‘ನಕಲಿ ಸುದ್ದಿ’ ತೆರವುಗೊಳಿಸುವಲ್ಲಿ ನಿಷ್ಕ್ರಿಯತೆ: ಫೇಸ್ಬುಕ್, ಟ್ವಿಟ್ಟರ್, ಗೂಗಲ್ ವಿರುದ್ಧ ಕೇಂದ್ರ ಗರಂ

Update: 2022-02-02 17:32 GMT

ಹೊಸದಿಲ್ಲಿ,ಫೆ.2: ಗೂಗಲ್, ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿಗಳನ್ನು ತಮ್ಮ ಪ್ಲಾಟ್‌ಫಾರಂಗಳಿಂದ ಸಕ್ರಿಯವಾಗಿ ತೆಗೆದುಹಾಕದೆ ಇರುವ ಬಗ್ಗೆ ಕೇಂದ್ರ ಸರಕಾರವು ಈ ಜಾಲತಾಣದ ನಿರ್ವಹಣಾಧಿಕಾರಿಗಳ ಜೊತೆ ಕಾವೇರಿದ ಚರ್ಚೆಯನ್ನು ನಡೆಸಿದ್ದಾರೆಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

ನಕಲಿ ಸುದ್ದಿಗಳ ಬಗ್ಗೆ ನಿಷ್ಕ್ರಿಯತೆಯನ್ನು ಪ್ರದರ್ಶಿಸುತ್ತಿರುವುದಕ್ಕಾಗಿ ಈ ಕಂಪೆನಿಗಳನ್ನು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಬಲವಾಗಿ ಟೀಕಿಸಿದೆ ಮತ್ತು ಇದರಿಂದಾಗಿ ಸರಕಾರವು ಅನಿವಾರ್ಯವಾಗಿ ಜಾಲತಾಣಗಳಲ್ಲಿರುವ ವಿಷಯಗಳನ್ನು ತೆಗೆದುಹಾಕುವಂತೆ ಆದೇಶಗಳನ್ನು ಹೊರಡಿಸುತ್ತಾ ಇರಬೇಕಾಗುತ್ತದೆ. ಇದರ ಪರಿಣಾಮವಾಗಿ ಭಾರತೀಯ ಪ್ರಾಧಿಕಾರಗಳು ಮುಕ್ತ ಅಭಿವ್ಯಕ್ತಿ ಸ್ವಾತಂತ್ರವನ್ನು ದಮನಿಸುತ್ತಿವೆಯೆಂಬ ಟೀಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದುರಿಸಬೇಕಾಗಿ ಬಂದಿದೆಯೆಂದು ಸಭೆಯಲ್ಲಿ ಅದು ಅಸಮಾಧಾನ ವ್ಯಕ್ತಪಡಿಸಿದೆಯೆಂದು ವರದಿ ತಿಳಿಸಿದೆ.

ಸೋಮವಾರ ಈ ಮಾಹಿತಿತಂತ್ರಜ್ಞಾನ ದಿಗ್ಗಜ ಸಂಸ್ಥೆಗಳ ಅಧಿಕಾರಿಗಳ ಜೊತೆ ಕೇಂದ್ರ ಸರಕಾರ ನಡೆಸಿದ ವಿಡಿಯೋ ಕಾನ್ಫರೆನ್ಸ್ ಮಾತುಕತೆಯು ಅತ್ಯಂತ ಉದ್ವಿಗ್ನತೆಯಿಂದ ಕೂಡಿತ್ತು ಹಾಗೂ ಕಾವೇರಿದ ಚರ್ಚೆ ನಡೆದಿತ್ತು ಎಂದು ಈ ಕಲಾಪಗಳ ವಿವರಗಳನ್ನು ಬಲ್ಲ ಮೂಲಗಳು ತಿಳಿಸಿವೆ. ಅಮೆರಿಕದ ಈ ಐಟಿ ದಿಗ್ಗಜರು ಹಾಗೂ ಪ್ರಧಾನಿ ಮೋದಿ ಆಡಳಿತದ ನಡುವಿನ ಬಾಂಧವ್ಯವು ಹದಗೆಟ್ಟಿರುವುದರ ಸೂಚನೆ ಇದಾಗಿದೆಯಂದು ಮೂಲಗಳು ತಿಳಿಸಿವೆ.

ಆದಾಗ್ಯೂ ವಿಡಿಯೋ ಕಾನ್ಫರೆನ್ಸ್ ಮಾತುಕತೆಯ ಸಂದರ್ಭ ಭಾರತ ಸರಕಾರದ ಅಧಿಕಾರಿಗಳು ಈ ಕಂಪೆನಿಗಳಿಗೆ ಯಾವುದೇ ಎಚ್ಚರಿಕೆಯನ್ನು ನೀಡಲಿಲ್ಲವೆಂದು ಮೂಲಗಳು ತಿಳಿಸಿವೆ. ಮಾಹಿತಿ ತಂತ್ರಜ್ಞಾನ ವಲಯದ ನಿಯಮಗಳನ್ನು ಬಿಗಿಗೊಳಿಸಿರುವ ಕೇಂದ್ರ ಸರಕಾರವು ಸಾಮಾಜಿಕ ಜಾಲತಾಣಗಳು ತಾವು ಪ್ರಸಾರ ಮಾಡುವ ವಿಷಯಗಳ ಬಗ್ಗೆ ನಿಗಾವಿರಿಸಬೇಕೆಂದು ಪ್ರತಿಪಾದಿಸುತ್ತಾ ಬಂದಿದೆ.

ಕಳೆದ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ವಿಶೇಷಾಧಿಕಾರವನ್ನು ಬಳಸಿಕೊಂಡು ಗೂಗಲ್ನ ಯೂಟ್ಯೂಬ್ ಪ್ಲಾಟ್‌ಫಾರಂನ 55 ಚಾನೆಲ್‌ಗಳು, ಕೆಲವು ಟ್ವಿಟ್ಟರ್ ಹಾಗೂ ಫೇಸ್ಬುಕ್ ಖಾತೆಗಳನ್ನು ಬ್ಲಾಕ್ ಮಾಡಿದ ಬಳಿಕ ಈ ಸಭೆಯನ್ನು ನಡೆಸಲಾಗಿತ್ತು.

ಬ್ಲಾಕ್ ಮಾಡಲ್ಪಟ್ಟು ಯೂಟ್ಯೂಬ್ ಚಾನೆಲ್‌ಗಳು ಸುಳ್ಳು ಸುದ್ದಿಯನ್ನು ಉತ್ತೇಜಿಸುತ್ತಿವೆ ಹಾಗೂ ಭಾರತ ವಿರೋಧಿ ವಿಷಯಗಳನ್ನು ಪ್ರಸಾರ ಮಾಡುತ್ತಿವೆ ಹಾಗೂ ಪಾಕ್‌ನಿಂದ  ಕಾರ್ಯಾಚರಿಸುತ್ತಿರುವ ಫೇಸ್ಬುಕ್, ಟ್ವಿಟ್ಟರ್ಗಳ ಕೆಲವು ಖಾತೆಗಳನ್ನು ಭಾರತ ವಿರುದ್ಧ ತಪ್ಪು ಮಾಹಿತಿ ಹರಡಲು ಬಳಸಲಾಗುತ್ತಿದೆಯೆಂದು ಕೇಂದ್ರ ಸರಕಾರ ಆಪಾದಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News