ಉಕ್ರೇನ್ನಲ್ಲಿ ತೈಲ ಕೊರತೆ ಸಮಸ್ಯೆ ಶೀಘ್ರ ಅಂತ್ಯ: ಝೆಲೆನ್ಸ್ಕಿ

Update: 2022-04-30 19:02 GMT

ಕೀವ್, ಎ.30: ಉಕ್ರೇನ್ನ ಹಲವು ತೈಲ ಸಂಗ್ರಹಾಗಾರಗಳನ್ನು ರಶ್ಯದ ಸೇನೆ ಹಾನಿಗೊಳಿಸಿದ್ದರೂ, ತಮ್ಮ ದೇಶದಲ್ಲಿನ ತೈಲ ಕೊರತೆಯ ಬಿಕ್ಕಟ್ಟು ಶೀಘ್ರ ಅಂತ್ಯಗೊಳ್ಳಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
    ಉಕ್ರೇನ್ನ ಪ್ರಮುಖ ತೈಲ ಉತ್ಪಾದನೆ ಸಂಸ್ಥೆ ಕ್ರೆಮೆನ್ಚುಕ್ ತೈಲ ಸಂಸ್ಕರಣಾಗಾರ ಸಹಿತ ಹಲವು ಬೃಹತ್ ತೈಲ ಸಂಗ್ರಹಾಗಾರದ ಮೇಲೆ ಈ ವಾರ ರಶ್ಯ ದಾಳಿ ನಡೆಸಿ ಹಾನಿಗೈದಿದೆ. ಆಕ್ರಮಣಕಾರರು ಉದ್ದೇಶಪೂರ್ವಕವಾಗಿ ತೈಲ ಉತ್ಪಾದನೆ, ಪೂರೈಕೆ ಮತ್ತು ದಾಸ್ತಾನು ಮಾಡುವ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಿ ಹಾನಿಯುಂಟು ಮಾಡುತ್ತಿದ್ದಾರೆ. ಅಲ್ಲದೆ ನಮ್ಮ ಬಂದರಿನ ಮೇಲೆಯೂ ಮುತ್ತಿಗೆ ಹಾಕಿ ಅಲ್ಲಿನ ವ್ಯವಹಾರಕ್ಕೆ ತಡೆಯೊಡ್ಡಿರುವುದರಿಂದ ತೈಲ ಪೂರೈಕೆ ಅಸ್ತವ್ಯಸ್ತವಾಗಿ ಪೆಟ್ರೋಲ್ ಪಂಪ್ಗಳ ಎದುರು ವಾಹನಗಳ ಸರತಿ ಸಾಲು ಉಂಟಾಗುತ್ತಿದೆ. ಆದರೆ ವಾರದೊಳಗೆ ತೈಲ ಪೂರೈಕೆಗೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸಿ ಕೊರತೆಯನ್ನು ನಿವಾರಿಸುವುದಾಗಿ ನಮ್ಮ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ದೇಶವನ್ನು ಉದ್ದೇಶಿಸಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
 ಉಕ್ರೇನ್ನ ತೈಲ ಮಾರಾಟ ಸಂಸ್ಥೆಗಳು ಯುರೋಪ್ನ ತೈಲ ಸರಬರಾಜುದಾರರೊಂದಿಗೆ ಸಂಪರ್ಕ ಸಾಧಿಸಿದ್ದು ವಾರದೊಳಗೆ ತೈಲ ಕೊರತೆ ಬಿಕ್ಕಟ್ಟು ನಿವಾರಣೆಯಾಗಲಿದೆ ಎಂದು ಉಕ್ರೇನ್ನ ವಿತ್ತಸಚಿವೆ ಯೂಲಿಯಾ ಸಿರಿಡೆಂಕೊ ಹೇಳಿದ್ದಾರೆ.


ರಶ್ಯ ವಿರುದ್ಧದ ನಿರ್ಬಂಧ ತೆರವು ಶಾಂತಿ ಮಾತುಕತೆಯ ಒಂದು ಭಾಗ: ರಶ್ಯ 

ರಶ್ಯ ವಿರುದ್ಧದ ನಿರ್ಬಂಧ ತೆರವುಗೊಳಿಸುವ ವಿಷಯವು ಉಕ್ರೇನ್ ಜತೆಗಿನ ಸಂಧಾನ ಮಾತುಕತೆಯ ಒಂದು ಭಾಗವಾಗಿದೆ ಎಂದು ರಶ್ಯದ ವಿದೇಶ ಸಚಿವ ಸೆರ್ಗೆಯ್ ಲಾವ್ರೋವ್ ಹೇಳಿದ್ದಾರೆ.
 
ರಶ್ಯದ ಆಕ್ರಮಣ ಮುಕ್ತಾಯಗೊಳಿಸುವುದಕ್ಕೆ ಸಂಬಂಧಿಸಿದ ಮಾತುಕತೆ ಮುರಿದುಬೀಳುವ ಅಪಾಯವಿದೆ ಎಂದು ಶುಕ್ರವಾರ ಉಕ್ರೇನ್ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಲಾವ್ರೋವ್, ಸಂಭಾವ್ಯ ಒಪ್ಪಂದದ ಕುರಿತು ಪ್ರಸ್ತುತ ರಶ್ಯ ಮತ್ತು ಉಕ್ರೇನ್ ನಿಯೋಗದ ಮಧ್ಯೆ ವೀಡಿಯೊ ಕಾನ್ಫರೆನ್ಸ್ ಮೂಲಕ ದಿನಾ ಮಾತುಕತೆ ನಡೆಯುತ್ತಿದೆ ಎಂದರು.
 
ರಶ್ಯ ವಿರುದ್ಧ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧ ಇನ್ನಷ್ಟು ಕಠಿಣವಾಗಬೇಕು ಮತ್ತು ಸಂಧಾನ ಮಾತುಕತೆಯಲ್ಲಿ ನಿರ್ಬಂಧದ ವಿಷಯ ಇರಬಾರದು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಪ್ರತಿಪಾದಿಸುತ್ತಿದ್ದಾರೆ.
 
ಮಾರ್ಚ್ 29ರ ಬಳಿಕ ಉಭಯ ದೇಶಗಳ ಪ್ರತಿನಿಧಿಗಳು ಮುಖಾಮುಖಿ ಮಾತುಕತೆ ನಡೆಸಿಲ್ಲ. ಕೀವ್ನಿಂದ ರಶ್ಯನ್ ಪಡೆ ಹಿಂದಕ್ಕೆ ಸರಿದ ಬಳಿಕ, ಆ ಪ್ರದೇಶದಲ್ಲಿ ನಡೆಸಿದ್ದ ದೌರ್ಜನ್ಯಗಳು ಬೆಳಕಿಗೆ ಬಂದಿವೆ ಎಂದು ಉಕ್ರೇನ್ ಆರೋಪಿಸಿರುವುದು ಮುಖಾಮುಖಿ ಮಾತುಕತೆಯ ಸಾಧ್ಯತೆಯನ್ನು ಮತ್ತಷ್ಟು ದೂರಗೊಳಿಸಿದೆ.

ಉಕ್ರೇನ್ನ ನಿರಸ್ತ್ರೀಕರಣ, ಆ ದೇಶವನ್ನು ನಾಝಿಸಂ ಪ್ರಭಾವದಿಂದ ಮುಕ್ತಗೊಳಿಸುವುದು, ನೂತನ ಭೂರಾಜಕೀಯ ವಾಸ್ತವತೆಯನ್ನು ಅರಿತುಕೊಳ್ಳುವುದು, ನಿರ್ಬಂಧ ತೆರವು, ರಶ್ಯ ಭಾಷೆಯ ಮಾನ್ಯತೆ ಇವು ಸಂಧಾನ ಮಾತುಕತೆಯ ಭಾಗವಾಗಿರಲಿದೆ. ಕಷ್ಟವಾದರೂ ಮಾತುಕತೆ ಮುಂದುವರಿಯುವುದನ್ನು ನಾವು ಬಯಸುತ್ತೇವೆ ಎಂದು ಲಾವ್ರೋವ್ ಹೇಳಿದ್ದಾರೆ. ರಶ್ಯ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಕಠಿಣ ನಿರ್ಬಂಧ ಹೇರಿವೆ. ರಶ್ಯದ ವಿದೇಶಿ ಕರೆನ್ಸಿ ಮೀಸಲು ನಿಧಿ, ಚಿನ್ನದ ಮೀಸಲು ನಿಧಿಯನ್ನು ಸ್ಥಂಭನಗೊಳಿಸುವ ಮೂಲಕಜ ರಶ್ಯದ ಅರ್ಥವ್ಯವಸ್ಥೆಗೆ ಮಾರಕ ಆಘಾತ ನೀಡಿದ್ದು, ಸರಕಾರ ಪಡೆದಿರುವ ಸಾಲ ಮರುಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News