ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಹಿಳಾ ಕ್ರಿಯಾಶೀಲತೆಯ ದರ್ಶನ: ಡಾ.ಅಶ್ವತ್ಥ ನಾರಾಯಣ
ಬೆಂಗಳೂರು, ಎ. 6: ‘ಮಹಿಳೆಯರ ಆರ್ಥಿಕ ಸಬಲೀಕರಣದ ಆಶಯವನ್ನುಳ್ಳ ರಾಷ್ಟ್ರೀಯ ‘ಸಂಜೀವಿನಿ ಸರಸ್ ಮೇಳ'ವು ಎ.8ರಿಂದ 18ರವರೆಗೆ ಇಲ್ಲಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿದ್ದು, ಮೇಳವನ್ನು ಎ.8ರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ' ಎಂದು ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಳದಲ್ಲಿ ಮಹಿಳಾ ಸ್ವಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿದ್ದು, 300ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಗಳ ಸಂಯುಕ್ತ ಆಶ್ರಯದಲ್ಲಿ ‘ಸಂಜೀವಿನಿ ಸರಸ್' ಮೇಳ ನಡೆಯುತ್ತಿದ್ದು, ಇದರಲ್ಲಿ ಅಖಿಲ ಭಾರತ ಮಟ್ಟದ ಉತ್ಪನ್ನಗಳು ಗ್ರಾಹಕರಿಗೆ ಸಿಗಲಿವೆ. ರಾಷ್ಟ್ರೀಯ ಗ್ರಾಮೀಣ ಮತ್ತು ನಗರ ಜೀವನೋಪಾಯ ಅಭಿಯಾನದಡಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
‘ಮುಖ್ಯವಾಗಿ ಈ ಮೇಳದಲ್ಲಿ ಕೈಮಗ್ಗದ ಉತ್ಪನ್ನಗಳು, ಕರಕುಶಲ ವಸ್ತುಗಳು, ಬುಡಕಟ್ಟು ಮತ್ತು ಸಾವಯವ ಉತ್ಪನ್ನಗಳು, ಆಲಂಕಾರಿಕ ವಸ್ತುಗಳು, ಮಣ್ಣಿನಿಂದ ತಯಾರಿಸಿದ ಪಾತ್ರೆಗಳು, ಮರದಿಂದ ಮಾಡಿದ ವಸ್ತುಗಳು, ಬಿದಿರು ಮತ್ತು ಸೆಣಬಿನ ವಸ್ತುಗಳು, ಸಾಂಬಾರ ಪದಾರ್ಥಗಳು, ಸಾಂಪ್ರದಾಯಿಕ ವಸ್ತ್ರಗಳು, ಕಲಾಕೃತಿಗಳು, ವರ್ಣಚಿತ್ರಗಳು, ಟೆರ್ರಾಕೋಟ ಮತ್ತು ಪಾರಂಪರಿಕ ಉತ್ಪನ್ನಗಳು ಹಾಗೂ ಸಂಸ್ಕರಿತ ಆಹಾರ ಪದಾರ್ಥಗಳು ಮುಂತಾದವು ಸಿಗಲಿವೆ' ಎಂದು ಅವರು ಮಾಹಿತಿ ನೀಡಿದರು.
‘ಮಹಿಳಾ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಇಲ್ಲಿ ತಮ್ಮ ಕೌಶಲಗಳನ್ನು ಪ್ರದರ್ಶಿಸುವ ಜತೆಗೆ ಗ್ರಾಹಕರೊಂದಿಗೆ ನೇರ ಸಂವಾದ ಮಾಡಬಹುದು. ಅಲ್ಲದೆ, ಉದ್ಯಮಶೀಲತೆಯನ್ನು ಉತ್ತೇಜಿಸುವ ಗುರಿಯೊಂದಿಗೆ ತರಬೇತಿ, ಕಾರ್ಯಾಗಾರ, ವಿಚಾರ ಸಂಕಿರಣ, ಕಾರ್ಫೋರೇಟ್ ಪ್ರಮುಖರ ಮಾತುಕತೆ ಸಿಎಸ್ಆರ್ ದುಂಡು ಮೇಜಿನ ಸಭೆಗಳು ಮತ್ತು ನವೋದ್ಯಮ ಹಾಗೂ ಎನ್ಜಿಒ ಅಧಿವೇಶನಗಳನ್ನು ಏರ್ಪಡಿಸಲಾಗಿದೆ' ಎಂದು ಅಶ್ವತ್ಥನಾರಾಯಣ ನುಡಿದರು.
‘ಉದ್ಯಮಶೀಲ ಮಹಿಳೆಯರಿಗೆ ಸರಕಾರದ ವಿವಿಧ ಇಲಾಖೆಗಳು ಮತ್ತು ಬ್ಯಾಂಕುಗಳು ವಿವಿಧ ಸಾಲ ಸೌಲಭ್ಯ ಹಾಗೂ ಸೇವಾ ಉಪಕ್ರಮಗಳನ್ನು ಹೊಂದಿವೆ. ಮೇಳದಲ್ಲಿ ಈ ಬಗ್ಗೆಯೂ ಮಾಹಿತಿ ಒದಗಿಸುವ ಏರ್ಪಾಡನ್ನು ಮಾಡಲಾಗಿದೆ. ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ಮಂಜುಶ್ರೀ, ಜಂಟಿ ನಿರ್ದೇಶಕಿ ಸ್ವರೂಪಾ, ಉಪ ನಿರ್ದೇಶಕಿ ನಯನಾ ಸೇರಿದಂತೆ ಮತ್ತಿತರರು ಹಾಜರಿದ್ದರು.
‘ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಕಿರು ಉದ್ಯಮಗಳಿದ್ದು, ಈ ವರ್ಷ ಇನ್ನೂ 30 ಸಾವಿರದಷ್ಟು ಕಿರು ಉದ್ದಿಮೆಗಳನ್ನು ಹೆಚ್ಚಿಸುವುದಲ್ಲದೆ, ಈ ವಹಿವಾಟನ್ನು ಡಿಜಿಟಲೀಕರಣಗೊಳಿಸಲಾಗುವುದು. ಕರಕುಶಲ ಉತ್ಪನ್ನಗಳು ಪರಿಸರ ಸ್ನೇಹಿಯಾಗಿವೆ. ಅಲ್ಲದೆ, ಮಹಿಳಾ ಸ್ವಸಹಾಯ ಗುಂಪುಗಳ ಆರ್ಥಿಕ ಸಬಲೀಕರಣಕ್ಕೆ ಎ.8ರಿಂದ ಏರ್ಪಡಿಸಿರುವ ಪ್ರದರ್ಶನ ಮತ್ತು ಮಾರಾಟ ಮೇಳ ನೆರವಾಗಲಿದೆ. ಜತೆಗೆ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಕ್ರಮ ವಹಿಸಲಾಗಿದೆ'
-ಡಾ.ಅಶ್ವತ್ಥ ನಾರಾಯಣ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ