ಟ್ರಾವಲ್ಸ್ ಬಿಲ್ ನಕಲು ಆರೋಪ: ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್

Update: 2022-01-24 12:11 GMT

ಬೆಂಗಳೂರು, ಜ.24: ಟ್ರಾವೆಲ್ಸ್ ಹೆಸರಿನಲ್ಲಿ ಕಡತಗಳನ್ನು ತಯಾರು ಮಾಡಿ ಪಾಲಿಕೆಗೆ ಪ್ರತಿ ತಿಂಗಳು ಹತ್ತಾರು ಲಕ್ಷ ರೂ.ಗಳನ್ನು ವಂಚಿಸುತ್ತಿದ್ದ ಆರೋಪದಡಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಇಲ್ಲಿನ ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವಿನಯ್ ಬಾಬು ಎಂಬುವವರು ನೀಡಿದ ದೂರಿನನ್ವಯ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಸಾರಿಗೆ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹದೇವ್, ಗುಮಾಸ್ತ ರಮೇಶ್, ಕಂಪ್ಯೂಟರ್ ಆಪರೇಟರ್ ಸತೀಶ್ ಮತ್ತು ಪಂಚಮುಖಿ ಟೂರ‍್ಸ್ ಮತ್ತು ಟ್ರಾವೆಲ್ಸ್ ಮಾಲಕ ಶಿವಾನಂದ ವಿರುದ್ಧ ಹಲಸೂರುಗೇಟ್ ಪೋಲಿಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. 

ಈ ಹಿಂದೆ ಪಾಲಿಕೆಯ ಅಧಿಕಾರಿಗಳ ಬಳಕೆಗೆಂದು ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸುತ್ತಿದ್ದ ಟ್ರಾವೆಲ್ಸ್ಗಳ ಪೈಕಿ ಒಂದಾಗಿರುವ ಎಂಎಂ ಲಾಜಿಸ್ಟಿಕ್ಸ್ ಟೂರ‍್ಸ್ ಅಂಡ್ ಟ್ರಾವಲ್ಸ್ ಸಂಸ್ಥೆಯು ತನ್ನ ಚಾಲಕರು, ಸಿಬ್ಬಂದಿ ವರ್ಗದವರಿಗೆ ಪಾವತಿಸುತ್ತಿದ್ದ ಪಿಎಫ್, ಇಎಸ್‌ಐ ದಾಖಲೆಗಳನ್ನು ಆ ಸಂಸ್ಥೆಯು ಪಾಲಿಕೆಗೆ ನೀಡುತ್ತಿದ್ದ ಕಡತಗಳಿಂದ ತೆಗೆದು, ಅವುಗಳನ್ನೆ ನಕಲು ಮಾಡಿಕೊಂಡು ಪಂಚಮುಖಿ ಟೂರ‍್ಸ್ ಮತ್ತು ಟ್ರಾವೆಲ್ಸ್ ಎಂಬ ಹೆಸರಿನಲ್ಲಿ ಕಡತಗಳನ್ನು ತಯಾರು ಮಾಡಿ ಪಾಲಿಕೆಗೆ ಪ್ರತಿ ತಿಂಗಳು ಹತ್ತಾರು ಲಕ್ಷ ರೂ.ಗಳನ್ನು ವಂಚಿಸುತ್ತಿದ್ದರು ಎಂದು ಆರೋಪಿಸಲಾಗಿದೆ. 

ಈ ಬಗ್ಗೆ ದಾಖಲೆಗಳ ಸಹಿತ ಎಂ.ಎಂ.ಲಾಜಿಸ್ಟಿಕ್ಸ್ ಟೂರ‍್ಸ್ ಅಂಡ್ ಟ್ರವಲ್ಸ್ ಸಂಸ್ಥೆಯ ವ್ಯವಸ್ಥಾಪಕ ವಿನಯ್ ಬಾಬು ನೀಡಿರುವ ದೂರಿನನ್ವಯ ಮೇಲೆ ತಿಳಿಸಿರುವ ಎಲ್ಲರ ವಿರುದ್ಧ ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News