಾಗೂ ನ್ಯಾಯಾಲಯಗಳ ಅಧಿಕೃತ ದಾಖಲೆಗಳಲ್ಲೂ ಸ್ಥಾನ ಗೌರವ ಪಡೆದುಕೊಂಡು ಮಾನ್ಯತೆ ಪಡೆದುಕೊಂಡುಬಿಟ್ಟಿತು.
ಒಂದೆಡೆ ಶ್ರೀರಾಮ ಸೇನೆ ಕರ್ನಾಟಕದಲ್ಲಿ ಪ್ರತಿವರ್ಷ ಸಾವಿರಾರು ಹಿಂದೂ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ ಎಂದು ಪ್ರಚಾರ ಮಾಡಿದರೆ, ಕೇರಳದಲ್ಲಿ ಹಿಂದೂ ಜನಜಾಗೃತಿ ಸಂಘಟನೆಯು ಕೇರಳದಲ್ಲಿ 30,000 ಹಿಂದೂ ಯುವತಿಯರು ಲವ್ ಜಿಹಾದ್ ಆಗಿ ಬಿಟ್ಟಿದ್ದಾರೆಂದು ಕೇರಳದಾದ್ಯಂತ ಕರಪತ್ರ ಹಾಗೂ ಪೋಸ್ಟರ್‌ಗಳ ಕ್ಯಾಂಪೇನ್ ಮಾಡಿತು


ಇಡೀ ಕರ್ನಾಟಕ ಅಕಾಲಿಕ ಮಳೆ, ಕೋವಿಡ್ ಸಂಕಷ್ಟ್ಟ, ನಿರುದ್ಯೋಗ, ಅರೆ ಉದ್ಯೋಗಗಳು ಹಾಗೂ ಇದರ ಬಗ್ಗೆ ಸರಕಾರದ ಕ್ರಿಮಿನಲ್ ನಿರ್ಲಕ್ಷ್ಯದಿಂದಾಗಿ ತತ್ತರಿಸುತ್ತಿರುವಾಗ ಬಿಜೆಪಿ ಸರಕಾರ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಯ ಜೊತೆಗೆ ‘ಲವ್ ಜಿಹಾದ್’ ನಿಷೇಧ ಕಾಯ್ದೆಯನ್ನೂ ನಿಷೇಧಿಸುವ ಕಾನೂನನ್ನು ತರಲು ಮುಂದಾಗಿದೆ. ಇದರಲ್ಲಿ ಅಸಲಿ ಸಮಸ್ಯೆಗಳನ್ನು ನಿವಾರಿಸಲಾಗದ ಬಿಜೆಪಿ ಸರಕಾರ ತನ್ನ ಬೇಜವಾಬ್ದಾರಿತನವನ್ನು ಮುಚ್ಚಿಕೊಳ್ಳಲು ಮಾಡುತ್ತಿರುವ ಉಪಾಯವೂ ಇದೆ. ಮುಸ್ಲಿಂ ವಿರೋಧಿ ಹಿಂದೂ-ಬ್ರಾಹ್ಮಣ್ಯ ರಾಜಕಾರಣದ ಅಪಾಯವೂ ಇದೆ. ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಉತ್ತರಪ್ರದೇಶದಲ್ಲಿ ಒಬ್ಬ ಮುಸ್ಲಿಂ ಮಹಿಳೆ ಸ್ವ ಇಚ್ಛೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದಳು. ಆದರೆ ಮದುವೆಯಾಗಬೇಕೆಂಬ ಉದ್ದೇಶದಿಂದ ಮತಾಂತರಗೊಂಡಿದ್ದರಿಂದ ಈ ಮತಾಂತರ ಹಾಗೂ ಮದುವೆ ಎರಡೂ ಕಾನೂನು ಸಮ್ಮತವಲ್ಲ ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟಿನ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿತು. ಅದೇ ಹೈಕೋರ್ಟು ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿಯ ಬಗ್ಗೆ ಹತ್ತು ಹಲವು ಸೂಚನೆಗಳನ್ನು ಕೊಟ್ಟಿದ್ದರೂ ಕ್ಯಾರೇ ಎನ್ನದಿದ್ದ ಯೋಗಿ ಸರಕಾರ ಕೂಡಲೇ, ನ್ಯಾಯಾಲಯದ ಈ ಅಭಿಪ್ರಾಯವನ್ನೇ ಸರಕಾರಕ್ಕೆ ಕೊಟ್ಟ ಆದೇಶವೆಂದು ಸುಳ್ಳು ವ್ಯಾಖ್ಯಾನ ಮಾಡುತ್ತಾ ಮದುವೆಗಾಗಿ ನಡೆಯುವ ಮತಾಂತರ ಹಾಗೂ ಮದುವೆ ಎರಡನ್ನೂ ನಿಷೇಧಿಸುವ ಕಾನೂನು ತರಲು ಮುಂದಾಯಿತು. ಅದನ್ನೇ ಕಾಯುತ್ತಿದ್ದ ಇತರ ರಾಜ್ಯಗಳ ಬಿಜೆಪಿ ಸರಕಾರಗಳು ಇದೇ ಆದೇಶವನ್ನು ಉಲ್ಲೇಖಿಸುತ್ತಾ ತಮ್ಮ ತಮ್ಮ ರಾಜ್ಯಗಳಲ್ಲೂ ಲವ್ ಜಿಹಾದ್ ಕಾನೂನನ್ನು ತರಲು ಈಗ ಮುಂದಾಗಿವೆ. ಆದರೆ ಹಿಂದುತ್ವ ರಾಜಕಾರಣವನ್ನು ಜಾರಿಯಾಗಿಸುವಲ್ಲಿ ಉತ್ತರ ಪ್ರದೇಶಕ್ಕಿಂತ ತನ್ನ ಸರಕಾರವೇ ಮುಂಚೂಣಿಯಲ್ಲಿದೆ ಎಂದು ಬೊಮ್ಮಾಯಿ ಸರಕಾರ ಸಂಘಪರಿವಾರಕ್ಕೆ ಸಾಬೀತುಪಡಿಸುವ ಉಮೇದಿನಲ್ಲಿದೆ. ಆದರೆ ಕಳೆದ ವರ್ಷದ ನವೆಂಬರ್ 11ರಂದು ಅದೇ ಅಲಹಾಬಾದ್ ಹೈಕೋರ್ಟಿನ ದ್ವಿಸದಸ್ಯ ಪೀಠವು ಈ ಬಗ್ಗೆ ಏಕಸದಸ್ಯ ಪೀಠದ ತೀರ್ಮಾನವು ನ್ಯಾಯ ಹಾಗೂ ಕಾನೂನು ಬಾಹಿರ ಎಂದು ಸ್ಪಷ್ಟವಾಗಿ ಉಲ್ಲೇಖಿಸಿ ಏಕಸದಸ್ಯ ಪೀಠದ ತೀರ್ಮಾನವನ್ನು ರದ್ದುಗೊಳಿಸಿದೆ. ಹಾಗೂ ಸ್ವಇಚ್ಛೆಯಿಂದ ಯಾವ ಧರ್ಮಕ್ಕೇ ಬೇಕಾದರೂ ಮತಾಂತರವಾಗುವ ಹಾಗೂ ತನ್ನ ಇಷ್ಟದವರನ್ನು ಮದುವೆಯಾಗುವ ಹಕ್ಕು ಈ ದೇಶದ ಸಂವಿಧಾನ ಈ ದೇಶದ ಪ್ರಾಪ್ತ ವಯಸ್ಕರಿಗೆ ಕೊಡುತ್ತದೆ. ಆ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸುವ ಯಾವ ಅಧಿಕಾರವೂ ಸರಕಾರಕ್ಕಾಗಲೀ, ಸಮಾಜಕ್ಕಾಗಲಿ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಆದೇಶನೀಡಿದೆ. ಅಲಹಾಬಾದಿನ ದ್ವಿಸದಸ್ಯ ಪೀಠದ ಆದೇಶದ ಪೂರ್ಣಪಠ್ಯವನ್ನು ಆಸಕ್ತರು ಈ ಕೆಳಗಿನ ವೆಬ್ ವಿಳಾಸದಲ್ಲಿ ಓದಬಹುದು:

https://www.livelaw.in/pdf_upload/pdf_upload-384996.pdf

 ಆದರೂ ಅದರ ತದ್ರೂಪಿ ಮಸೂದೆಯನ್ನೇ ಕರ್ನಾಟಕದ ಬಿಜೆಪಿ ಸರಕಾರವು ಜಾರಿ ಮಾಡುವ ಹುನ್ನಾರದಲ್ಲಿದೆ. ಅಂತಹ ಮಸೂದೆ ವಿಧಾನ ಸಭೆಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ ಪಾಸಾಗುತ್ತದೆ. ಆದರೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿಗೆ ಬಹುಮತವಿಲ್ಲ. ಆದರೆ ಅದಕ್ಕೆ ಆ ಚಿಂತೆಯೇನೂ ಇಲ್ಲ. ಏಕೆಂದರೆ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಮೆಜಾರಿಟಿ ಸಿಕ್ಕರೆ ನೇರವಾಗಿ, ಇಲ್ಲದಿದ್ದರೆ ಜೆಡಿಎಸ್ ಪಕ್ಷ ಗೋ ಹತ್ಯೆ ನಿಷೇಧ ಮಸೂದೆಗೆ ಕೊಟ್ಟಂತಹ ಪರೋಕ್ಷ ಬೆಂಬಲದ ಮೂಲಕ ಜಾರಿ ಮಾಡಬಹುದು. ಹೀಗಾಗಿ ಈ ಲವ್ ಜಿಹಾದ್ ಎಂಬ ಸಂಘಪರಿವಾರದ ಮಿಥ್ಯ ಕಥನದ ಇತಿಹಾಸವನ್ನು ಪರಿಶೀಲಿಸುವ ಅಗತ್ಯವಿದೆ.

ಲವ್ ಜಿಹಾದ್ ಜನಕರು ಯಾರು?

 ಈ ದೇಶದ ಮುಸ್ಲಿಮರನ್ನು ಸದಾ ದುರುಳೀಕರಿಸಲು ಹಾಗೂ ತಮ್ಮ ಧರ್ಮ ಹಾಗೂ ಜಾತಿಗಳ ಮಹಿಳೆಯರನ್ನು ತಮ್ಮ ಅಂಕೆಯಲ್ಲಿರಿಸಿಕೊಳ್ಳಲು ಇಲ್ಲಸಲ್ಲದ ಕಥನಗಳನ್ನು ಹುಟ್ಟಿಹಾಕುವ ಸಂಘಪರಿವಾರದ ಹೊಸಸೃಷ್ಟಿಯೇ ಈ ಲವ್ ಜಿಹಾದ್ ಎಂಬ ಕಥನ. ಮುಸ್ಲಿಂ ಯುವಕರು ಅಮಾಯಕ ಹಿಂದೂ ಮಹಿಳೆಯರನ್ನು ಬೈಕ್ ಸವಾರಿ, ಸುವಾಸನೆಯ ಅತ್ತರ್ ಇತ್ಯಾದಿ ಆಮಿಷಗಳಿಂದ ಪಟಾಯಿಸಿ ಮತಾಂತರ ಮಾಡಿ ಮದುವೆಯಾಗುತ್ತಿದ್ದಾರೆ. ಇದಕ್ಕಾಗಿ ಗಲ್ಫ್ ರಾಷ್ಟ್ರಗಳ ಜಿಹಾದಿ ಸಂಘಟನೆಗಳಿಂದ ಕೋಟ್ಯಂತರ ರೂಪಾಯಿ ಹಣ ಹರಿದು ಬರುತ್ತಿದೆ. ಇದರ ಹಿಂದೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಅಂತರ್‌ರಾಷ್ಟ್ರೀಯ ಸಂಚಿದೆ. ಆದ್ದರಿಂದ ಇದು ಲವ್ ಅಲ್ಲ. ಭಾರತದ ಮೇಲೆ ನಡೆಸುತ್ತಿರುವ ಲವ್ ಜಿಹಾದ್ ಆಗಿದೆ ಎಂಬುದು ಈ ಕಥನದ ಸಾರ. ಹೀಗಾಗಿ ಇದರ ಹಿಂದೆ ಕೇವಲ ಮುಸ್ಲಿಂ ಯುವಕರನ್ನು ಮತ್ತು ಇಸ್ಲಾಮನ್ನು ದುರುಳೀಕರಿಸುವ ಹುನ್ನಾರಗಳು ಮಾತ್ರವಲ್ಲದೆ ಹಿಂದೂ ಯುವತಿಯರು ಸ್ವಂತ ತಿಳವಳಿಕೆ ಇಲ್ಲದ, ಚಂಚಲಚಿತ್ತರು ಎಂದು ಚಿತ್ರಿಸುವ ಮನುವಾದಿ ರಾಜಕೀಯವೂ ಎದ್ದುಕಾಣುತ್ತದೆ. ಕರ್ನಾಟಕದಲ್ಲಿ ಶ್ರೀರಾಮ ಸೇನೆ ಹಾಗೂ ಬಜರಂಗದಳ 2007-9ರಲ್ಲಿ ಹುಟ್ಟುಹಾಕಿದ ಈ ಕಥನ ಜಗತ್ತಿನಾದ್ಯಂತ ವ್ಯಾಪಿಸಿ ನಂತರ ಸರಕಾರ ಹಾಗೂ ನ್ಯಾಯಾಲಯಗಳ ಅಧಿಕೃತ ದಾಖಲೆಗಳಲ್ಲೂ ಸ್ಥಾನ ಗೌರವ ಪಡೆದುಕೊಂಡು ಮಾನ್ಯತೆ ಪಡೆದುಕೊಂಡುಬಿಟ್ಟಿತು.

ಒಂದೆಡೆ ಶ್ರೀರಾಮ ಸೇನೆ ಕರ್ನಾಟಕದಲ್ಲಿ ಪ್ರತಿವರ್ಷ ಸಾವಿರಾರು ಹಿಂದೂ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ ಎಂದು ಪ್ರಚಾರ ಮಾಡಿದರೆ, ಕೇರಳದಲ್ಲಿ ಹಿಂದೂ ಜನಜಾಗೃತಿ ಸಂಘಟನೆಯು ಕೇರಳದಲ್ಲಿ 30,000 ಹಿಂದೂ ಯುವತಿಯರು ಲವ್ ಜಿಹಾದ್ ಆಗಿ ಬಿಟ್ಟಿದ್ದಾರೆಂದು ಕೇರಳದಾದ್ಯಂತ ಕರಪತ್ರ ಹಾಗೂ ಪೋಸ್ಟರ್‌ಗಳ ಕ್ಯಾಂಪೇನ್ ಮಾಡಿತು.

ಲವ್ ಜಿಹಾದ್ ನಡೆಯುತ್ತಿದೆಯೇ? 

ವಾಸ್ತವದಲ್ಲಿ ಲವ್ ಜಿಹಾದ್ ಬಗ್ಗೆ 2009ರಿಂದ ಬಿಜೆಪಿ ಸರಕಾರಗಳಿದ್ದ ರಾಜ್ಯಗಳನ್ನೂ ಒಳಗೊಂಡಂತೆ ದೇಶದ ವಿವಿಧ ರಾಜ್ಯಗಳ ಪೊಲೀಸರು, ಕೇಂದ್ರದ ಬಿಜೆಪಿ ಸರಕಾರದಡಿ ಎನ್‌ಐಎ ನಡೆಸಿದ ತನಿಖೆಗಳು ಹಾಗೂ ನ್ಯಾಯಾಲಯಗಳು ನಡೆಸಿದ ಎಲ್ಲಾ ವಿಚಾರಣೆಗಳು ‘ಲವ್ ಜಿಹಾದ್’ ಎಂಬ ಒಂದು ವಿದ್ಯಮಾನ ಈ ದೇಶದಲ್ಲಿ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಘೋಷಿಸಿವೆ.

ಕೆಲವು ಮುಖ್ಯ ಉದಾಹರಣೆಗಳು:
ಸಯನೈಡ್ ಮೋಹನ್ ಮತ್ತು ಶ್ರೀರಾಮ ಸೇನೆಯ ಲವ್ ಜಿಹಾದ್:

2007-09ರಲ್ಲಿ ಮಂಗಳೂರು ಜಿಲ್ಲೆಯ 20-30 ಪ್ರಾಯದ ಹತ್ತಾರು ಮಹಿಳೆಯರು ಕಾಣೆಯಾಗುತ್ತಾ ಹೋದರು. ಆ ಸರಣಿಯಲ್ಲಿ 2009ರ ಜೂನ್‌ನಲ್ಲಿ ಬಂಟ್ವಾಳದ 30 ವರ್ಷ ಪ್ರಾಯದ ಅನಿತಾ ಮೂಲ್ಯ ಎಂಬ ಮಹಿಳೆಯು ಕಾಣೆಯಾದದ್ದು ಇಡೀ ಕರ್ನಾಟಕದಲ್ಲಿ ಸುದ್ದಿಯಾಯಿತು. ಅದೇ ಸಂದರ್ಭವನ್ನು ಬಳಸಿಕೊಂಡು ಶ್ರೀರಾಮ ಸೇನೆಯು ಕಾಣೆಯಾದ ಎಲ್ಲಾ ಹಿಂದೂ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆಂದು ಹುಯಿಲೆಬ್ಬಿಸಿತು. ಆಗ ಅಧಿಕಾರದಲ್ಲಿದ್ದ ಯಡಿಯೂರಪ್ಪನೇತೃತ್ವದ ಬಿಜೆಪಿ ಸರಕಾರ ಕೂಡಲೇ ಸಿಐಡಿ ತನಿಖೆಗೆ ಆದೇಶಿಸಿತು. ಲವ್ ಜಿಹಾದ್ ಸಾಬೀತುಪಡಿಸಲು ಚುರುಕಾಗಿ ತನಿಖೆಗೆ ಇಳಿದ ಪೊಲೀಸರಿಗೆ ಸಿಕ್ಕಿದ್ದು ಜಿಹಾದಿಗಳಲ್ಲ. ಬದಲಿಗೆ ಮೋಹನ್ ಕುಮಾರ್ ಎಂಬ ಸೀರಿಯಲ್ ಮತ್ತು ಸಯನೈಡ್ ಕಿಲ್ಲರ್. ಈತ 2007-09ರ ಅವಧಿಯಲ್ಲಿ 20-35 ಪ್ರಾಯದ ಬಿಲ್ಲವ ಮತ್ತು ಇನ್ನಿತರ ದಮನಿತ ಹಿಂದೂ ಜಾತಿಗಳಿಗೆ ಸೇರಿದ 19ಕ್ಕೂ ಹೆಚ್ಚು ದುಡಿಯುವ ಮಹಿಳೆಯರನ್ನು ಮದುವೆಯಾಗುವ ಆಮಿಷ ತೋರಿಸಿ ಕೊಂದಿದ್ದ. ನಂತರ ಅವರ ಬಳಿ ಇದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ. ಆದರೆ ಆವರೆಗೆ ಹಿಂದೂ ಮಹಿಳೆಯರ ರಕ್ಷಣೆ, ಲವ್ ಜಿಹಾದ್ ಎಂದೆಲ್ಲಾ ವೀರಗಾಸೆ ಮಾಡುತ್ತಿದ್ದ ಹಿಂದೂ ವೀರರು, ದಿಢೀರ್ ಸುಮ್ಮನಾಗಿಬಿಟ್ಟರು! ಹಿಂದೂ ಧರ್ಮದೊಳಗೆ ದಮನಿತ ಜಾತಿಗಳಿಗೆ ಸೇರಿದ ಆ ಬಡ ಮಹಿಳೆಯರಿಗೆ ಪ್ರಾಪ್ತ ವಯಸ್ಸಾದರೂ ಏಕೆ ಮದುವೆಯಾಗುತ್ತಿಲ್ಲ? ಮದುವೆಯಾಗದ ಆ ಹೆಣ್ಣುಮಕ್ಕಳು ಮನೆ ಸಾಕುವ ಹೊಣೆ ಹೊತ್ತು ಕುಟುಂಬದಲ್ಲಿ ಹಾಗೂ ಹಿಂದೂ ಸಮಾಜದಲ್ಲಿ ಅನುಭವಿಸುತ್ತಿದ್ದ ಯಾತನೆಗಳೇನು? ಯಾವ ಹತಾಷೆ ಹಾಗೂ ಅಸಹಾಯಕತೆಗಳು ಅಥವಾ ಕನಸುಗಳು ಅವರನ್ನು ಸಯನೈಡ್ ಮೋಹನನಿಗೆ ಬಲಿಮಾಡಿತು ಎಂಬ ಪ್ರಶ್ನೆಗಳು ಈ ಹಿಂದೂ ವೀರರಿಗೆ ಹುಟ್ಟಲೇ ಇಲ್ಲ. ಆ ಹಿಂದೂ ಹೆಣ್ಣುಮಕ್ಕಳು ಬಲಿಯಾದದ್ದು ಲವ್ ಜಿಹಾದಿಗಲ್ಲ..ಬದಲಿಗೆ ಬಡತನ ಮತ್ತು ಹಿಂದೂ ಧರ್ಮದ ಪಿತೃಸ್ವಾಮ್ಯ ವ್ಯವಸ್ಥೆಯ ಜಿಹಾದಿಗೆ..

ಕರ್ನಾಟಕದಲ್ಲಿ ಲವ್ ಇದೆ- ಜಿಹಾದ್ ಇಲ್ಲ- ಸಿಐಡಿ ವರದಿ 2009ರಲ್ಲೇ ಚಾಮರಾಜನಗರದ ಸೆಲ್ಜಾರಾಜ್ ಎಂಬ ವಯಸ್ಕ ಕ್ರಿಶ್ಚಿಯನ್ ಮಹಿಳೆ ಸ್ವಇಚ್ಛೆಯಿಂದ ಕಣ್ಣೂರಿನ ಅಸ್ಗರ್ ಎಂಬ ಮುಸ್ಲಿಮ್ ಯುವಕನನ್ನು ಪ್ರೀತಿಸಿ ಮದುವೆಯಾದರು. ಸೆಲ್ಜಾ ಅವರ ಅಪ್ಪಕೊಟ್ಟ ದೂರಿನ ಮೇರೆಗೆ ಪೊಲೀಸರು ಅದನ್ನು ಲವ್ ಜಿಹಾದ್ ಪ್ರಕರಣವೆಂದು ನೋಂದಾಯಿಸಿಕೊಂಡರು. ವಿಷಯ ನ್ಯಾಯಾಲಯವನ್ನು ತಲುಪಿ ಕರ್ನಾಟಕ ಹೈಕೋರ್ಟು ವಿಷಯದ ತನಿಖೆ ನಡೆಸಲು ಸಿಐಡಿಗೆ ಆದೇಶಿಸಿದರು. ಬಿಜೆಪಿ ಸರಕಾರದಡಿಯಿದ್ದ ಪೊಲೀಸರೇ ತನಿಖೆ ನಡೆಸಿ ಸೆಲ್ಜಾರಾಜ್-ಅಸ್ಗರ್ ಅವರದ್ದು ಸ್ವಚ್ಛಂದ ಪ್ರೇಮವಿವಾಹವೇ ವಿನಾ ಲವ್ ಜಿಹಾದೆಂಬುದೇನೂ ಇಲ್ಲವೆಂದು ವರದಿ ಕೊಟ್ಟಿರು. ಹೀಗಾಗಿ ಸೆಲ್ಜಾರಾಜ್-ಅಸ್ಗರ್ ದಂಪತಿಯ ವೈವಾಹಿಕ ಜೀವನಕ್ಕೆ ಹೈಕೋರ್ಟ್ ಅವಕಾಶ ನೀಡಿತು. ಆದರೂ ಹಿಂದೂ ಸಂಘಟನೆಗಳು ಆರೋಪಿಸುವಂತೆ ಕರ್ನಾಟಕದಲ್ಲಿ ಕಣ್ಮರೆಯಾಗುತ್ತಿರುವ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆಯೇ ಎಂದು ತನಿಖೆ ಮಾಡಿ ವರದಿ ಮಾಡಲು ಸಿಐಡಿಗೆ ಆದೇಶಿಸಿತು.
ಅದರಂತೆ 2005-09ರ ನಡುವೆ ನಾಪತ್ತೆಯಾದ ಮಹಿಳೆಯರ ತನಿಖೆಯನ್ನು ಕೈಗೊಂಡ ಸಿಐಡಿ ಅಂತಹ 21,890 ಪ್ರಕರಣಗಳನ್ನು ಗುರುತಿಸಿತು ಹಾಗೂ ಲವ್ ಜಿಹಾದ್ ಬಗ್ಗೆ ಹಿಂದೂ ಸಂಘಟನೆಗಳ ಬಳಿ ಇರುವ ಮಾಹಿತಿಗಳನ್ನು ಪಡೆದುಕೊಳ್ಳಲು ಮುಂದಾಯಿತು. ಆದರೆ ಸಿಐಡಿಯ ಪ್ರಕಾರ ಹಿಂದೂ ಸಂಘಟನೆಗಳು ಈ ಬಗ್ಗೆ ಯಾವ ಉಪಯುಕ್ತ ಮಾಹಿತಿಗಳನ್ನೂ ಕೊಡಲಿಲ್ಲ!
 
ಸಿಐಡಿ ಕಲೆಹಾಕಿದ ಮಾಹಿತಿಯ ಪ್ರಕಾರ ನಾಪತ್ತೆಯಾದ ಪ್ರಕರಣಗಳಲ್ಲಿ 229 ಮಹಿಳೆಯರು ಮಾತ್ರ ಅಂತರ್ ಧರ್ಮೀಯ ಮದುವೆಯಾಗಿದ್ದರು. ಹಾಗೂ ಅದರಲ್ಲಿ 63 ಪ್ರಕರಣಗಳಲ್ಲಿ ಮಾತ್ರ ಮತಾಂತರವಾಗಿತ್ತು. ಆದರೆ ಹಿಂದೂ ಮಹಿಳೆಯೆರು ಮುಸ್ಲಿಂ ಪುರುಷರನ್ನು ಮದುವೆಯಾಗಿದ್ದಂತೆ, ಮುಸ್ಲಿಂ ಮಹಿಳೆಯರು ಹಿಂದೂ ಪುರುಷರನ್ನೂ ಹಾಗೂ ಕ್ರಿಶ್ಚಿಯನ್ ಮಹಿಳೆಯರು ಮುಸ್ಲಿಂ ಪುರುಷರನ್ನೂ ಮದುವೆಯಾದ ಉದಾಹರಣೆಗಳಿದ್ದವು. ಈ ಎಲ್ಲಾ ತನಿಖೆಗಳನ್ನು ಆಧರಿಸಿ 2009ರ ಡಿಸೆಂಬರ್‌ನಲ್ಲಿ ಕರ್ನಾಟಕ ಸಿಐಡಿಯು ಕರ್ನಾಟಕದಲ್ಲಿ ಲವ್ ಜಿಹಾದ್ ಪ್ರಕರಣಗಳು ನಡೆದಿಲ್ಲವೆಂದು ಸ್ಪಷ್ಟವಾದ ವರದಿಯನ್ನು ಕೋರ್ಟಿಗೆ ಸಲ್ಲಿಸಿತು. ಇದನ್ನು ಆಧರಿಸಿ ಕರ್ನಾಟಕ ಹೈಕೋರ್ಟ್‌ನ ದ್ವಿಸದಸ್ಯ ಪೀಠ 2013ರಲ್ಲಿ ಕರ್ನಾಟಕದಲ್ಲಿ ಲವ್ ಜಿಹಾದ್ ಪ್ರಕರಣಗಳಿಲ್ಲವೆಂದು ವಿಚಾರಣೆಯನ್ನು ಮುಕ್ತಾಯ ಮಾಡಿತು. ಸಿಐಡಿಯು ತನ್ನ ವರದಿಯಲ್ಲಿ ಹಿಂದೂ ಮಹಿಳೆಯರ ನಾಪತ್ತೆ ವಿದ್ಯಮಾನದಲ್ಲಿ ಲವ್ ಜಿಹಾದ್‌ಗಿಂತ ಹೆಂಗಸರನ್ನು ವೇಶ್ಯಾವಾಟಿಕೆಗೆ ದೂಡುವ ಧರ್ಮಾತೀತ ದಲ್ಲಾಳಿ ಗುಂಪುಗಳ ಹಾವಳಿ ಹೆಚ್ಚು ಕಳವಳಕಾರಿ ಎಂದು ಗುರುತಿಸಿತ್ತು. ಆದರೆ ಇದನ್ನು ನಿಗ್ರಹಿಸಲು ಸರಕಾರ ಕಠಿಣಕ್ರಮ ತೆಗೆದುಕೊಳ್ಳಬೇಕೆಂಬ ಯಾವ ಆಗ್ರಹಗಳನ್ನು ಈ ಸ್ವಘೋಷಿತ ಹಿಂದೂ ರಕ್ಷಕರು ಮಾಡಲೇ ಇಲ್ಲ. ಆಸಕ್ತರು ಕರ್ನಾಟಕ ಹೈಕೋರ್ಟಿನ ಆದೇಶವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:

http://judgmenthck.kar.nic.in/judgments/bitstream/123456789/907138/1/WPHC158-09-06-11-2013.pdf

ಕೇರಳದಲ್ಲೂ ಲವ್ ಜಿಹಾದ್ ಇಲ್ಲ-ಹೈಕೋರ್ಟ್

ಅದೇ ಅವಧಿಯಲ್ಲಿ ಕೇರಳದಲ್ಲೂ ಹಿಂದೂ ಜನಜಾಗೃತಿ ಇನ್ನಿತ್ಯಾದಿ ಹಿಂದುತ್ವವಾದಿ ಸಂಘಟನೆಗಳು ಕೇರಳದಲ್ಲಿ 30,000ಕ್ಕೂ ಹೆಚ್ಚು ಹಿಂದೂ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆಂದು ಆಕ್ರಮಣಕಾರಿ ಪ್ರಚಾರ ಪ್ರಾರಂಭಿಸಿದ್ದರು. ಹೀಗಾಗಿ ಕೇರಳ ಹೈಕೋರ್ಟ್ ಸಹ ಈ ಬಗ್ಗೆ ತನಿಖೆಯನ್ನು ಮಾಡಲು ಕೇರಳದ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿತು. ಅದರಂತೆ ಕೂಲಂಕಷವಾದ ತನಿಖೆ ಕೈಗೊಂಡ ಕೇರಳದ ಪೊಲೀಸರು ಕೇರಳದಲ್ಲೆಲ್ಲೂ ಯಾವುದೇ ಅಂತರ್‌ರಾಷ್ಟ್ರೀಯ ಷಡ್ಯಂತ್ರದ ಭಾಗವಾಗಿ ಯಾವುದೇ ಮುಸ್ಲಿಂ ಸಂಘಟನೆಗಳು ವ್ಯವಸ್ಥಿತವಾಗಿ ಹಿಂದೂ ಮಹಿಳೆಯರನ್ನು ಲವ್ ಜಿಹಾದ್‌ನ ಜಾಲದಲ್ಲಿ ಸಿಲುಕಿಸುತ್ತಿರುವುದು ಪತ್ತೆಯಾಗಿಲ್ಲ ಎಂದು ವರದಿ ಕೊಟ್ಟರು. ಮಾತ್ರವಲ್ಲ. ಹಾಗೆ ಸುಳ್ಳು ಪ್ರಚಾರ ಮಾಡಿ ಸಮಾಜದ ಶಾಂತಿ ಭಂಗ ಮಾಡಿದ್ದಕ್ಕಾಗಿ ಹಿಂದೂ ಜನ ಜಾಗೃತಿ ಸಂಘಟನೆಯ ಮೇಲೆ ಎಫ್‌ಐಆರ್ ದಾಖಲಿಸಿದರು. ಈ ವರದಿಯನ್ನು ಆಧರಿಸಿ ಕೇರಳದ ಹೈಕೋರ್ಟ್ 2012ರಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಯನ್ನು ಮುಕ್ತಾಯಗೊಳಿಸಿತು.

ಅಖಿಲಾ ಎಂಬ ಹಾದಿಯಾ ಮತ್ತು ವ್ಯಕ್ತಿ ಸ್ವಾತಂತ್ರ್ಯ

ಹೀಗೆ ಕೋರ್ಟ್‌ಗಳು ಮತ್ತು ಪೊಲೀಸ್ ತನಿಖೆಗಳು ಅಧಿಕೃತವಾಗಿ ಲವ್ ಜಿಹಾದನ್ನು ನಿರಾಕರಿಸಿದ ನಂತರ ಇದರ ಸುತ್ತ ಸ್ವಘೋಷಿತ ಹಿಂದೂ ರಕ್ಷಕರ ಹುಯಿಲೂ ಕಡಿಮೆಯಾಗಿತ್ತು. ಆದರೆ 2016ರಲ್ಲಿ ಕೇರಳದಲ್ಲಿ ಅಖಿಲಾ ಎಂಬ 24 ವರ್ಷದ ಹಿಂದೂ ಯುವತಿ ಸ್ವ ಇಚ್ಛೆಯ ಮೇರೆಗೆ ಇಸ್ಲಾಂ ಧರ್ಮ ಸ್ವೀಕರಿಸಿ ಹಾದಿಯಾ ಆದಳು. ಆ ನಂತರ ಮುಸ್ಲಿಂ ಯುವಕನನ್ನು ಮದುವೆಯಾದಳು. ಈ ಮದುವೆಯ ಬಗ್ಗೆ ಸಮ್ಮತಿ ಇರದ ಅವರ ತಂದೆ ಅಶೋಕನ್ ಇದು ಬಲವಂತದ ಮತಾಂತರ ಹಾಗೂ ಮದುವೆ ಎಂದು ದೂರಿತ್ತಿದ್ದರಿಂದ ಈ ಪ್ರಕರಣ ಹಿಂದೂ ಸಂಘಟನೆಗಳಿಗೆ ಆಹಾರವಾಯಿತು. ಪ್ರಕರಣವು ಹೈಕೋರ್ಟ್‌ನ ಮೆಟ್ಟಿಲೇರಿ, ಕೇರಳ ಹೈಕೋರ್ಟ್ ಹಿಂದೆಮುಂದೆ ನೋಡದೆ ಇದೊಂದು ‘ಲವ್ ಜಿಹಾದ್’ ಪ್ರಕರಣವೆಂದು ಪರಿಗಣಿಸಿ ಸಾಂವಿಧಾನಿಕವಾಗಿ ತನ್ನಿಚ್ಛೆ ಬಂದವರನ್ನು ಮದುವೆಯಾಗುವ ವಯಸ್ಸು ಹಾಗೂ ಅಧಿಕಾರ ಹೊಂದಿದ್ದ ಹಾದಿಯಾಳ ನಿರ್ಧಾರವನ್ನು ಅಸಿಂಧುವೆಂದು ಘೋಷಿಸಿ ಮದುವೆಯನ್ನು ರದ್ದುಪಡಿಸಿತು. ಇದರ ವಿರುದ್ಧ ಹಾದಿಯಾಳ ಪತಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದರು. 2018ರಲ್ಲಿ ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ತನ್ನ ಅಂತಿಮ ತೀರ್ಮಾನವನ್ನು ಘೋಷಿಸಿತು.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News