ಬೆಂಗಳೂರು: ಲಂಚ ಪಡೆದ ಆರೋಪ; ಪೊಲೀಸ್ ಇನ್ಸ್ಪೆಕ್ಟರ್ ಅಮಾನತು
Update: 2022-01-03 18:10 IST
ಬೆಂಗಳೂರು, ಜ.3: ಲಂಚ ಪಡೆದ ಆರೋಪ ಕೇಳಿಬಂದ ಹಿನ್ನೆಲೆ ಇಲ್ಲಿನ ಮಡಿವಾಳ ಠಾಣೆ ಇನ್ಸ್ಪೆಕ್ಟರ್ ಸುನೀಲ್ ನಾಯಕ್ ಅವರನ್ನು ಅಮಾನತುಗೊಳಿಸಲಾಗಿದೆ.
ವರದಕ್ಷಿಣೆ ಕಿರುಕುಳ ಸಂಬಂಧ ಆರೋಪಿ ಅಜಯ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಕರಣದಲ್ಲಿ ಕೋರ್ಟ್ಗೆ ಹಾಜರಾಗದ ಅಜಯ್ ವಿರುದ್ಧ ವಾರೆಂಟ್ ಜಾರಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಮುಂಬೈಯಿಂದ ಆರೋಪಿ ಅಜಯ್ನನ್ನು ವಾರೆಂಟ್ ಮೇಲೆ ಕರೆತಂದಿದ್ದ ಪೊಲೀಸರು ಹಣ ಪಡೆದು ಬಿಟ್ಟು ಕಳಿಸಿದ್ದರು ಎನ್ನಲಾಗಿದೆ.
ಬಳಿಕ ಆರೋಪಿ ಪೊಲೀಸರಿಗೆ ಲಂಚದ ರೂಪದಲ್ಲಿ ಹಣ ಕೊಡುವ ವಿಡಿಯೊ ಮಾಡಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಳುಹಿಸಿದ್ದಾನೆ. ಈ ವಿಡಿಯೊ ಆಧರಿಸಿ ಡಿಸಿಪಿ ಶ್ರೀನಾಥ್ ಜೋಷಿ ಅವರಿಗೆ ಕಮಿಷನರ್ ಕಮಲ್ ಪಂತ್ ವರದಿ ಕೇಳಿದ್ದರು.
ಡಿಸಿಪಿ ವರದಿ ಆಧರಿಸಿ ಕಮಲ್ ಪಂತ್ ಅವರು ಇನ್ಸ್ಪೆಕ್ಟರ್ ಸುನೀಲ್ ನಾಯಕ್ರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.