ಮಂಗಳೂರು: ಹೆರಿಗೆಯ ವೇಳೆ ತಾಯಿ-ಮಗು ಮೃತ್ಯು
ಮಂಗಳೂರು, ಫೆ.24: ನಗರದ ವಕೀಲೆ ಗಾಯತ್ರಿ (38) ಎಂಬವರು ಪ್ರಥಮ ಹೆರಿಗೆ ಸಂದರ್ಭ ಗರ್ಭದಲ್ಲಿದ್ದ ಮಗು ಸಹಿತ ಮೃತಪಟ್ಟ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ.
ಮಾಣಿ ಸಮೀಪದ ಕಡೆಶಿವಾಲಯ ಬುಡೋಳಿ ನಿವಾಸಿಯಾಗಿದ್ದ ಗಾಯತ್ರಿ ಪುತ್ತೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ಸುಮಾರು 8 ವರ್ಷ ವಕೀಲ ವೃತ್ತಿ ಮಾಡಿದ್ದ ಗಾಯತ್ರಿ 2010ರಲ್ಲಿ ಪೆರ್ಲದ ಆನಡ್ಕ ಕಾಡಮನೆ ಸುಧಾಕರ್ ಅವರೊಂದಿಗೆ ವಿವಾಹವಾಗಿತ್ತು. 2017ರಿಂದ ನಗರದ ಲೇಡಿಹಿಲ್ ಸಮೀಪ ವಾಸ್ತವ್ಯ ಹೊಂದಿದ್ದರು. ಅಲ್ಲದೆ ವಕೀಲ ವೃತ್ತಿ ಪುನರಾರಂಭಿಸಿದ್ದರು.
ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದ ಗಾಯತ್ರಿ ಪುತ್ತೂರಿನ ವಕೀಲ ಸಂಘದ ಸದಸ್ಯತ್ವ ಹೊಂದಿದ್ದರು.
ಈ ನಿಟ್ಟಿನಲ್ಲಿ ಅವರು ಆಗಾಗ ಪುತ್ತೂರಿನ ವಕೀಲ ಸಂಘದ ಸಂಪರ್ಕದಲ್ಲಿದ್ದರು. ಬುಧವಾರ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ನಗರದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಗುರುವಾರ ಬೆಳಗ್ಗಿನ ಜಾವ ಹೆರಿಗೆಯ ಸಂದರ್ಭ ಮಗು ಸಹಿತ ಕೊನೆಯುಸಿರೆಳೆದಿದ್ದಾರೆ.