ಬಿಎಂಟಿಸಿ ಖಾಸಗೀಕರಣ ಇಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಬೆಳಗಾವಿ, ಡಿ.24: ರಾಜಧಾನಿ ಬೆಂಗಳೂರಿನ ಬಿಎಂಟಿಸಿ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಪರಿಷತ್ತಿನ ಸಭಾನಾಯಕ ಕೋಟ ಶ್ರೀನಿವಾಸ್ ಪೂಜಾರಿ ಸ್ಪಷ್ಟಪಡಿಸಿದರು.
ಶುಕ್ರವಾರ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಸಾರಿಗೆ ಸಚಿವರ ಪರವಾಗಿ ಉತ್ತರಿಸಿದ ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣದ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದರು.
ಮತ್ತೊಂದೆಡೆ ಒಟ್ಟು 733 ಕೋಟಿ ಸಾಲ ಪಡೆಯಲಾಗಿದೆ. ಈ ಪೈಕಿ 195 ಮರು ಪಾವತಿ ಮಾಡಲಾಗಿದೆ ಎಂದ ಅವರು, ಸಾರಿಗೆ ಸಂಸ್ಥೆಗಳ ಹಳೆಯ ಬಸ್ಸು 8 ಲಕ್ಷ ಕಿ.ಮೀ ಅಥವಾ 11 ವರ್ಷ ಪೂರ್ಣಗೊಳಿಸಿದರೆ ಅದನ್ನು ವಿಲೇವಾರಿ ಮಾಡಲಾಗುವುದೆಂದು ಹೇಳಿದರು.
2017-18ನೆ ಸಾಲಿನ ಆಯವ್ಯಯ ಅನ್ವಯ ಆಸಲು ಮತ್ತು ಬಡ್ಡಿ ಸಹಾಯಧನ ಯೋಜನೆಯಡಿಯಲ್ಲಿ ಬಿಎಂಟಿಸಿಗೆ 1500 ಡೀಸೆಲ್ ಬಸ್ಗಳನ್ನು ಖರೀದಿಸಲು ರಾಜ್ಯ ಸರಕಾರ ಘೋಷಿಸಿದ ಅನುದಾನದಲ್ಲಿ 857 ಬಸ್ಸುಗಳನ್ನು ಖರೀದಿಸಲಾಗುತ್ತಿದೆ ಎಂದರು.
ಅದೇ ರೀತಿ, ಪ್ರಸ್ತುತ 643 ಬಸ್ಸುಗಳನ್ನು ಖರೀದಿಸಲು ಟೆಂಡರ್ ಅನ್ನು ಅಂತಿಮಗೊಳಿಸಿದ್ದು, ಅನುದಾನ ಲಭ್ಯತೆಗೆ ಅನುಗುಣವಾಗಿ 565 ಹವಾನಿಯಂತ್ರಿತವಲ್ಲದ ಸಾಧಾರಣ ವಾಹನಗಳನ್ನು ಮಾತ್ರ ಖರೀದಿಸಲಾಗುತ್ತಿದೆ ಎಂದು ಸದನಕ್ಕೆ ತಿಳಿಸಿದರು.