ಕೋವಿಡ್ ನಿರ್ಬಂಧ ಉಲ್ಲಂಘಿಸಿದರೆ ಪ್ರಕೃತಿ ವಿಕೋಪ ತಡೆ ಕಾಯ್ದೆಯಡಿ ಕ್ರಮ: ಸಚಿವ ಆರಗ ಜ್ಞಾನೇಂದ್ರ
Update: 2022-01-08 13:59 IST
ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕು ಹಾಗೂ ಒಮೈಕ್ರಾನ್ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ವಿಧಿಸಿದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಪ್ರಕೃತಿ ವಿಕೋಪ ತಡೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ಧಾರೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿರುವ ಗೃಹ ಸಚಿವರು, ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ರಾಜಕೀಯ ಅಧಿಕಾರಕ್ಕಾಗಿ ಇರುವ ನಡಿಗೆ. ಜನಸಾಮಾನ್ಯರಿಗೆ ಇರುವ ಕಾಯ್ದೆ ಏನಿದೆಯೋ ಅದು ಎಲ್ಲರಿಗೂ ಅನ್ವಯವಾಗುವಂತದ್ದು, ಬಿಜೆಪಿ, ಕಾಂಗ್ರೆಸ್ಗೆ ಬೇರೆ, ಜೆಎಡಿಎಸ್ಗೆ ಬೇರೆ ಇಲ್ಲ ಎಂದು ತಿಳಿಸಿದರು.
''ಜನತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆಗಳಿಗೆ ಅವಕಾಶ ಇದ್ದು, ಬೇರೆ ಸಮಯದಲ್ಲಿ ಪ್ರತಿಭಟನೆ, ಸಭೆಗಳನ್ನು ನಡೆಸಬಹುದು, ಆದರೆ ಈಗ ಏಕೆ? ಚುನಾವಣೆಗೆ ಇನ್ನೂ ಸಮಯ ಇದೆ ಇಷ್ಟು ಬೇಗ ಏಕೆ ರಾಜಕಾರಣ ಮಾಡುತ್ತೀರಿ'' ಎಂದು ಸಚಿವರು ಪ್ರಶ್ನಿಸಿದರು.