×
Ad

ಈಶ್ವರಪ್ಪರ ರಾಜೀನಾಮೆ ಅಷ್ಟೇ ಸಾಲದು, ಅವರನ್ನು ಕೂಡಲೇ ಬಂಧಿಸಿ: ಹಿಂದೂ ಮಹಾಸಭಾ ಆಗ್ರಹ

Update: 2022-04-16 12:54 IST

ಮಂಗಳೂರು, ಎ.16: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡಿದರಷ್ಟೇ ಸಾಲದು. ಅವರನ್ನು ಕೂಡಲೇ ಬಂಧಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಆಗ್ರಹ ಮಾಡಿದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್, ರಾಜ್ಯದಲ್ಲಿ ನಾನಾ ರೀತಿಯಲ್ಲಿ ಹಿಂದೂ ಕಾರ್ಯಕರ್ತರ ಬಲಿ ಆಗುತ್ತಿದೆ. ಹಿಂದುತ್ವದ ಹೆಸರು ಹೇಳಿ ಅಧಿಕಾರಕ್ಕೆ ಬಂದವರಿಗೆ ಹಿಂದೂ ಕಾರ್ಯಕರ್ತರನ್ನು ಬಳಸಿಕೊಂಡು ಅಧಿಕಾರ ಪಡೆಯುವುದು ಮಾತ್ರ ಗೊತ್ತಿದೆ ಹೊರತು ಹಿಂದೂಗಳಿಗಾಗಿ ಏನೂ ಮಾಡಿಲ್ಲ ಎಂದು ದೂರಿದರು.

ಲಂಚ, ಮಂಚ ಮತ್ತು ಹಿಂದೂ ವಿರೋಧಿ ನೀತಿಗಳು ಮಾತ್ರ ಬಿಜೆಪಿ ಅಜೆಂಡಾ ಆಗಿದೆ. ಯಾವ ಉದ್ದೇಶಕ್ಕಾಗಿ ಅಧಿಕಾರಕ್ಕಾಗಿ ಬಂದಿದ್ದಾರೋ ಅದು ಸಾಕಾರ ಆಗುತ್ತಿಲ್ಲ. ಈಶ್ವರಪ್ಪರ ರಾಜೀನಾಮೆ ಒತ್ತಾಯದ ಮೇಲೆ ಆಗಿದ್ದು, ಇದು ಚುನಾವಣೆ ಹಿನ್ನೆಲೆಯಲ್ಲಿ ಬೂಟಾಟಿಕೆಯ ಕುತಂತ್ರ ಮಾತ್ರ ಎಂದು ಟೀಕಿಸಿದರು.

 ಹಿಜಾಬ್ ಪ್ರಕರಣದಲ್ಲಿ ಆರು ವಿದ್ಯಾರ್ಥಿನಿಯರನ್ನು ನಿಯಂತ್ರಿಸಲು ಆಗದವರು ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದ ಸೂಕ್ತ ತನಿಖೆ ಮಾಡುತ್ತಾರೆಂಬ ನಂಬಿಕೆ ಇಲ್ಲ. ಬಿಜೆಪಿ ಕಾರ್ಯಕರ್ತರಾಗಿದ್ದ ವಿನಾಯಕ ಬಾಳಿಗಾ ಕೊಲೆಗೆ ಇನ್ನೂ ನ್ಯಾಯ ಸಿಕ್ಕಿಲ್ಲ. ಅವರ ಮನೆಯವರು ಇನ್ನೂ ಕಣ್ಣೀರು ಹಾಕುತ್ತಿದ್ದಾರೆ. ಇದನ್ನು ಕೊಲೆ ಅನ್ನಬೇಕೋ ಆತ್ಮಹತ್ಯೆ ಅನ್ನಬೇಕೋ ಗೊತ್ತಾಗುತ್ತಿಲ್ಲ. ಈ ಬಗ್ಗೆ ಉನ್ನತ  ಮಟ್ಟದ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.

ಮುಖಂಡರಾದ ಧರ್ಮೇಂದ್ರ ಮಾತನಾಡಿ, ಪ್ರಧಾನಿ ಮೋದಿ ಅವರ ಭ್ರಷ್ಟಾಚಾರ ವಿರುದ್ಧದ ಹೇಳಿಕೆ ಕರ್ನಾಟಕಕ್ಕೆ ಅನ್ವಯವಾಗುವುದಿಲ್ಲವೇ? ಎಂದು ಪ್ರಶ್ನಿಸಿದರು. ಈಶ್ವರಪ್ಪ ತಾನು ಪ್ರಾಮಾಣಿಕರಾಗಿದ್ದರೆ ಧರ್ಮಸ್ಥಳದಲ್ಲಿ ಬಂದು ಪ್ರಮಾಣ ಮಾಡಲಿ ಎಂದು ಆಗ್ರಹಿಸಿದರು.

ಕಾಂಗ್ರೆಸ್ 60 ವರ್ಷದಲ್ಲಿ ಲೂಟಿ ಮಾಡಿದೆ ಎಂದು ಅಧಿಕಾರಕ್ಕೆ ಬಂದವರು 40 ಪರ್ಸೆಂಟ್ ಕಮಿಷನ್ ಪಡೆಯುತ್ತಾರೆ ಎಂದರೆ ಏನರ್ಥ. ಈಶ್ವರಪ್ಪನವರು ಎಲ್ಲಾ ಕಾಮಗಾರಿಗಳನ್ನು ವರ್ಕ್ ಆರ್ಡರ್ ಪಡೆದೇ ನೀಡಿದ್ದಾರೆಂಬ ಬಗ್ಗೆ ಬಹಿರಂಗವಾಗಿ ಹೇಳಲಿ. ಅಧಿಕಾರಿಗಳು,  ಇಂಜಿನಿಯರ್ ಗಳು, ಜೂನಿಯರ್ ಇಂಜಿನಿಯರ್ ಗಳು ಹೇಳಲಿ. ಸರಕಾರದ ವಿಸರ್ಜನೆ ಮಾಡಿ ರಾಜ್ಯಪಾಲರ ಮೂಲಕ ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಪ್ರಮೋದ್ ಉಚ್ಚಿಲ್, ಹರ್ಷ ನಾಯಕ್, ಶಿವಪ್ರಸಾದ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News