ಅಜಯ್ ಮಿಶ್ರಾಗೆ ಬೆದರಿಕೆ ಕರೆ ಮಾಡಿ ಹಣದ ಬೇಡಿಕೆ ಇರಿಸಿದ ಐವರ ಬಂಧನ
Update: 2021-12-24 18:41 GMT
ಹೊಸದಿಲ್ಲಿ, ಡಿ. 24: ಕೇಂದ್ರದ ಸಹಾಯಕ ಸಚಿವ ಅಜಯ್ ಮಿಶ್ರಾ ಅವರನ್ನು ಫೋನ್ ಕರೆಗಳ ಮೂಲಕ ಬೆದರಿಸಿ ಹಣ ಸುಲಿಗೆಗೆ ಯತ್ನಿಸಿದ್ದ ಐವರು ಆರೋಪಿಗಳನ್ನು ದಿಲ್ಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತರೆಲ್ಲರೂ ಬಿಪಿಒ ಉದ್ಯೋಗಿಗಳು. ಉತ್ತರಪ್ರದೇಶದ ಲಖಿಂಪುರಖೇರಿಯಲ್ಲಿ ನಡೆದ ಹಿಂಸಾಚಾರದ ಪ್ರಕರಣಗಳಿಗೆ ಸಂಬಂಧಿಸಿದ ಆಪಾದನೆಯ ವೀಡಿಯೊ ಹಾಗೂ ಇತರ ಸಾಕ್ಷಗಳು ತಮ್ಮಲ್ಲಿವೆ ಎಂದು ಬೆದರಿಸಿ ಅಜಯ್ ಮಿಶ್ರಾ ಅವರಿಂದ ಕೋಟಿ ರೂಪಾಯಿ ಸುಲಿಗೆ ಮಾಡಲು ಇವರು ಯತ್ನಿಸಿದ್ದರು. ನೋಯ್ಡಿದಿಂದ ನಾಲ್ಕು ಮಂದಿಯನ್ನು ಹಾಗೂ ದಿಲ್ಲಿಯಿಂದ ಒಬ್ಬರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ‘‘ಹಣ ನೀಡುವಂತೆ ಬೆದರಿಕೆ ಒಡ್ಡಿದ ಫೋನ್ ಕರೆ ಸ್ವೀಕರಿಸಿರುವುದಾಗಿ ಸಚಿವರ ಸಿಬ್ಬಂದಿಯಿಂದ ದೂರು ಸ್ವೀಕರಿಸಿದ್ದೆವು. ಹೊಸದಿಲ್ಲಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಯಿತು’’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.