ಬೆಂಗಳೂರಿನಲ್ಲಿ ಜನ ಪರ್ಯಾಯ ಬಜೆಟ್ ಅಧಿವೇಶನ ಸಮಾರೋಪ: ಹಲವು ಜನಪರ ನಿರ್ಣಯಗಳ ಅಂಗೀಕಾರ
ಬೆಂಗಳೂರು, ಮಾ.23: ಕಳೆದ ಮೂರು ದಿನಗಳಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಜನ ಪರ್ಯಾಯ ಬಜೆಟ್ ಅಧಿವೇಶನ ಮುಕ್ತಾಯಗೊಂಡಿದ್ದು, ಬೃಹತ್ ಪ್ರಮಾಣದಲ್ಲಿ ಸೇರಿದ್ದ ಜನಸ್ತೋಮವೂ ಸರ್ವಾನುಮತದಿಂದ ಹಲವು ನಿರ್ಣಯಗಳನ್ನು ಅಂಗೀಕರಿಸಿದೆ.
ಸಂಯುಕ್ತ ಹೋರಾಟ–ಕರ್ನಾಟಕ ವತಿಯಿಂದ 3 ದಿನಗಳ ಕಾಲ ಹಮ್ಮಿಕೊಂಡಿದ್ದ ಜನ ಪರ್ಯಾಯ ಬಜೆಟ್ ಅಧಿವೇಶನದಲ್ಲಿ ಕೇಂದ್ರ, ರಾಜ್ಯ ಸರಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ರಣಕಹಳೆಯನ್ನು ಮೊಳಗಿಸಿದರು.
ರಾಜ್ಯದ ಪ್ರಸಕ್ತ ಬಜೆಟ್ ಅಧಿವೇಶನದಲ್ಲಿ ಹಾಗೂ ಬಜೆಟ್ ಪ್ರಸ್ತಾಪದಲ್ಲಿ ಆರ್ಥಿಕ ಬಿಕ್ಕಟ್ಟು ಹಾಗೂ ಕೋವಿಡ್ ಬಿಕ್ಕಟ್ಟಿನ ಜೊತೆ ಬೆಲೆ ಏರಿಕೆ, ನಿರುದ್ಯೋಗ, ಬಡತನ, ವಲಸೆ, ಆತ್ಮಹತ್ಯೆ ಮುಂತಾದ ಹಲವಾರು ಜ್ವಲಂತ ಸಮಸ್ಯೆಗಳಿಂದ ತೊಂದರೆಗೆ ಸಿಲುಕಿರುವ ರಾಜ್ಯದ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು, ದಲಿತರು, ಮಹಿಳೆಯರು ಹಾಗೂ ವಿದ್ಯಾರ್ಥಿ-ಯುವಜನರಿಗೆ ಯಾವುದೇ ಪರಿಹಾರ ಕ್ರಮಗಳನ್ನು ಒದಗಿಸಿಲ್ಲ ಬದಲಿಗೆ ಮತ್ತಷ್ಟು ಹೊರೆಗಳನ್ನು ಹೇರಲಾಗಿದೆ ಎಂದು ಆರೋಪಿಸಲಾಗಿದೆ.
ರಾಜ್ಯದ ದಲಿತರು ಹಾಗೂ ಮಹಿಳೆಯರು ವಿಶೇಷವಾಗಿ ಹೆಚ್ಚು ದೌರ್ಜನ್ಯಕ್ಕೆ ತುತ್ತಾಗುತ್ತಾ ಸಾಮಾಜಿಕ ದಮನ ಹಾಗೂ ಅಪಮಾನಗಳನ್ನು ಅನುಭವಿಸುತ್ತಾ ಇದ್ದರೂ ಬಜೆಟ್ನಲ್ಲಿ ಸೂಕ್ತ ಪರಿಹಾರ ಕ್ರಮಗಳನ್ನು ಒದಗಿಸದೇ ಭಾರಿ ದೊಡ್ಡ ಸಾಮಾಜಿಕ ಅನ್ಯಾಯಕ್ಕೆ ಗುರಿಪಡಿಸಲಾಗಿದೆ.
ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೆಸರಾಗಿರುವ ಕರ್ನಾಟಕದ ಸೌಹಾರ್ದ-ಶಾಂತಿ ಪರಂಪರೆಗೆ, ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ ಸಮಾಜದಲ್ಲಿ ಕೋಮು ವಿಭಜನೆಯ ದಾಳವಾಗಿ ಸ್ವತಃ ರಾಜ್ಯ ಸರಕಾರವೇ ಕೆಲಸ ಮಾಡುತ್ತಿದೆ. ಇದು ಅತ್ಯಂತ ಕಳವಳಕಾರಿಯಾದ ವಿದ್ಯಮಾನವಾಗಿದ್ದು ಈ ವಿದ್ಯಮಾನಗಳು ಈಗಾಗಲೇ ಹಲವು ರೀತಿಯ ತಾರತಮ್ಯಗಳಿಗೆ ಗುರಿಯಾಗಿರುವ ಅಲ್ಪಸಂಖ್ಯಾತ ಜನಸಮೂಹಗಳನ್ನು ಸಮಾಜದ ಮುಖ್ಯವಾಹಿನಿಯಿಂದ ದೂರ ಸರಿಸುವ ಕೋಮು ಶಕ್ತಿಗಳ ಹೀನ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿವೆ.
ಈ ಹಿನ್ನೆಲೆಯ ಸತತ ಮೂರು ದಿನಗಳು ನಡೆದ “ಜನ ಪರ್ಯಾಯ ಬಜೆಟ್ ಅಧಿವೇಶನ”ವು ರಾಜ್ಯದ ಎಲ್ಲಾ ಪ್ರಮುಖ ವಿಷಯಗಳನ್ನು ಆಮೂಲಾಗ್ರವಾಗಿ ಚರ್ಚಿಸಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಿದ್ದು, ಈ ನಿರ್ಣಯಗಳನ್ನು ಅನುಷ್ಠಾನಕ್ಕೆ ಬರಲು ಬಲಿಷ್ಠವಾದ ಜನ ಚಳುವಳಿಗೆ ಸಿದ್ಧರಾಗಲು ರಾಜ್ಯದ ರೈತರು, ಕಾರ್ಮಿಕರು, ದಲಿತರು, ಮಹಿಳೆಯರು, ವಿದ್ಯಾರ್ಥಿ-ಯುವಜನ ಸಮೂಹಕ್ಕೆ ಈ ಮೂಲಕ ಕರೆ ನೀಡಿದೆ.
ಪ್ರಮುಖ ನಿರ್ಣಯಗಳು
ರೈತ ವಿರೋಧಿ ರಾಜ್ಯ ಸರಕಾರದ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗಳು ರದ್ದಾಗಬೇಕು. ದಲಿತರು, ರೈತರಿಗೆ ಭೂಮಿ, ನಿವೇಶನ ಹಂಚಿಕೆಯಾಗಬೇಕು.
ರಾಜ್ಯದ ಎಪಿಎಂಸಿ ಕಾಯ್ದೆಯ ತಿದ್ದುಪಡಿಗಳು ರದ್ದಾಗಬೇಕು, ಎಪಿಎಂಸಿಗಳನ್ನು ರೈತ ಸ್ನೇಹಿಯಾಗಿ ಮಾರ್ಪಡಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಬೇಕು.
ರಾಜ್ಯದ ಜಾನುವಾರು ಹತ್ಯೆ ನಿಷೇದ ಕಾಯ್ದೆ ತಿದ್ದುಪಡಿಗಳು ರದ್ದಾಗಬೇಕು ಹಾಗೂ ಕೋಳಿ, ಕುರಿ ಸಾಕಾಣಿಕೆ, ಹೈನುಗಾರಿಕೆಯ ರೈತರ ಬೇಡಿಕೆಗಳನ್ನು ಈಡೇರಿಸಬೇಕು.
ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಲು, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿ ಮಾಡುವ “ಕಾನೂನು”ನನ್ನು ಜಾರಿ ಮಾಡಬೇಕು.
ವಿದ್ಯುತ್ ಮಸೂದೆ-2022 ವಾಪಸ್ಸು ಪಡೆಯಬೇಕು; ವಿದ್ಯುತ್ ಖಾಸಗೀಕರಣ ನಿಲ್ಲಬೇಕು.
ಅಗತ್ಯಕ್ಕೆ ತಕ್ಕಂತೆ ರೈತರು, ಕೃಷಿ ಕೂಲಿಕಾರರಿಗೆ ಬ್ಯಾಂಕ್ ಸಾಲ ನೀಡಿಕೆ, ವಿಶೇಷ ಸಂದರ್ಭಗಳಲ್ಲಿ ಸಾಲ ಮನ್ನಾ ಮಾಡುವಂತಹ “ಋಣಮುಕ್ತ ಕಾಯ್ದೆ”ಯನ್ನು ರಾಜ್ಯ ಸರಕಾರ ಜಾರಿಗೆ ತರಬೇಕು:
ಆಹಾರ ಧಾನ್ಯ ಬೆಳೆಗಳು ಎಕರೆಗೆ ಕನಿಷ್ಠ 25,000 ರೂ, ತರಕಾರಿ, ತೋಟಗಾರಿಕೆ ಬೆಳೆಗಳ ಎಕರೆಗೆ ಕನಿಷ್ಠ ಒಂದು ಲಕ್ಷ ರೂ. ಬೆಳೆ ನಷ್ಟ ಪರಿಹಾರ ನೀಡಲು ಆಗ್ರಹ, ಓಬಿರಾಯನ ಕಾಲದ “ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(ಎನ್.ಡಿ.ಆರ್.ಎಫ್)ಯ ಅವೈಜ್ಞಾನಿಕ ಮಾನದಂಡಗಳನ್ನು ಪರಿಷ್ಕರಿಸಬೇಕು.
ರಾಜ್ಯದಲ್ಲಿ ನೀರಾವರಿ ಯೋಜನೆಗಳ ಜಾರಿಗೆ ಕೂಡಲೇ ಆದ್ಯತೆ ಸಿಗಬೇಕು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಅಭಿವೃದ್ಧಿಗೆ ಆದ್ಯತೆ ಸಿಗಬೇಕು.
ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗಳು ರದ್ದಾಗಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು, ಕನಿಷ್ಠ ವೇತನ ಜಾರಿಯಾಗಬೇಕು.
ದಲಿತ-ಹಿಂದುಳಿದ, ಗ್ರಾಮೀಣ ಪ್ರದೇಶದ ಹಾಗೂ ಬಡ ವರ್ಗಗಳ ವಿದ್ಯಾರ್ಥಿಗಳಿಗೆ ಮಾರಕವಾಗಿರುವ ಹೊಸ ಶಿಕ್ಷಣ ನೀತಿ(ಎನ್ಇಪಿ) ವಾಪಸ್ಸು ಪಡೆಯಬೇಕು, ಸರಕಾರಿ, ಅರೇ ಸರಕಾರಿ ಇಲಾಖೆ/ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ನಾನಾ ನೆಪಗಳನ್ನೊಡ್ಡಿ ದಲಿತ-ಹಿಂದುಳಿದ ವರ್ಗಗಳ ವಿದ್ಯಾರ್ಥಿ ವೇತನಗಳಿಗೆ ಮತ್ತು ಹಾಸ್ಟೆಲ್ ಸೌಲಭ್ಯಗಳಿಗೆ ಪದೆ ಪದೆ ಅಡಚಣೆ ಒಡ್ಡುವುದನ್ನು ನಿಲ್ಲಿಸಬೇಕು. ಪ್ರಗತಿಪರ ವೈಜ್ಞಾನಿಕ ಶಿಕ್ಷಣ ಕ್ರಮಕ್ಕೆ ಒತ್ತು ನೀಡಬೇಕು. ಉದ್ಯೋಗ ಸೃಷ್ಟಿಗಾಗಿ ಸಮಗ್ರ ಯೋಜನೆಯೊಂದನ್ನು ರೂಪಿಸಬೇಕು.
ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಗಟ್ಟಬೇಕು, ರೇಷನ್ ಪದ್ಧತಿಯನ್ನು ಬಲಪಡಿಸಬೇಕು, ಮತ್ತಷ್ಟು ಗ್ರಾಹಕ ಸ್ನೇಹಿಯಾಗಿ ಅಗತ್ಯ ವಸ್ತುಗಳ ಕಾಯ್ದೆಯನ್ನು ಮತ್ತೆ ಜಾರಿಮಾಡಬೇಕು.