ಸರಳ ಕನ್ನಡವನ್ನು ಹೇರಿಕೊಳ್ಳುವ ಮುನ್ನ

Update: 2022-01-09 18:07 GMT

ಮಾನ್ಯರೇ,

ಇತ್ತೀಚಿನ ದಿನಗಳಲ್ಲಿ ‘ಎಲ್ಲರ ಕನ್ನಡ’ದ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಕೆಲವರು ಈ ಬಗ್ಗೆ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ. ಸರಳಗನ್ನಡ, ಎಲ್ಲರು ಕನ್ನಡ ಭಾಷೆಯನ್ನು ಉಪಯೋಗಿಸುವ ವಿಚಾರ ನಿಜಕ್ಕೂ ಒಳ್ಳೆಯ ವಿಷಯವಾಗಿದೆ. ಇದರ ಉದ್ದೇಶ, ಸಂವಹನ ಇನ್ನಷ್ಟು ಸುಲಭವಾಗಬೇಕು ಎನ್ನುವುದಾಗಿರಬೇಕು. ಆದುದರಿಂದ, ಸರಳ ಪದದ ಅನ್ವೇಷಣೆಯಲ್ಲಿ ಕನ್ನಡವನ್ನು ಇನ್ನಷ್ಟು ಕ್ಲಿಷ್ಟಗೊಳಿಸಿದರೆ, ಅಳಿದುಳಿದ ಕನ್ನಡದ ಆಸಕ್ತಿಯೂ ಜನರಿಂದ ಹೊರಟು ಹೋಗಬಹುದು.

ಮುಖ್ಯವಾಗಿ, ಕೆಲವು ಕನ್ನಡ ಪಂಡಿತರು ತಮ್ಮ ವಿಮರ್ಶೆ, ಸಂಶೋಧನೆಗಳಲ್ಲಿ ಬಳಸುವ ಪಾರಿಭಾಷಿಕ ಶಬ್ದಗಳಿಗೆ ಸರಳಗನ್ನಡ ಪದಗಳನ್ನು ಹುಡುಕುವ ಕೆಲಸ ನಡೆದರೆ ಒಳ್ಳೆಯದು. ಇಂದಿಗೂ ಕನ್ನಡದ ಮಹತ್ವದ ವಿಮರ್ಶಕರು, ಚಿಂತಕರ ಕನ್ನಡ ಜನಸಾಮಾನ್ಯರಿಗೆ ಅರ್ಥವೇ ಆಗುವುದಿಲ್ಲ. ನವ್ಯ ಸಾಹಿತ್ಯ ಕಾಲದಲ್ಲಿ, ಪ್ರತಿ ಕವಿಯೂ ಒಬ್ಬ ಪುರೋಹಿತ ವಿಮರ್ಶಕನನ್ನು ಇಟ್ಟುಕೊಂಡಿದ್ದ. ಮತ್ತು ಆತನ ಮೊಹರು ಒತ್ತಿದ ಬಳಿಕವಷ್ಟೇ ಕನ್ನಡ ಸಾಹಿತ್ಯ ಅದನ್ನು ಒಪ್ಪಿಕೊಳ್ಳುವಂತಹ ಸನ್ನಿವೇಶವಿತ್ತು. ಕನ್ನಡ ವಿದ್ವಾಂಸರ ಮೇಲರಿಮೆ ಅಳಿಯಬೇಕು. ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳಗನ್ನಡವೊಂದು ರೂಪುಗೊಳ್ಳುವ ಅನಿವಾರ್ಯತೆ ಇದೆ. ಹಾಗೆಂದು, ಒಬ್ಬರಿಗೆ ಸರಳ ಗನ್ನಡವಾಗಿ ಭಾಸವಾದುದು, ಕರ್ನಾಟಕದ ಇನ್ನೊಂದು ಭಾಗದವರಿಗೆ ಅಪರಿಚಿತ ಶಬ್ದವೇ ಆಗಿರಬಹುದು. ಆಗ ಏನು ಮಾಡಬೇಕು? ಸರಳ ಗನ್ನಡದಿಂದ ನಮ್ಮ ಸಂವಹನ ಇನ್ನಷ್ಟು ಸರಳ, ಸಲೀಸು ಆಗದೇ ‘ಬದಲಾವಣೆಗಾಗಿ ಬದಲಾವಣೆ’ ಅಥವಾ ‘ಸಂಸ್ಕೃತದ ಮೇಲಿನ ದ್ವೇಷಕ್ಕಾಗಿ ಬಲವಂತದ ಬದಲಾವಣೆ’ಯಾದರೆ ಯಾರಿಗೆ ಪ್ರಯೋಜನ? ಮಹಾಪ್ರಾಣಗಳನ್ನು ಏಕಾಏಕಿ ತೆಗೆದುಹಾಕಿದರೆ ಅದು ಹತ್ತು ಹಲವು ಭಾಷಾಗೊಂದಲಗಳನ್ನು ಹುಟ್ಟಿಸಿ ಹಾಕಲಿದೆ. ಮಹಾಪ್ರಾಣಗಳು ಈವರೆಗೆ ಕನ್ನಡ ಭಾಷೆಗೆ ಪೂರಕವಾಗಿ ಸಾಕಷ್ಟು ಕೆಲಸ ಮಾಡಿದೆ. ಕನ್ನಡ ಬರಹವನ್ನು ಪೊರೆದಿದೆ. ಏಕಾಏಕಿ ಅದನ್ನು ತೆಗೆದಾಗ ಹುಟ್ಟುವ ಗೊಂದಲಗಳು, ಶ, ಷ ಬಳಕೆಗಳ ಬಗ್ಗೆ ಇರುವ ದ್ವಂದ್ವ ಇವೆಲ್ಲವನ್ನು ನಾವು ಗಮನಕ್ಕೆ ತೆಗೆದುಕೊಳ್ಳಬೇಕು. ಹಾಗೆಯೇ ಈಗ ಇರುವ ಸಂಸ್ಕೃತದಿಂದ ಬಂದ ಪದವೇ ಹೆಚ್ಚು ಸೂಕ್ತವೆನಿಸಿರುವಾಗ, ಅನಗತ್ಯವಾಗಿ ಹೊಸ ಪದವನ್ನು ಅಲ್ಲಿ ತಂದು ಕೂರಿಸುವುದು ಎಷ್ಟು ಸರಿ? ಸರಳಗನ್ನಡವನ್ನು ಬಲವಂತವಾಗಿ ಹೇರಿಕೊಂಡಾಗ ಅದುವೇ ಜಟಿಲಗನ್ನಡವಾಗಿ ಕನ್ನಡ ಭಾಷೆಗೆ ಸಮಸ್ಯೆಯಾಗಿ ಕಾಡಬಹುದು.
 

Writer - ವಿಶ್ವಾಂಬರ, ತುಮಕೂರು

contributor

Editor - ವಿಶ್ವಾಂಬರ, ತುಮಕೂರು

contributor

Similar News