ಕಾಂಗ್ರೆಸ್ ಗೂ ನಮಗೂ ಮುಗಿದ ಅಧ್ಯಾಯ: ಸಿ.ಎಂ.ಇಬ್ರಾಹೀಂ
Update: 2022-01-27 06:49 GMT
ಬೆಂಗಳೂರು, ಜ.27: "ನನ್ನ ಮೇಲಿದ್ದ ಭಾರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಹಗುರ ಮಾಡಿದ್ದಾರೆ. ಸಂತೋಷ. ಇದೀಗ ತೀರ್ಮಾನ ತೆಗೆದುಕೊಳ್ಳಲು ಸ್ವತಂತ್ರರಾಗಿದ್ದೇವೆ. ಕಾಂಗ್ರೆಸ್ ಗೂ ನಮಗೂ ಮುಗಿದ ಅಧ್ಯಾಯ. ಶೀಘ್ರದಲ್ಲೇ ಬೆಂಬಲಿಗರು, ಹಿತೈಷಿಗಳೊಂದಿಗೆ ಮಾತನಾಡಿ ಮುಂದಿನ ನಡೆ ಬಗ್ಗೆ ತಿಳಿಸುತ್ತೇವೆ" ಎಂದು ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹೀಂ ಹೇಳಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಸಿ.ಎಂ.ಇಬ್ರಾಹೀಂ ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಸಿದ್ದರಾಮಯ್ಯ ವಿರುದ್ಧವೂ ಅಸಮಾಧಾನ ಹೊರಹಾಕಿದ ಸಿ.ಎಂ.ಇಬ್ರಾಹೀಂ ಅವರು, ಸಿದ್ದರಾಮಯ್ಯರಿಗಾಗಿ ದೇವೇಗೌಡರಂತಹ ನಾಯಕರನ್ನೇ ಬಿಟ್ಟು ಕಾಂಗ್ರೆಸ್ ಸೇರಿದ್ದೆ. ಇದೀಗ ತನಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಸ್ಥಾನ ತಪ್ಪಿರುವ ಬಗ್ಗೆ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಉತ್ತರ ನೀಡಬೇಕು ಎಂದು ಹೇಳಿದ್ದಾರೆ.