ಬಿಜೆಪಿ ನಿಜ ಸಮಾಜ ಸುಧಾರಕರನ್ನು ಅಂತರಂಗದಲ್ಲಿ ದ್ವೇಷಿಸುತ್ತದೆ, ಬಹಿರಂಗವಾಗಿ ಕೊಂಡಾಡುತ್ತದೆ: ಸಿದ್ದರಾಮಯ್ಯ

Update: 2022-01-19 08:00 GMT

ಬೆಂಗಳೂರು, ಜ.19: ನಾರಾಯಣ ಗುರು, ಸುಭಾಷ್ ಚಂದ್ರ ಬೋಸ್ ಮಾತ್ರವಲ್ಲ, ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಕನಕ, ಕಬೀರ ಸೇರಿದಂತೆ ಈ ನೆಲದ ನಿಜ ಸಮಾಜ ಸುಧಾರಕರನ್ನು ಕೋಮುವಾದಿ-ಜಾತಿವಾದಿ ಬಿಜೆಪಿ ಅಂತರಂಗದಲ್ಲಿ ದ್ವೇಷಿಸುತ್ತದೆ, ಬಹಿರಂಗವಾಗಿ ಕೊಂಡಾಡುತ್ತಾ ನಾಟಕವಾಡುತ್ತದೆ. ಈ ಆತ್ಮವಂಚನೆಯನ್ನು ನಿಲ್ಲಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಗಣರಾಜ್ಯೋತ್ಸವ ಪರೇಡ್ ಗೆ ಕೇರಳ ಕಳುಹಿಸಿದ್ದ ನಾರಾಯಣ ಗುರು ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಸಿದ್ದರಾಮಯ್ಯ, ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.

 ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ದಚಿತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ರಾಜ್ಯದ ಸಚಿವರಾದ ಸುನೀಲ್‍ ಕುಮಾರ್ ಮತ್ತು ಕೋಟ ಶ್ರೀನಿವಾಸ ಪೂಜಾರಿ ಮತ್ತು ರಾಜ್ಯ ಬಿಜೆಪಿ ನಾಯಕರು ತರಹೇವಾರಿ ಹೇಳಿಕೆಗಳ ಮೂಲಕ ಬಿಜೆಪಿ ಎನ್ನುವುದು ಸುಳ್ಳುಗಳ ಕಾರ್ಖಾನೆ ಎಂದು ಸಾಬೀತುಪಡಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕೇರಳದ ನಾರಾಯಣ ಗುರು ಸ್ತಬ್ಧಚಿತ್ರ ನಿರಾಕರಣೆಗೆ ಅಲಿಖಿತ ಪೂರ್ವನಿದರ್ಶನ ಕಾರಣ ಎಂದು ಹೇಳಿರುವ ಸಚಿವ ಪ್ರಹ್ಲಾದ ಜೋಷಿಯವರು ‘’ಹೇಳಿಕೆ ನೀಡುವ ಮೊದಲು ದೃಢಪಡಿಸಿಕೊಳ್ಳಬೇಕಿತ್ತು ಎಂದು ನನಗೆ ಪುಕ್ಕಟೆ ಸಲಹೆ ನೀಡಿದ್ದಾರೆ. ದಯವಿಟ್ಟು ಅವರು ಈ ಅಲಿಖಿತ ಪೂರ್ವನಿದರ್ಶನ ಏನು ಎನ್ನುವುದನ್ನು ಸ್ಪಷ್ಟಪಡಿಬೇಕು. 3 ವರ್ಷಗಳಿಗೊಮ್ಮೆ ಮಾತ್ರ ಸ್ತಬ್ಧಚಿತ್ರಕ್ಕೆ ರಾಜ್ಯಗಳಿಗೆ ಅವಕಾಶ ಎನ್ನುತ್ತಾರೆ ರಾಜ್ಯದ ಇಬ್ಬರು ಸಚಿವರು, ಅಲಿಖಿತ ಪೂರ್ವನಿದರ್ಶನ ಇದೆ ಎನ್ನುತ್ತಾರೆ ಕೇಂದ್ರ ಸಚಿವರು, ಕೇರಳ ಸರಕಾರವೇ ನಾರಾಯಣಗುರು ವಿರೋಧಿ ಎನ್ನುತ್ತಾರೆ ಬಿಜೆಪಿ ವಕ್ತಾರರು. ಇದರಲ್ಲಿ ಯಾವುದು ನಿಜ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಗಣರಾಜ್ಯೋತ್ಸವ ಸ್ತಬ್ದಚಿತ್ರಕ್ಕೆ 3 ವರ್ಷಗಳಿಗೊಮ್ಮೆ ಮಾತ್ರ ರಾಜ್ಯಗಳಿಗೆ ಅವಕಾಶ ಎಂದಾದರೆ ನಮ್ಮ ಕರ್ನಾಟಕಕ್ಕೆ ಸತತ 13ನೇ ಬಾರಿ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ಹೇಗೆ ನೀಡಲಾಯಿತು? ಎನ್ನುವುದನ್ನು ಸಚಿವರಾದ ಶ್ರೀನಿವಾಸ ಪೂಜಾರಿ ಮತ್ತು ಸುನೀಲ್ ಕುಮಾರ್ ತಿಳಿಸಬೇಕು. ಇಂತಹ ಹಸಿ ಸುಳ್ಳುಗಳು ಸಚಿವರಿಗೆ ಶೋಭೆ ತರುವುದಿಲ್ಲ ಎಂದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇರಳ ಸರಕಾರ ಪ್ರಸ್ತುತಪಡಿಸಿದ್ದ ಜಟಾಯು ಸ್ತಬ್ದಚಿತ್ರಕ್ಕೆ ಒಪ್ಪಿಗೆ ನೀಡದೆ, ಅದರ ಮುಂದೆ ಶಂಕರಾಚಾರ್ಯರ ಪ್ರತಿಕೃತಿಯನ್ನು ಕೂರಿಸುವಂತೆ ಕೇಂದ್ರ ಸರಕಾರ ಒತ್ತಡ ಹೇರಲು ಕಾರಣ ಏನು? ಕೇರಳ ಸರಕಾರ ಸೂಚಿಸಿದ ನಾರಾಯಣ ಗುರುಗಳ ಪ್ರತಿಕೃತಿಯನ್ನು ನಿರಾಕರಿಸಲು ಕಾರಣ ಏನು? ಕೇಂದ್ರ ಬಿಜೆಪಿ ಸರಕಾರ ಇದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿರುವ ಸಿದ್ದರಾಮಯ್ಯ, ಶಂಕರಾಚಾರ್ಯರ ಪ್ರತಿಕೃತಿಯ ಸ್ತಬ್ಧಚಿತ್ರಕ್ಕೆ ವೈಯಕ್ತಿಕವಾಗಿ ನನ್ನ ವಿರೋಧ ಇಲ್ಲ. ಆದರೆ ಜಾತಿ ಮತ್ತು ಕೋಮು ಸಾಮರಸ್ಯವನ್ನು ಕಾಪಾಡಿಕೊಂಡು ಹೋಗಬೇಕಾದ ಕೇಂದ್ರ ಬಿಜೆಪಿ ಸರಕಾರ, ಅನಗತ್ಯವಾಗಿ ಶಂಕರಾಚಾರ್ಯರ ಎದುರಿಗೆ ನಾರಾಯಣ ಗುರುಗಳನ್ನು ನಿಲ್ಲಿಸಿ ಇಬ್ಬರು ಮಹಾಪುರುಷರ ಅನುಯಾಯಿಗಳ ನಡುವೆ ಜಗಳ ತಂದುಹಾಕುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.

ಕೇರಳದ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಮಾತ್ರವಲ್ಲ, ಪಶ್ಚಿಮ ಬಂಗಾಳದ ಸುಭಾಷ್ ಚಂದ್ರ ಬೋಸ್ ಸ್ತಬ್ಧ ಚಿತ್ರ ಮತ್ತು ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರ ಚಿದಂಬರನರ್ ಸ್ತಬ್ಧ ಚಿತ್ರಗಳನ್ನು ತಿರಸ್ಕರಿಸಲಾಗಿದೆ. ತಿರಸ್ಕೃತ ಮೂರೂ ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳ ಸರ್ಕಾರ ಇರುವುದು ಕೇವಲ ಕಾಕತಾಳಿಯ ಎನ್ನುವುದನ್ನು ನಂಬಬಹುದೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

 ಕೇರಳ ರಾಜ್ಯದಲ್ಲಿ ಇಲ್ಲಿಯ ವರೆಗೆ ಭಾರತೀಯ ಜನತಾ ಪಕ್ಷಕ್ಕೆ ನೆಲೆ ಊರಲು ಸಾಧ್ಯವಾಗದಿರುವುದು ಮತ್ತು ನಾರಾಯಣ ಗುರುಗಳ ಅನುಯಾಯಿಗಳೇ ಬಹುಸಂಖ್ಯೆಯಲ್ಲಿರುವ ಆ ರಾಜ್ಯದ ಜನ ಸತತವಾಗಿ

ಬಿಜೆಪಿಯನ್ನು ತಿರಸ್ಕರಿಸುತ್ತಾ ಬಂದಿರುವುದು ನಾರಾಯಣ ಗುರುಗಳ ಬಗ್ಗೆ ಬಿಜೆಪಿಯ ಪೂರ್ವಾಗ್ರಹಕ್ಕೆ ಕಾರಣ ಇರಬಹುದೇ?ನಾರಾಯಣ ಗುರು, ಸುಭಾಷ್ ಚಂದ್ರ ಬೋಸ್ ಇಲ್ಲವೇ ಚಿದಂಬರನ್ ಅವರ ಬಗ್ಗೆ ಸೈದ್ಧಾಂತಿಕ ಇಲ್ಲವೇ ಬೇರೆ ಕಾರಣಗಳ ವಿರೋಧವಿದ್ದರೆ ಬಿಜೆಪಿ ಧೈರ್ಯದಿಂದ ಅದನ್ನು ವ್ಯಕ್ತಪಡಿಸಬೇಕು. ಇದರ ಬದಲಿಗೆ ತನ್ನ ಸೈದ್ಧಾಂತಿಕ ವಿರೋಧವನ್ನು ಬಚ್ಚಿಟ್ಟುಕೊಂಡು ತಾಂತ್ರಿಕ ಕಾರಣ ನೀಡಿ ತಿಪ್ಪೆ ಸಾರಿಸುವ ಕೆಲಸ ಮಾಡಬಾರದು.ನಾರಾಯಣ ಗುರು, ಸುಭಾಷ್ ಚಂದ್ರ ಬೋಸ್ ಮಾತ್ರವಲ್ಲ, ಬುದ್ಧ, ಬಸವ, ಅಂಬೇಡ್ಕರ್, ಫುಲೆ, ಪೆರಿಯಾರ್, ಕನಕ, ಕಬೀರ ಸೇರಿದಂತೆ ಈ ನೆಲದ ನಿಜ ಸಮಾಜ ಸುಧಾರಕರನ್ನು ಕೋಮುವಾದಿ-ಜಾತಿವಾದಿ ಬಿಜೆಪಿ ಅಂತರಂಗದಲ್ಲಿ ದ್ವೇಷಿಸುತ್ತದೆ, ಬಹಿರಂಗವಾಗಿ ಕೊಂಡಾಡುತ್ತಾ ನಾಟಕವಾಡುತ್ತದೆ. ಈ ಆತ್ಮವಂಚನೆಯನ್ನು ನಿಲ್ಲಿಸಿ ಎಂದು ಕೇಂದ್ರ ಸರಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News