15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್ ಲಸಿಕೆ ಅಭಿಯಾನಕ್ಕೆ ಮುಖ್ಯಮಂತ್ರಿ ಚಾಲನೆ
ಬೆಂಗಳೂರು, ಜ.3: ರಾಜ್ಯದಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಚಾಲನೆ ನೀಡಿದರು.
ಬೆಂಗಳೂರಿನ ಮೂಡಲಪಾಳ್ಯದ ಭೈರವೇಶ್ವರ ನಗರದ ಬಿಬಿಎಂಪಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ, ಆರೋಗ್ಯಭರಿತ ಹಾಗೂ ಕೋವಿಡ್ ಮುಕ್ತ ವರ್ಷವನ್ನಾಗಿ ಮಾಡಲು ಸಂಕಲ್ಪ ಮಾಡೋಣ. ಕೋವಿಡ್ ವಿರುದ್ದ ಒಟ್ಟಾಗಿ ಸಮರವನ್ನು ಸಾರಿ ತೊಲಗಿಸಲು ಪಣ ತೊಡೋಣ ಎಂದು ಕರೆ ನೀಡಿದರು.
ಬಿ.ಎಸ್.ಯಡಿಯೂರಪ್ಪರ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಕೋವಿಡ್ ನ್ನು ನಿಯಂತ್ರಣ ಮಾಡಲಾಯಿತು. ಔಷಧಿ, ಬೆಡ್, ಆಕ್ಸಿಜನ್, ಸಮಸ್ಯೆಗಳನ್ನು ನಿಭಾಯಿಸಿ, ಕರ್ನಾಟಕವನ್ನು ಸುರಕ್ಷಿತ ರಾಜ್ಯ ವನ್ನಾಗಿಸಲು ಅವರು ತೆಗೆದುಕೊಂಡ ಕ್ರಮಗಳು ಕಾರಣ ಎಂದರು.
ನಮ್ಮ ಸರ್ಕಾರ ಕೋವಿಡ್ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಹೀಗಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೋವಿಡ್ ಕಡಿಮೆ ಇದೆ. ಸೂಕ್ತ ಕ್ರಮಗಳನ್ನು ತೆಗೆದುಕೊಂಡ ಕಾರಣ ಇದನ್ನು ಸಾಧಿಸಲಾಗಿದೆ. ವೈಜ್ಞಾನಿಕ ಚಿಂತನೆ ಮಾಡಬೇಕು. ಸರಿಯಾದ ಕಾರ್ಯಸೂತ್ರ ರೂಪಿಸಿ,ಜನರನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು. ಆರೋಗ್ಯ ಮೂಲ ಸೌಕರ್ಯಗಳನ್ನು ಸಿದ್ಧಗೊಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡುತ್ತಿದೆ ಎಂದರು.
ಕೋವಿಡ್ ನಿಯಂತ್ರಣ ಸಾಧಿಸಲು ನೇರವಾದ ಎಲ್ಲಾ ಕೋವಿಡ್ ಸೇನಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ ಮುಖ್ಯಮಂತ್ರಿ ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು, ಇಲಾಖಾ ಮುಖ್ಯಸ್ಥರ ಪರಿಶ್ರಮದಿಂದ ಈ ಕೆಲಸವಾಗಿದೆ. ನಗರ ಪ್ರದೇಶದಲ್ಲಿ ನಮ್ಮ ನಗರಾಭಿವೃದ್ಧಿ ಸಚಿವರು ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಕೋವಿಡ್ ಹರಡದಿರಲು ಗಂಭೀರ ಯೋಜನೆ: ಇದರಿಂದಾಗಿ ಆರೋಗ್ಯ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದ್ದು, ತಳಮಟ್ಟದಲ್ಲಿ ಆರೋಗ್ಯ ಮೂಲಸೌಕರ್ಯ ಹೆಚ್ಚಳವಾಗಿದೆ. ಮೂರನೇ ಅಲೆ ಎಂದು ಬಿಂಬಿತವಾಗಿರುವ ಒಮೈಕ್ರಾನ್ ನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಗಡಿ ಭದ್ರತೆ, ಆರ್.ಟಿ.ಪಿ.ಸಿ.ಆರ್ ಕಡ್ಡಾಯ, ಎರಡು ಡೋಸ್ ಲಸಿಕೆಯಾಗಿರುವ ಬಗ್ಗೆ ಪರಿಶೀಲನೆ, ಸಂಪರ್ಕ ಪತ್ತೆ ಮಾಡುವ ಮೂಲಕ ಕ್ರಮ ಕೈಗೊಂಡಿದೆ. ಒಂದು ವಾರದಲ್ಲಿ ಪ್ರಕರಣಗಳು ಉಲ್ಬಣಗೊಂಡಿದ್ದು, ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಎರಡು ಅಲೆಗಳನ್ನು ನಿಭಾಯಿಸಿರುವ ಅನುಭವದ ಹಿನ್ನೆಲೆಯಲ್ಲಿ ಇದನ್ನು ವಿಭಿನ್ನವಾಗಿ ನಿಭಾಯಿಸಬೇಕಿದೆ. ಬೆಳೆಯುತ್ತಿರುವ ಆರ್ಥಿಕತೆಯನ್ನು ಗಮನಿಸಿ, ಕೋವಿಡ್ ಹರಡದಂತೆ ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ಗಂಭೀರ ಯೋಜನೆಗಳನ್ನು ರೂಪಿಸಲಾಗುವುದು. ಇದಕ್ಕೆ ಜನರ ಸಹಕಾರ ಅಗತ್ಯ. ಕರ್ನಾಟಕದ ಮಹಾಜನತೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಮನವಿ ಮುಖ್ಯಮಂತ್ರಿ ಮಾಡಿದರು.
ಲಸಿಕೆ ಅಭಿಯಾನಕ್ಕೆ ಸಹಕರಿಸಿ: 15- 18 ವರ್ಷದ ಮಕ್ಕಳ ಆರೋಗ್ಯ ಬಹಳ ಮುಖ್ಯ. ರಾಜ್ಯದ್ಯಂತ ಇಂದು 4.41 ಲಕ್ಷ ಮಕ್ಕಳಿಗೆ ಹಾಗೂ ಬೆಂಗಳೂರಿನಲ್ಲಿ 30 ಸಾವಿರ ಲಸಿಕೆಗಳನ್ನು ನೀಡಲಾಗುತ್ತಿದೆ. ಎರಡನೇ ಡೋಸ್ ನ್ನು 28 ದಿನಗಳ ನಂತರ ನೀಡಲಾಗುವುದು. ಜನವರಿ 10ರ ನಂತರ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಕೋ- ಮಾರ್ಬಿಡಿಟಿ ಇರುವವರಿಗೆ ಲಸಿಕೆ ನೀಡಲಾಗುವುದು. ಕೋವಿಡ್ ವಿರುದ್ಧ ಸುರಕ್ಷಾ ಚಕ್ರವನ್ನು ಕನ್ನಡಿಗರಿಗೆ, ವಿಶೇಷವಾಗಿ ಮಕ್ಕಳಿಗೆ ನೀಡಬೇಕು. ಅದಕ್ಕೆ ಪೋಷಕರು,ಮಕ್ಕಳು, ಶಿಕ್ಷಕರೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರಧಾನಮಂತ್ರಿ ಕ್ರಮ ವಿಶ್ವಕ್ಕೆ ಮಾದರಿ: ಕರೋನಾ ಬಗ್ಗೆ ಏನೂ ತಿಳಿಯದಿದ್ದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅದನ್ನು ಮುಂಚೂಣಿಯಲ್ಲಿ ನಿಂತು ಅದು ಒಡ್ಡಿದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಚಿವರಾದ ವಿ.ಸೋಮಣ್ಣ, ಡಾ.ಕೆ.ಸುಧಾಕರ, ಬೈರತಿ ಬಸವರಾಜ, ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತು ಇತರರು ಉಪಸ್ಥಿತರಿದ್ದರು.