ವಜಾಗೊಂಡಿದ್ದ ಸಾರಿಗೆ ಸಿಬ್ಬಂದಿಗೆ ಷರತ್ತು ವಿಧಿಸಿ ಮರು ನೇಮಕಾತಿ

Update: 2022-02-10 15:51 GMT

ಬೆಂಗಳೂರು, ಫೆ.10: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈ ಹಿಂದೆ ಪ್ರತಿಭಟನೆ ನಡೆಸಿ ವಜಾಗೊಂಡಿದ್ದ ಬಿಎಂಟಿಸಿಯ 100 ಸಿಬ್ಬಂದಿಗೆ ಷರತ್ತುಗಳನ್ನು ವಿಧಿಸಿ ಸಾರಿಗೆ ಸಚಿವ ಶ್ರೀರಾಮುಲು ಅವರು ಗುರುವಾರ ಮರು ನೇಮಕಾತಿ ಆದೇಶ ಪ್ರತಿ ವಿತರಣೆ ಮಾಡಿದರು.

ಸಾರಿಗೆ ಸಚಿವ ಶ್ರೀರಾಮುಲು ಅವರು ತಮ್ಮ ಸರಕಾರಿ ನಿವಾಸದಲ್ಲಿ ಸಾರಿಗೆ ಸಿಬ್ಬಂದಿಗೆ ಮರು ನೇಮಕಾತಿ ಆದೇಶ ಪ್ರತಿಯನ್ನು ವಿತರಣೆ ಮಾಡಿದರು. ರಾಜ್ಯದ ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ 1,400ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು. ನಿಗಮಗಳು ಅವರನ್ನ ವಜಾ ಮಾಡಿದ್ದವು.

ಸಿಬ್ಬಂದಿಗೆ ಮರು ನೇಮಕಾತಿ ಆದೇಶ ಪತ್ರಿ ವಿತರಣೆ ಬಳಿಕ ಮಾತನಾಡಿದ ಸಚಿವ ಶ್ರೀರಾಮುಲು ಅವರು, ಎಪ್ರಿಲ್‍ನಲ್ಲಿ ಮುಷ್ಕರ ಮಾಡಿ ವಜಾ, ಅಮಾನತ್ತು ಅಂತ ಸುಮಾರು 1,400 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು.

ಮುಷ್ಕರದಲ್ಲಿ ನಾಲ್ಕು ನಿಗಮದ ಸಾರಿಗೆ ನೌಕರರು ವಜಾ ಅಮಾನತು ಆಗಿದ್ದರು. ಮುಷ್ಕರ ಯಾವ ಸಂದರ್ಭದಲ್ಲಿ ಮಾಡಬೇಕಿತ್ತು ಎಂಬುದನ್ನ ನೌಕರರು ತಿಳಿದುಕೊಳ್ಳಬೇಕಿತ್ತು. ಮುಷ್ಕರದಿಂದ ಸಾರ್ವಜನಿಕ ಆಸ್ತಿ ಹಾನಿಯಾಗುತ್ತದೆ. ಸಾರಿಗೆ ನೌಕರರು ಸಚಿವರು, ಸಿಎಂ ಜೊತೆ ಮಾತನಾಡಬೇಕಿತ್ತು ಎಂದು ಶ್ರೀ ರಾಮುಲು ಅಭಿಪ್ರಾಯಪಟ್ಟರು.

ಗುರುವಾರ 100 ಸಿಬ್ಬಂದಿಗೆ, ಶುಕ್ರವಾರ 200 ಸಿಬ್ಬಂದಿಗೆ, ಇದೇ ತಿಂಗಳಲ್ಲಿ 700 ಸಿಬ್ಬಂದಿಗೆ ಮರು ನೇಮಕಾತಿ ಆದೇಶ ನೀಡುವುದಾಗಿ ಶ್ರೀರಾಮುಲು ಹೇಳಿದರು. ನೇಮಕಾತಿ ಪತ್ರ ಪಡೆದವರಿಗೆ ಇನ್ಮುಂದೆ ಯಾವುದೇ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಷರತ್ತುಗಳನ್ನ ಹಾಕಿಯೇ ಅವರನ್ನ ಪುನಃ ತೆಗೆದುಕೊಂಡಿದ್ದೀವಿ ಎಂದರು.

ಮುಂದಿನ ದಿನಗಳಲ್ಲಿ ಮುಷ್ಕರಕ್ಕೆ ಹೋದರೆ ಮತ್ತೆ ನಾವು ನೌಕರರನ್ನ ಕೆಲಸಕ್ಕೆ ಸೇರಿಸಿಕೊಳ್ಳಲು ಆಗುವುದಿಲ್ಲ ಸಮಸ್ಯೆ ಇದ್ದರೆ ಹಿರಿಯ ಅಧಿಕಾರಿಗಳೊಂದಿಗೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆಗಳನ್ನ ನೀಡಲಾಗಿದೆ ಎಂದರು.

ಟಿಕೆಟ್ ದರ ಏರಿಕೆ ಸದ್ಯಕ್ಕಿಲ್ಲ: ನಷ್ಟದಲ್ಲಿ ಇರುವ ನಗರ ಸಾರಿಗೆ ಬಿಎಂಟಿಸಿಯಲ್ಲಿ ಟಿಕೆಟ್ ದರ ಏರಿಕೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ನೌಕರರ ಮುಷ್ಕರ, ಕೊರೋನ ಸಂಕಷ್ಟ, ಡಿಸೇಲ್ ಬೆಲೆ ಏರಿಕೆಯ ಕಾರಣದಿಂದಾಗಿ ಬಿಎಂಟಿಸಿ ಟಿಕೆಟ್ ದರವನ್ನು ಏರಿಕೆ ಮಾಡಲಾಗುತ್ತಿಲ್ಲ ಎಂದು ಸಚಿವ ಶ್ರೀರಾಮುಲು ತಿಳಿಸಿದರು. 

ಇನ್ನು ಬಿಎಂಟಿಸಿ ಬಸ್ಸಿನಲ್ಲಿ ಕಾಣಿಸಿಕೊಂಡ ಬೆಂಕಿ ವಿಚಾರವಾಗಿ ಮಾತನಾಡಿದ ಅವರು, ಅಧಿಕಾರಿಗಳಿಗೆ ಈ ಸಂಬಂಧ ವರದಿ ನೀಡಲು ಸೂಚಿಸಲಾಗಿದ್ದು, ಶುಕ್ರವಾರ ವರದಿ ಕೈ ಸೇರಲಿದ್ದು, ಆ ಬಳಿಕ ಉತ್ತರ ನೀಡುತ್ತೇನೆ ಅಂತ ತಿಳಿಸಿದರು.

ವಾಲ್ಮೀಕಿ ಸಮಾಜಕ್ಕೆ ಶೇ. 7.5ರಷ್ಟು ಮೀಸಲಾತಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿದ ಸಚಿವರು, ನಮ್ಮ ಸರಕಾರ ಬದ್ಧವಾಗಿದ್ದು ಅದನ್ನ ಜಾರಿಗೆ ತರುವ ವಿಚಾರದಲ್ಲಿ ಸಿಎಂ ಜೊತೆಗೆ ಮಾತುಕತೆ ನಡೆಸಲಾಗಿದೆ. ನ್ಯಾ. ನಾಗಮೋಹನ್ ದಾಸ್ ವರದಿಯನ್ನ ಕೊಟ್ಟಿದ್ದಾರೆ ಎಂದರು.

ಉನ್ನತ ಮಟ್ಟದ ಸಮಿತಿಯ ವರದಿ ಬಂದ ನಂತರ ಇದನ್ನ ಜಾರಿಗೆ ತರಲಾಗುವುದು. ಸ್ವಾಮೀಜಿಗಳಿಗೆ ಧರಣಿಯನ್ನ ವಾಪಸ್ ಪಡೆಯುಂತೆ ಮನವಿ ಮಾಡಲಾಗುವುದು ಎಂದರು. 

ಈ ವೇಳೆ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಶಾಸಕ ಸೋಮಶೇಖರ್ ರೆಡ್ಡಿ, ಬಿಎಂಟಿಸಿ ಎಂ.ಡಿ ಅನೂಪ್ ಕುಮಾರ್ ಸೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮತ್ತೆ ಮುಷ್ಕರಕ್ಕೆ ಹೋದರೆ ಕೆಲಸಕ್ಕೆ ತೆಗೆದುಕೊಳ್ಳುವುದಿಲ್ಲ

‘ಮುಂದಿನ ದಿನಗಳಲ್ಲಿ ಮುಷ್ಕರಕ್ಕೆ ಹೋದರೆ ಮತ್ತೆ ನಾವು ಸಾರಿಗೆ ನೌಕರರನ್ನ ಕೆಲಸಕ್ಕೆ ಸೇರಿಸಿಕೊಳ್ಳಲು ಆಗುವುದಿಲ್ಲ ಸಮಸ್ಯೆ ಇದ್ದರೆ ಹಿರಿಯ ಅಧಿಕಾರಿಗಳೊಂದಿಗೆ ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆಗಳನ್ನು ನೀಡಲಾಗಿದೆ. ನೇಮಕಾತಿ ಪತ್ರ ಪಡೆದವರಿಗೆ ಇನ್ಮುಂದೆ ಯಾವುದೇ ಮುಷ್ಕರದಲ್ಲಿ ಪಾಲ್ಗೊಳ್ಳದಂತೆ ಷರತ್ತುಗಳನ್ನ ಹಾಕಿಯೇ ಅವರನ್ನ ಪುನಃ ತೆಗೆದುಕೊಂಡಿದ್ದೀವಿ’

ಶ್ರೀರಾಮುಲು, ಸಾರಿಗೆ ಸಚಿವ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News