ಭಾರತದಲ್ಲಿ ಮನುಷ್ಯರಿಗೆ ತಾಳಿಕೊಳ್ಳಲು ಸಾಧ್ಯವಾಗದಷ್ಟು ಉಷ್ಣತೆಯ ವಾತಾವರಣ ಉಂಟಾಗಬಹುದು: ವಿಶ್ವಸಂಸ್ಥೆ ಎಚ್ಚರಿಕೆ

Update: 2022-03-01 09:19 GMT

ಹೊಸದಿಲ್ಲಿ: ಹಾನಿಕಾರಕ ಹೊರಸೂಸುವಿಕೆಗಳನ್ನು ಕಡಿಮೆಗೊಳಿಸದೇ ಇದ್ದಲ್ಲಿ ಮುಂದೆ ಅದು ಮನುಷ್ಯರು ತಾಳಿಕೊಳ್ಳಲು ಸಾಧ್ಯವಾಗುವುದಕ್ಕಿಂತ ಹೆಚ್ಚು ಉಷ್ಣತೆಯ ವಾತಾವರಣಕ್ಕೆ ಭಾರತ ಸಹಿತ ಕೆಲವು ದೇಶಗಳಲ್ಲಿ ಕಾರಣವಾಗಬಹುದೆಂದು  ವಿಶ್ವ ಸಂಸ್ಥೆಯ ಅಂತರ-ಸರಕಾರಿ ಸಮಿತಿಯ ಹವಾಮಾನ ಬದಲಾವಣೆ ವರದಿಯಲ್ಲಿ ತಿಳಿಸಲಾಗಿದೆ. ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಮತ್ತೆ ಸರಿಪಡಿಸಲು ಸಾಧ್ಯವಾಗುವುದಿಲ್ಲ ಎಂದು ಸೋಮವಾರ ಬಿಡುಗಡೆಗೊಳಿಸಲಾದ ವರದಿಯಲ್ಲಿ ಎಚ್ಚರಿಸಲಾಗಿದೆ.

ಹೊರಸೂಸುವಿಕೆ ಪ್ರಮಾಣ ಬಹಳಷ್ಟು ಹೆಚ್ಚಾಗಿದ್ದರೆ ಈ ಶತಮಾನದ ಮಧ್ಯಭಾಗದಲ್ಲಿ ಭಾರತದ ಸುಮಾರು 3.5 ಕೋಟಿ ಜನರು ಕರಾವಳಿ ಭಾಗಗಳಲ್ಲಿ ನೆರೆಯಿಂದ ಸಮಸ್ಯೆಗೀಡಾಗಲಿದ್ದರೆ ಶತಮಾನದ ಅಂತ್ಯದ ವೇಳೆಗೆ 4.5 ಕೋಟಿಯಿಂದ 5 ಕೋಟಿಯಷ್ಟು ಜನರು ಪ್ರವಾಹಗಳಿಂದ ಬಹಳಷ್ಟು ಸಮಸ್ಯೆ ಎದುರಿಸಲಿದ್ದಾರೆ ಎಂದು ವರದಿ ಎಚ್ಚರಿಸಿದೆ.

ಇತರ ಪ್ರದೇಶಗಳಿಗೆ ಹೋಲಿಸಿದಾಗ ನಗರ ಪ್ರದೇಶದ ಅಂದಾಜು 87.7 ಕೋಟಿ ಜನರು 2050ರ ವೇಳೆಗೆ ಅಪಾಯದಲ್ಲಿರಲಿದ್ದಾರೆ  ಹಾಗೂ ಈ ಸಂಖ್ಯೆ 2020ರಲ್ಲಿದ್ದ 48 ಕೋಟಿಯ ದ್ವಿಗುಣವಾಗಿದೆ ಎಂದು ವರದಿ ಹೇಳಿದೆ.

ತಾಪಮಾನವು ಒಂದು ಡಿಗ್ರಿ ಸೆಲ್ಸಿಯಸ್‍ನಿಂದ 4 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾದಲ್ಲಿ ಭಾರತದಲ್ಲಿ ಭತ್ತದ ಇಳುವರಿ ಶೇ 10ರಿಂದ ಶೇ 30ರಷ್ಟು, ಜೋಳದ ಇಳುವರಿ ಶೇ. 25ರಿಂದ ಶೇ. 70ರಷ್ಟು ಇಳಿಕೆಯಾಗಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

 ಮುಂದಿನ ಎರಡು ದಶಕಗಳಲ್ಲಿ ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್‍ನಷ್ಟು ಏರಿಕೆಯಾಗಿ ಕಾರಣವಾಗಿ ತಪ್ಪಿಸಲು ಸಾಧ್ಯವಾಗದ ಹಾನಿಗಳನ್ನುಂಟು ಮಾಡಬಹುದು ಎಂದು ತನ್ನ ಆರನೇ ಮೌಲ್ಯಮಾಪನ ವರದಿಯ ಆರನೇ ಭಾಗದಲ್ಲಿ ಸಮಿತಿ ತಿಳಿಸಿದೆ.

2010 ಹಾಗೂ 2020ರ ನಡುವೆ ಆಫ್ರಿಕಾ, ದಕ್ಷಿಣ ಏಷ್ಯಾ, ಮಧ್ಯ ಮತ್ತು ದಕ್ಷಿಣ ಅಮೆರಿಕಾದ ಸಹಿತ ಹಲವು ಕಡೆಗಳಲ್ಲಿ ಪ್ರವಾಹ, ಬರ ಮತ್ತು ಬಿರುಗಾಳಿಗಳಂತಹ ಪ್ರಾಕೃತಿಕ ವಿಕೋಪಗಳಿಂದ 15 ಪಟ್ಟು ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News