ಬೆಂಗಳೂರು: ನ್ಯಾಯಾಲಯದ ಮಹಡಿಯಿಂದ ಬಿದ್ದ ವಿಚಾರಣಾಧೀನ ಕೈದಿ ಗಂಭೀರ

Update: 2022-04-13 13:39 GMT

ಬೆಂಗಳೂರು, ಎ.13: ವಿಚಾರಣೆಗಾಗಿ ಆಗಮಿಸಿದ್ದ ವಿಚಾರಣಾಧೀನ ಕೈದಿಯೊಬ್ಬ, ಸಿಟಿ ಸಿವಿಲ್ ಕೋರ್ಟ್ ಕಟ್ಟಡದ 3ನೆ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಜತೀನ್ ಕುಮಾರ್ ಎಂಬಾತ ಕಟ್ಟಡದಿಂದ ಕೆಳ ಬಿದ್ದಿರುವ ಆರೋಪಿ.

ತಮಿಳುನಾಡು ಮೂಲದ ಜತೀನ್ ವೃತ್ತಿಯಲ್ಲಿ ಟೆಕ್ಕಿಯಾಗಿದ್ದ. ಕೆಲ ವರ್ಷಗಳ ಹಿಂದೆ ಲಕ್ಷ್ಮೀಶಂಕರಿ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದಾನೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿಗೆ ಮೂರು ವರ್ಷದ ಹಾಗೂ 2 ವರ್ಷದ ಮಕ್ಕಳಿದ್ದರು. ಪತ್ನಿಯು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಜತೀನ್‍ಗೆ ಕೆಲಸ ಸಿಗದೆ ಓಡಾಡಿಕೊಂಡಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ವೈಮನಸ್ಸು ಉಂಟಾಗಿತ್ತು.

ಕಳೆದ 2020 ಮಾ.20 ರಂದು ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ಮನೆಯಲ್ಲಿ ಊಟ ಮಾಡಿ ಮಲಗಿದ್ದ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ಪತ್ನಿ ದೂರು ನೀಡಿದ ಮೇರೆಗೆ ಹುಳಿಮಾವು ಪೊಲೀಸರು ಆತನನ್ನು ಬಂಧಿಸಿ, ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದರು.

ಬುಧವಾರ ಸಿಟಿ ಸಿವಿಲ್ ಕೋರ್ಟ್‍ನಲ್ಲಿ ಪ್ರಕರಣ ಸಂಬಂಧ ವಿಚಾರಣೆಯಿತ್ತು. ಜೈಲಿನಿಂದ ಸಿಎಆರ್ ಪೊಲೀಸರು ಎಸ್ಕಾರ್ಟ್ ಮೂಲಕ ಆರೋಪಿಯನ್ನು ಕರೆ ತಂದಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿ ವಿಚಾರಣಾಧೀನ ಅವಧಿಯಲ್ಲಿ ಜೈಲಿನಿಂದಲೇ ಪತ್ನಿಗೆ ಜೀವ ಬೆದರಿಕೆ ಹಾಕಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News