ನಕಲಿ ಅಂಕಪಟ್ಟಿ ನೀಡಿ ಕೆಲಸ ಗಿಟ್ಟಿಸಿಕೊಂಡ ಆರೊಪ: 91 ಸರಕಾರಿ ಉದ್ಯೋಗಿಗಳಿಗೆ ನೋಟಿಸ್

Update: 2022-01-17 14:00 GMT

ಬೆಂಗಳೂರು, ಜ.17: ನಕಲಿ ಅಂಕಪಟ್ಟಿ ನೀಡಿ ಸರಕಾರಿ ಕೆಲಸಕ್ಕೆ ಸೇರಿಕೊಂಡ 91 ಮಂದಿ ಉದ್ಯೋಗಿಗಳ ವಂಚನೆ ಜಾಲವು ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿರುವ ದಕ್ಷಿಣ ವಿಭಾಗದ ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ 2017ರಲ್ಲಿ ರಾಜ್ಯ ಸರಕಾರದ ವಿವಿಧ ಇಲಾಖೆಗಳು, ಸಾರ್ವಜನಿಕ ಉದ್ದಿಮೆಗಳು, ನೇಮಕಾತಿ ಪ್ರಾಧಿಕಾರಗಳು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳು ಪರೀಕ್ಷಾ ವಿಭಾಗಕ್ಕೆ ದೂರು ನೀಡಿದ್ದವು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ನಕಲಿ ಅಂಕಪಟ್ಟಿ ಸಲ್ಲಿಸಿ ಕೆಲಸಕ್ಕೆ ಸೇರಿದ 91 ಮಂದಿ ಉದ್ಯೋಗಿಗಳ ವಂಚನೆ ಜಾಲ ಬೆಳಕಿಗೆ ಬಂದಿದೆ. 

2017ರಲ್ಲಿ ವಿವಿಧ ಸಂಸ್ಥೆಗಳು ನಮ್ಮಲ್ಲಿ ಕೆಲಸ ಗಿಟ್ಟಿಸಿಕೊಂಡಿರುವ ಉದ್ಯೋಗಿಗಳ ಅಂಕಪಟ್ಟಿ ನೈಜತೆ ಬಗ್ಗೆ ಖಚಿತಪಡಿಸಿ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಪರೀಕ್ಷಾ ವಿಭಾಗಕ್ಕೆ ದೂರು ನೀಡಿತ್ತು. ಬಳಿಕ ದೂರನ್ನು ಗಂಭೀರವಾಗಿ ಪರಿಗಣಿಸಿ ಉದ್ಯೋಗ ಮತ್ತು ತರಬೇತಿ ಇಲಾಖೆಯು ಮೂರು ಸಮಿತಿಗಳನ್ನು ರಚಿಸಿತ್ತು. ಈಗ ಇದೇ ಸಮಿತಿಗಳಿಂದ ತನಿಖಾ ವರದಿ ಹೊರ ಬಂದಿದೆ. 

2017ರ ಸೆಪ್ಟೆಂಬರ್, 2018ರ ಜನವರಿ ಹಾಗೂ ಜೂನ್‍ನಲ್ಲಿ ರಚಿಸಲಾಗಿದ್ದ ಸಮಿತಿಗಳಿಂದ ವರದಿ ಸಲ್ಲಿಕೆಯಾಗಿದ್ದು ವರದಿಯ ಪ್ರಕಾರ 91 ಅಭ್ಯರ್ಥಿಗಳು ಐಟಿಐ ತರಬೇತಿ ಸಂಸ್ಥೆಗಳಲ್ಲಿ ಉತೀರ್ಣರಾದವರೇ ಅಲ್ಲ. ಆ ಅಭ್ಯರ್ಥಿಗಳು ನಕಲಿ ಅಂಕಪಟ್ಟಿ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ. 

ಒಟ್ಟಾರೆ ಸಮಿತಿಯ ವರದಿಯಲ್ಲಿ ಬಯಲಾಗಿರುವ 91 ಅಭ್ಯರ್ಥಿಗಳೂ ನಕಲಿ ಅಂಕಪಟ್ಟಿ ಕೊಟ್ಟು ಕೆಲಸ ಗಿಟ್ಟಿಸಿಕೊಂಡು ಸರಕಾರಕ್ಕೇ ವಂಚಿಸಿರುವ ಆರೋಪ ಕೇಳಿ ಬಂದಿದೆ. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ತರಬೇತಿ ಮತ್ತು ಪರೀಕ್ಷಾ ವಿಭಾಗದ ಜಂಟಿ ನಿರ್ದೇಶಕ ಬಿ.ಎಲ್.ಚಂದ್ರಶೇಖರ್ ದೂರು ಆಧಾರದಲ್ಲಿ ಎಫ್‍ಐಆರ್ ದಾಖಲಾಗಿದೆ. 

ಅನುಮಾನವಿರುವ 91 ಅಭ್ಯರ್ಥಿಗಳನ್ನು ಎಫ್‍ಐಆರ್‍ನಲ್ಲಿ ಹೆಸರಿಸಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಐಪಿಸಿ ಸೆಕ್ಷನ್ 34, 419, 420, 468, 471ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News