ವಿಟ್ಲ; ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಯುವಕನ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ: ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕನ್ಯಾನದ ಗ್ರಾಮದ ಕಣಿಯೂರು ಎಂಬಲ್ಲಿ ಬುಧವಾರ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಯುವಕನೋರ್ವನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ಸುಳ್ಯ ತಾಲೂಕಿನ ಪಂಜ ನಿವಾಸಿ ಸಂಜೀವ ಎಂಬವರ ಪುತ್ರಿ ಆತ್ಮೀಕಾ (14) ಎಂಬಾಕೆ ಕಣಿಯೂರು ಎಂಬಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಈಕೆ ತನ್ನ ಕುಟುಂಬದೊಂದಿಗೆ ಕನ್ಯಾನ ಗ್ರಾಮದ ಕಣಿಯೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಇಂದು ಮನೆಮಂದಿ ಕೆಲಸಕ್ಕೆ ಹೋದಾಗ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಲಾಗಿದೆ.
ಈಕೆಗೆ ಸ್ಥಳೀಯ ನಿವಾಸಿ ಶಾಹುಲ್ ಹಮೀದ್ ಎಂಬಾತ ಕಿರುಕುಳ ನೀಡಿದ ಆರೋಪದಲ್ಲಿ ಆತನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ವಿವರ: ಆತ್ಮೀಕಾ ಕಣಿಯೂರು ತಲೆಕ್ಕಿ ಎಂಬಲ್ಲಿಯ ಸಾಹುಲ್ ಹಮೀದ್ ಯಾನೆ ಕುಟ್ಟ ಎಂಬಾತನನ್ನು ಪ್ರೀತಿಸುತ್ತಿದ್ದು, ಈ ವಿಚಾರ ಮನೆಯವರಿಗೆ ಗೊತ್ತಾಗಿದೆ. ಬಳಿಕ ಮಗಳ ಮೊಬೈಲ್ ನ್ನು ತೆಗೆದಿರಿಸಿ ಆಕೆಗೆ ಬುದ್ಧಿವಾದ ಹೇಳಿದ್ದು ಸಾಹುಲ್ ಹಮೀದ್ ಹಾಗೂ ಆತನ ಅಣ್ಣನನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕರೆದು ಆತನಿಗೆ ಮಗಳ ಸಹವಾಸಕ್ಕೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಸಾಹುಲ್ ಹಮೀದ್ ಪದೇ ಪದೇ ಯಾರೂ ಇಲ್ಲದ ಸಮಯ ಆಕೆಯ ಮನೆಗೆ ಬಂದು ಆಕೆಯನ್ನು ಭೇಟಿಯಾಗಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಅಲ್ಲದೇ ನೀನು ನಿನ್ನ ತಂದೆ - ತಾಯಿಯನ್ನು ಬಿಟ್ಟು ನನ್ನೊಂದಿಗೆ ಬಾ. ನೀನು ಬರುವುದಿಲ್ಲವಾದರೆ ಸಾಯಿ ಎಂದು ಸಾಹುಲ್ ಹಮೀದ ಯಾನೆ ಕುಟ್ಟ ಹೇಳಿರುವುದನ್ನು ಮಗಳು ಆತ್ಮಿಕ ತಂದೆ ಹಾಗೂ ತಾಯಿ ಬಳಿ ಹೇಳಿಕೊಂಡಿದ್ದಳು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆತನ ಮಾತಿನಿಂದ ಮನನೊಂದು ಈ ಕೃತ್ಯ ಎಸೆಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.