ಸಹಕಾರಿ ಸೇವೆಯಿಂದ ಕರಾವಳಿಯಲ್ಲಿ ರೈತರ ಆತ್ಮಹತ್ಯೆ ತಡೆ: ಡಾ.ರಾಜೇಂದ್ರ ಕುಮಾರ್

Update: 2022-01-17 14:41 GMT

ಕುಂದಾಪುರ, ಜ.17: ಗೋಳಿಯಂಗಡಿ ಹೊಟೇಲ್ ಶ್ರೀ ಗಣೇಶ ಪ್ರಸಾದ ಕಟ್ಟಡಕ್ಕೆ ಸ್ಥಳಾಂತರಗೊಂಡ ಎಸ್‌ಸಿಡಿಸಿಸಿ ಬ್ಯಾಂಕ್ ಗೋಳಿಯಂಗಡಿ ಶಾಖೆ ಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಸೋಮವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಸಹಕಾರಿ ಬ್ಯಾಂಕುಗಳು ಅಮೂಲ್ಯ ಸೇವಾ ಸೌಲಭ್ಯಗಳೊಂದಿಗೆ ಜನರ ಅವಶ್ಯತೆಗಳಿಗೆ ಸ್ಫಂಧಿಸುವುದರೊಂದಿಗೆ ವಿಶ್ವಾಸಕ್ಕೆ ಪಾತ್ರವಾಗಿವೆ. ಕೇಂದ್ರ ಸಹಕಾರಿ ಬ್ಯಾಂಕಿನ ಗೋಳಿಯಂಗಡಿ ಶಾಖೆಯು ದಾಖಲೆಗೂ ಮಿಕ್ಕಿದ ವ್ಯವಹಾರದೊಂದಿಗೆ ಉತ್ತಮ ಸಾಧನೆಯ ಮೂಲಕ ಇನ್ನಷ್ಟು ವಿಶ್ವಾಸರ್ಹತೆಯನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

ಸಹಕಾರಿ ಸಂಘಗಳು ಹೊಂದಿರುವ ಹಣವನ್ನು ಅವಶ್ಯಕತೆ ಇರುವ ಸದಸ್ಯ ರಿಗೆ ನೀಡುವ ಮೂಲಕ ಹೆಚ್ಚಿನ ಪ್ರಯೋಜನ ಪಡೆಯಬೇಕು. ಬ್ರಿಟೀಷರ ಕಾಲದಿಂದಲೂ ಸಹಕಾರಿ ಸಂಘಗಳು ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ವ್ಯವಹಾರ ದೊಂದಿಗೆ ಸ್ಫಂದಿಸಿವೆ. ನವೋದಯ ಸ್ವಸಹಾಯ ಸಂಘಗಳು ಮಹಿಳೆಯರಲ್ಲಿ ಆರ್ಥಿಕ ಸ್ವಾಲಂಭನೆಗೆ ಪೂರಕವಾಗಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ದೇಶದ ನಾನಾ ಭಾಗಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಅವಿಭಜಿತ ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ರೈತಾಪಿ ವರ್ಗಕ್ಕೆ ನೀಡುವ ಉತ್ತಮ ಸೇವಾ ಸೌಲಭ್ಯಗಳ ಸದುಪಯೋಗದಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಸಂಭವಿಸದೆ ಸಂತೃಪ್ತಿಯನ್ನು ಕಾಣುಂತಾಗಿದೆ ಎಂದು ಅವರು ಹೇಳಿದರು.

ಸಹಕಾರಿ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳು ಗ್ರಾಮೀಣ ಭಾಗಗಳಲ್ಲಿ ಶಾಖೆಗಳನ್ನು ತೆರೆಯುವುದರೊಂದಿಗೆ ಹಳ್ಳಿಯ ಜನರ ಬೇಡಿಕೆಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಇನ್ನಷ್ಟು ಪ್ರಗತಿಗೆ ಸಹಕಾರ ನೀಡುತ್ತಿವೆ. ಜನರ ಬಳಿ ತೆರಳಿ ಬ್ಯಾಂಕ್ ವ್ಯವಹಾರ ನಡೆಸುವ ನಿಟ್ಟಿನಲ್ಲಿ ದೇಶದಲ್ಲಿ ಪ್ರಥಮ ಭಾರಿಗೆ ಆರಂಭಿಸಿದ ಮೊಬೈಲ್ ಬ್ಯಾಂಕಿಂಗ್ ವ್ಯವಹಾರವು ಜನರ ಪ್ರಶಂಸೆಗೆ ಒಳಗಾಗಿದೆ. ಜನರ ಅವಶ್ಯತೆಗಳಿಗಾಗಿ ಇನ್ನಷ್ಟು ವ್ಯವಹಾರವನ್ನು ಹೆಚ್ಚಿಸುವಲ್ಲಿ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಸ್ಫಂದಿಸಲಾುವುದು ಎಂದು ಅವರು ತಿಳಿಸಿದರು.

ಬೆಳ್ವೆ ಸಂದೇಶ ಕಿಣಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ಉದ್ಯಮಿ ಬಿ.ಸತೀಶ್ ಕಿಣಿ ಬೆಳ್ವೆ ನೂತನ ಭದ್ರತಾ ಕೊಠಡಿಯನ್ನು ಮತ್ತು ಹಿಲಿಯಾಣ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಅಧ್ಯಕ್ಷ ವೈ.ಕರುಣಾಕರ ಶೆಟ್ಟಿ ಯರುಕೋಣೆ ೂತನ ಸೇಪ್‌ಲಾಕರ್ ಉದ್ಘಾಟಿಸಿದರು.

ಕಟ್ಟಡ ಮಾಲಕ ಎಸ್ ನಾಗರಾಜ್ ಭಟ್ ಗೋಳಿಯಂಗಡಿ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಗೋಳಿಯಂಗಡಿ ಶಾಖಾ ವ್ಯವಸ್ಥಾಪಕ ರತ್ನಾಕರ ಶೆಟ್ಟಿ ಎಂ. ಅವರನ್ನು ಸನ್ಮಾನಿಸಲಾಯಿತು. ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಜಯರಾವು ಶೆಟ್ಟಿ ಸೂರ್ಗೋಳಿ ಮಾತನಾಡಿದರು.

ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಸಂಘದ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರುಗಳಾದ ಎಸ್.ರಾಜು ಪೂಜಾರಿ, ದೇವಿಪ್ರಸಾದ ಶೆಟ್ಟಿ ಬೆಳಪು, ಎಂ.ಮಹೇಶ ಹೆಗ್ಡೆ, ಬಿ.ಅಶೋಕಕುಮಾರ್ ಶೆಟ್ಟಿ, ರಾಜೇಶ ರಾವ್, ಮುಖ್ಯ ಕಾರ್ಯನಿರ್ವಾ ಹಣಾಧಿಕಾರಿ ರವೀಂದ್ರ ಬಿ. ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News