ಲೇಡಿಗೋಶನ್ ಆಸ್ಪತ್ರೆಗೆ ರಾಣಿ ಅಬ್ಬಕ್ಕ ಮರು ನಾಮಕರಣಕ್ಕೆ ಪ್ರಸ್ತಾವನೆ: ಸಚಿವ ಸುನಿಲ್ ಕುಮಾರ್

Update: 2022-02-26 12:35 GMT
 ಸಚಿವ ಸುನಿಲ್ ಕುಮಾರ್

ಮಂಗಳೂರು: ತೌಳವ ಸ್ವಾತಂತ್ರ್ಯ ಸೇನಾನಿ ರಾಣಿ ಅಬ್ಬಕ್ಕ ಅವರ ಬಗ್ಗೆ ಜನತೆ ತಿಳಿದುಕೊಳ್ಳುವುದು ಮತ್ತು ಸ್ಮರಿಸುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ರಾಣಿ ಅಬ್ಬಕ್ಕ ಆಸ್ಪತ್ರೆ ಎಂಬುದಾಗಿ ಮರು ನಾಮಕರಣ ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿ ಕೊಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಅವರು ಶನಿವಾರ ಮಂಗಳೂರು ಮಹಾನಗರ ಪಾಲಿಕೆ ಮತ್ತು ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ನಡೆದ ನಮ್ಮ ಅಬ್ಬಕ್ಕ - 2022 ಅಮೃತ ಸ್ವಾತಂತ್ರ್ಯ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಡಿದ ಧೀರ ಮಹಿಳೆ. ನಮ್ಮ ಯುವ ಪೀಳಿಗೆ ಅವರಿಂದ ಸ್ಫೂರ್ತಿ ಪಡೆಯ ಬೇಕು. ಅಬ್ಬಕ್ಕ ಅವರಂತಹ ದೃಢ ಮನಸ್ಸಿನ, ಧೀರ ಮಹಿಳೆಯರು ನಮ್ಮಲ್ಲಿಯೂ ಬರ ಬೇಕು ಎಂದ ಅವರು, ಲೇಡಿಗೋಷನ್ ಆಸ್ಪತ್ರೆಗೆ ರಾಣಿ ಅಬ್ಬಕ್ಕ ಅವರ ಹೆಸರನ್ನಿಟ್ಟು ಮರು ನಾಮಕರಣ ಮಾಡುವ ಕುರಿತಂತೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಶಾಸಕ ಡಿ. ವೇದವ್ಯಾಸ ಕಾಮತ್ ಅವರಿಗೆ ಸಲಹೆ ಮಾಡಿದರು.

ರಾಣಿ ಅಬ್ಬಕ್ಕ ಅವರ ಹೆಸರು ನಮಗೆ, ನಮ್ಮ ರಾಜ್ಯಕ್ಕೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಗೊತ್ತಾಗಬೇಕು ಎಂದವರು ಹೇಳಿದರು.

ಸ್ವಾತಂತ್ರ್ಯವು ನಮಗೆ ಸುಲಭವಾಗಿ ಸಿಕ್ಕಿಲ್ಲ ಎಂಬುದನ್ನು ಯುವ ಪೀಳಿಗೆಗೆ ತಿಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯದ 75 ಕಡೆಗಳಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ಕೊರೊನ ಕಾರಣದಿಂದ ಮುಂದೂಡಲಾಗಿದ್ದ ಈ ಕಾರ್ಯಕ್ರಮಗಳು ಅಮೃತ ಭಾರತಿಗೆ ಕನ್ನಡದ ಆರತಿ ಎಂಬ ಹೆಸರಿನಲ್ಲಿ ಮುಂದಿನ ಮಾರ್ಚ್ 3 ರಿಂದ ಒಂದು ವರ್ಷ ಪರ್ಯಂತ ರಾಜ್ಯಾದ್ಯಂತ ನಡೆಯಲಿವೆ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಶಾಸಕ ಡಿ. ವೇದವ್ಯಾಸ ಕಾಮತ್ ಮುಖ್ಯ ಅತಿಥಿಯಾಗಿದ್ದ ಸಮಾರಂಭದಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News