ಗುರಿ ತಲುಪದ ಅಧಿಕಾರಿಗಳ ತಲೆದಂಡ ನಿಶ್ಚಿತ: ಡಿಎಚ್‍ಒಗಳ ಸಮ್ಮೇಳನದಲ್ಲಿ ಅಧಿಕಾರಿಗಳಿಗೆ ಸಚಿವ ಡಾ.ಸುಧಾಕರ್ ತರಾಟೆ

Update: 2022-04-26 14:29 GMT

ಬೆಂಗಳೂರು, ಎ. 26: ‘ಸರಕಾರದ ಆರೋಗ್ಯ ಸೇವೆ ಕಾರ್ಯಕ್ರಮಗಳಲ್ಲಿ ನಿಗದಿತ ಗುರಿ ತಲುಪದ ಜಿಲ್ಲೆಗಳಲ್ಲಿ ಆಯಾ ಜಿಲ್ಲಾ ಆರೋಗ್ಯಾಧಿಕಾರಿಗಳನ್ನೇ ಹೊಣೆ ಮಾಡಿ ಶಿಸ್ತುಕ್ರಮ ಜರುಗಿಸಬೇಕಾಗುತ್ತದೆ' ಎಂದು ಆರೋಗ್ಯ ಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. 

ಮಂಗಳವಾರ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ(ಡಿಎಚ್‍ಒ) ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ‘ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೋಟಿಗಟ್ಟಲೆ ಹಣವನ್ನೂ ವೆಚ್ಚ ಮಾಡಲಾಗುತ್ತಿದೆ. ಆದರೂ, ನಿರೀಕ್ಷಿತ ಫಲಿತಾಂಶ ಸಿಗದಿದ್ದರೆ ಇಷ್ಟೆಲ್ಲಾ ವ್ಯವಸ್ಥೆ, ಸಿಬ್ಬಂದಿಗಳಿದ್ದು ಏನು ಪ್ರಯೋಜನ? ಜನರಿಗೆ ಉತ್ತರದಾಯಿತ್ವರಲ್ಲದ ಅಧಿಕಾರಿಗಳ ತಲೆದಂಡ ನಿಶ್ಚಿತ' ಎಂದು ಎಚ್ಚರಿಸಿದರು.

‘ಸಣ್ಣಪುಟ್ಟ ಗೊಂದಲ, ಸಮಸ್ಯೆಗಳನ್ನು ಜಿಲ್ಲಾ ಹಂತದಲ್ಲೇ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಪ್ರತಿ ತಿಂಗಳು ಡಿಎಚ್‍ಒ ಅವರು ಡಿಎಸ್‍ಒ ಮತ್ತು ಇತರೆ ಸಿಬ್ಬಂದಿಗಳ ಸಭೆ ಕರೆದು ಸಮಾಲೋಚನೆ ಮೂಲಕ ಪರಿಹರಿಸಿಕೊಳ್ಳಬೇಕು. ಈ ವಿಷಯದಲ್ಲಿ ಅಧಿಕಾರಿಗಳು ಪ್ರತಿಷ್ಠೆ ಬದಿಗಿಟ್ಟು ಕೆಲಸ ಮಾಡಬೇಕು. ನಿಮ್ಮ ಹಂತದಲ್ಲಿ ಇದು ಸಾಧ್ಯ ಆಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಸುವ ಪದ್ಧತಿ ಜಾರಿಗೂ ಚಿಂತನೆ ನಡೆಸಲಾಗಿದೆ'ಎಂದು ತಿಳಿಸಿದರು.

ವರ್ಗಾವಣೆಗೆ ಕಡಿವಾಣ: ‘ಈ ವರ್ಷ ಮಾರ್ಗಸೂಚಿಯನ್ವಯ ಮಾತ್ರ ವರ್ಗಾವಣೆ ಮಾಡಲಾಗುವುದು. ಹಿಂದೆ ನಡೆಯುತ್ತಿದ್ದಂತೆ ಬೇಕಾಬಿಟ್ಟಿ ವರ್ಗಾವಣೆಗೆ ಅವಕಾಶ ನೀಡುವುದಿಲ್ಲ. ಒಟ್ಟಾರೆ ವರ್ಗಾವಣೆ ಪ್ರಮಾಣ ಶೇ.15 ಮೀರದಂತೆ ಎಚ್ಚರ ವಹಿಸಲಾಗುವುದು. ಬೆಂಗಳೂರು ನಗರ ಬಿಟ್ಟು ಹೋಗುತ್ತಿಲ್ಲ. 10 ವರ್ಷ ಒಂದೇ ಸ್ಥಳದಲ್ಲಿ ಯಾರಾದರೂ ಇದ್ದರೆ ಅಂತಹ ಹುದ್ದೆಗಳನ್ನು ಖಾಲಿ ಎಂದು ಬೇರೆ ನೇಮಕ ಮಾಡಲಾಗುವುದು. ಜತೆಗೆ ನಗರದೊಳಗೆ ಪರಸ್ಪರ ವರ್ಗಾವಣೆ ಕೋರುವ ಪ್ರಕರಣಗಳನ್ನೂ ಪರಿಗಣಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು. 

‘ಈಗಾಗಲೇ ಸೂಚನೆ ನೀಡಿರುವಂತೆ ಪ್ರತಿ ಬುಧವಾರ ಇಲಾಖೆಯ ಎಲ್ಲ ಹಂತದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆ ಮತ್ತು ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಎಲ್ಲ ಅಧಿಕಾರಿಗಳು ಅನುದಿನದ ಕಾರ್ಯ ನಿರ್ವಹಣೆ ಬಗ್ಗೆ ಡೈರಿ ನಿರ್ವಹಿಸುವುದು ಕಡ್ಡಾಯ. ಇನ್ನು ಮುಂದೆ ಅನಿರೀಕ್ಷಿತ ಭೇಟಿ ಮೂಲಕ ಇದನ್ನು ಪರಿಶೀಲಿಸಲಾಗುವುದು. ಈ ಸೂಚನೆಗಳನ್ನು ಪಾಲಿಸದವರ ವಿರುದ್ಧ ಕ್ರಮ ನಿಶ್ಚಿತ' ಎಂದು ಎಚ್ಚರಿಸಿದರು.

ಅಧಿಕಾರಿಗಳಿಗೆ ತರಾಟೆ: ಮಕ್ಕಳ ಆರೋಗ್ಯ ಕಾರ್ಯಕ್ರಮ ಅನುಷ್ಠಾನದಲ್ಲಿ ಯಾದಗಿರಿ, ಕೊಪ್ಪಳ, ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ನಿಗದಿತ ಗುರಿ ತಲುಪದಿರುವುದಕ್ಕೆ ಡಿಎಚ್‍ಒಗಳನ್ನು ತರಾಟೆ ತೆಗೆದುಕೊಂಡ ಸಚಿವರು, ಏನಾದರೂ ಸಮಸ್ಯೆಗಳು ಇದ್ದಲ್ಲಿ ಹೇಳಿ ಬಗೆಹರಿಸೋಣ? ಆದರೆ, ಎಲ್ಲ ಸೌಲಭ್ಯ ಕೊಟ್ಟ ಮೇಲೂ ಗುರಿ ತಲುಪದಿದ್ದರೆ ಸಹಿಸಲು ಆಗುವುದಿಲ್ಲ. ಜೂನ್ 30ರೊಳಗೆ ಕನಿಷ್ಟ ಶೇ.80 ಪ್ರಗತಿ ಸಾಧಿಸಬೇಕು' ಎಂದು ತಾಕೀತು ಮಾಡಿದರು.

‘ನವಜಾತು ಶಿಶು ಹಾರೈಕೆ ವಿಷಯದಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ. ಬೇರೆ ಕಡೆ ಕರೆದೊಯ್ಯುವಂತೆ ಸೂಚನೆ ನೀಡುವುದು, ಔಷಧಿಗಳನ್ನು ಖರೀದಿಸುವಂತೆ ಚೀಟಿ ಬರೆದುಕೊಡುವುದು ಮಾಡಬಾರದು. ಲಸಿಕಾಕರಣದಲ್ಲಿ ಆರೋಗ್ಯ ಕಾರ್ಯಕರ್ತರು ಹಿಂದೆ ಬಿದ್ದಿರುವುದು ನಕಾರಾತ್ಮಕ ಸಂದೇಶ ನೀಡುತ್ತಿದೆ. ಉಸ್ತುವಾರಿ ಅಧಿಕಾರಿಗಳು ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟು ನೂರರಷ್ಟು ಲಸಿಕಾಕರಣ ಗುರಿ ಮುಟ್ಟಬೇಕು ಎಂದು ಅವರು ಕಿವಿಮಾತು ಹೇಳಿದರು.

ನಿಗಾ ಇರಲಿ: ‘ಖಾಸಗಿ ಆಸ್ಪತ್ರೆಗಳಲ್ಲಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವ ಸಂಖ್ಯೆ ಹೆಚ್ಚುತ್ತಿದೆ. ಕೆಲ ಜಿಲ್ಲೆಗಳಲ್ಲಿ ಈ ಪ್ರಮಾಣ ಶೇ.50ನ್ನು ಮೀರಿದೆ. ಅಗತ್ಯವಿಲ್ಲದಿದ್ದರೂ ಸಿಸೇರಿಯನ್ ಮಾಡುತ್ತಿರುವ ಬಗ್ಗೆ ದೂರುಗಳು ಸರ್ವೇ ಸಾಮಾನ್ಯ ಆಗಿದೆ. ಇಂತಹ ಹಣಬಾಕ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಟ್ಟು ನಿಯಮ ಉಲ್ಲಂಘಿಸಿದವರ ಆಸ್ಪತ್ರೆಗಳಿಗೆ ಬೀಗ ಜಡಿಯಬೇಕು. ಈ ಬಗ್ಗೆ ನಿಯಮಿತವಾಗಿ ವರದಿ ನೀಡುವ ಪರಿಪಾಠ ಇಟ್ಟುಕೊಳ್ಳಬೇಕು' ಎಂದು ಅವರು ಸೂಚಿಸಿದರು.

ರಾಯಚೂರು, ಯಾದಗಿರಿ ಜಿಲ್ಲೆಗಳು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಯಕಲ್ಪ ಯೋಜನೆಯಲ್ಲಿ ನಿರೀಕ್ಷಿತ ಪ್ರಗತಿ ಆಗಿಲ್ಲ. ಇದಕ್ಕೆ ಕಾರಣಗಳೇನು ಎಂಬ ಬಗ್ಗೆ ವರದಿ ನೀಡಬೇಕು ಮತ್ತು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಂಡು ವಿವರಗನ್ನು ತಮ್ಮ ಕಚೇರಿಗೆ ಕಳುಹಿಸಬೇಕು. ಒಂದು ತಿಂಗಳ ಅವಧಿಯಲ್ಲಿ ಎಲ್ಲ ಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಕಾರ್ಯನಿರ್ವಹಿಸಬೇಕು. ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ನೂರರಷ್ಟು ಪ್ರಗತಿ ಸಾಧಿಸಲೇಬೇಕು ಎಂದು ತಾಕೀತು ಮಾಡಿದರು. 

‘ರಾಜ್ಯಾದ್ಯಂತ ಡಯಾಲಿಸಿಸ್ ವಿಷಯದಲ್ಲಿ ದೂರುಗಳು ಬಾರದಂತೆ ಡಿಎಚ್‍ಒಗಳು ಕಾರ್ಯ ನಿರ್ವಹಿಸಬೇಕು. ಒತ್ತಡ ಆಧರಿಸಿ ಫಲಾನುಭವಿಗಳಿಗೆ ವೇಳಾಪಟ್ಟಿ ನಿಗದಿಗೊಳಿಸಬೇಕು. 167 ಕೇಂದ್ರಗಳಲ್ಲಿ 633 ಡಯಾಲಿಸಿಸ್ ಯಂತ್ರಗಳು ಕೆಲಸ ಮಾಡುತ್ತಿವೆ. ಒಟ್ಟು 4,184 ಫಲಾನುಭವಿಗಳಿದ್ದಾರೆ. ಒತ್ತಡ ಹೆಚ್ಚು ಇರುವ ಕಡೆ ಮತ್ತಷ್ಟು ಯಂತ್ರಗಳನ್ನು ಆದ್ಯತೆ ಮೇರೆಗೆ ಅಳವಡಿಸಬೇಕು. ಖಾಸಗಿ ಆಸ್ಪತ್ರೆಯವರು ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ದೂರುಗಳಿವೆ. ನಿಯಮಿತ ಮೇಲ್ವಿಚಾರಣೆ ಮೂಲಕ ರೋಗಿಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಬೇಡಿಕೆ ಆಧರಿತ ನೇಮಕ ಮಾಡುವ ನಿಟ್ಟಿನಲ್ಲಿ ಖಾಲಿ ಹುದ್ದೆಗಳ ಪಟ್ಟಿ ಸಿದ್ಧಪಡಿಸಿ ಹಣಕಾಸು ಇಲಾಖೆ ಒಪ್ಪಿಗೆ ಪಡೆಯಲು ಪ್ರಸ್ತಾವನೆ ಸಿದ್ಧಪಡಿಸಬೇಕು. ಅಗತ್ಯ ಬಿದ್ದಲ್ಲಿ ಸಿಎಂ ಜತೆ ಸಮಾಲೋಚಿಸಿ ಆದ್ಯತೆ ಮೇರೆಗೆ ಒಪ್ಪಿಗೆ ದೊರಕಿಸಲಾಗುವುದು'

-ಡಾ.ಸುಧಾಕರ್ ಆರೋಗ್ಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News