ಹಳೆಯಂಗಡಿ: ವಿಶೇಷ ಅತಿಥಿಗಳೊಂದಿಗೆ ಈದ್ ಆಚರಿಸಿದ ಬೊಳ್ಳೂರಿನ ರಿಲಾಯನ್ಸ್ ಅಸೋಸಿಯೇಷನ್

Update: 2022-05-05 11:44 GMT

ಹಳೆಯಂಗಡಿ: ಬೊಳ್ಳೂರಿನ ರಿಲಾಯನ್ಸ್ ಅಸೋಸಿಯೇಷನ್ ವತಿಯಿಂದ ಮುಲ್ಕಿಯ ಆಪತ್ಬಾಂಧವ ಆಶ್ರಮದಲ್ಲಿ ವಿಶೇಷ ಅತಿಥಿಗಳೊಂದಿಗೆ ಈದ್ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಆಶ್ರಮದಲ್ಲಿ ಆಶ್ರಯ ಪಡೆದುಕೊಂಡಿರುವ ಐವತ್ತುಕ್ಕೂ ಹೆಚ್ಚು ಅನಾಥ, ನಿರ್ಗತಿಕ ಮತ್ತು ಮಾನಸಿಕ ಅಸ್ವಸ್ಥರಿಗೆ ಹೊಸ ಬಟ್ಟೆಯನ್ನು ಉಡುಗೊರೆಯಾಗಿ ನೀಡಲಾಯಿತು. ಜೊತೆಗೆ ಈ ವಿಶೇಷ ಅತಿಥಿಗಳಿಗಾಗಿ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಜೊತೆಗೆ ದಾನಿಗಳ ಸಹಕಾರದೊಂದಿಗೆ ಅನಾಥಾಶ್ರಮಕ್ಕೆ ಎರಡು ಟೇಬಲ್ ಫ್ಯಾನ್ ಗಳನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಿಲಾಯನ್ಸ್ ಅಸೋಸಿಯೇಷನ್ ಸಂಸ್ಥೆಯ ಮಾಜಿ ಅಧ್ಯಕ್ಷ ಹಾರಿಶ್ ನವರಂಗ್, "ಆಶ್ರಮದ ಮುಖ್ಯಸ್ಥ ಸಾಮಾಜಿಕ ಕಾರ್ಯಕರ್ತ ಆಸಿಫ್ ಆಪತ್ಬಾಂಧ ಪ್ರಕರಣವೊಂದಕ್ಕೆ ಸಂಬಂಧಿಸಿ ಕಳೆದೊಂದು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದು,  ಅವರ ಅನುಪಸ್ಥಿತಿಯಲ್ಲಿ ಆಶ್ರಮವು ಬಹಳಷ್ಟು ಸಂಕಷ್ಟದಲ್ಲಿದೆ ಎಂಬ ವಿಚಾರ ನಮ್ಮ ಗಮನಕ್ಕೆ ಬಂದಿತ್ತು. ಆ ಕಾರಣದಿಂದಲೇ ನಮ್ಮ ಸಂಸ್ಥೆಯು ಈ ಬಾರಿಯ ಈದ್ ಸಂಭ್ರಮಾಚರಣೆಯನ್ನು ಇಲ್ಲಿನ ವಿಶೇಷ ಅತಿಥಿಗಳೊಂದಿಗೆ ಆಚರಿಸುವ ಯೋಜನೆಯನ್ನು ರೂಪಿಸಿತು. ಇಲ್ಲಿನ ನಿರ್ಗತಿಕರೊಂದಿಗೆ ಬೆರೆಯಲು ಅವಕಾಶ ದೊರಕಿರುವುದು ಸಂತಸ ತಂದಿದೆ ಮತ್ತು ಈ ಬಾರಿಯ ಈದ್ ಸಂಭ್ರಮಾಚರಣೆ ಒಂದಷ್ಟು ಅರ್ಥಪೂರ್ಣವಾಗಿ ಆಚರಿಸಿದ ಧನ್ಯತಾ ಭಾವ ನಮ್ಮ ಸಂಸ್ಥೆಯ ಕಾರ್ಯಕರ್ತರಲ್ಲಿ ಮೂಡಿದೆ ಎಂದು ಹೇಳಿದರು.

ಹಾಗೆಯೇ ನಮ್ಮ ಮಹತ್ಕಾರ್ಯದಲ್ಲಿ ಕೈಜೋಡಿಸಿದ ಯುಬಿಟಿ ಗೈಸ್ ಜುಬೈಲ್ ಮತ್ತು ರಿಲಾಯನ್ಸ್ ಅಸೋಸಿಯೇಷನ್ ಜಿಸಿಸಿ ಘಟಕದ ಪದಾಧಿಕಾರಿಗಳಿಗೂ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಿಲಾಯನ್ಸ್ ಅಸೋಸಿಯೇಷನ್ ಅಧ್ಯಕ್ಷ ಅಕ್ಬರ್ ಬೊಳ್ಳೂರು, ಕಾರ್ಯದರ್ಶಿ ಇಕ್ಬಾಲ್ ಎಂ.ಎ,  ಜೊತೆ ಕಾರ್ಯದರ್ಶಿ ಫಾರೂಕ್ ನವರಂಗ್, ಉಪಾಧ್ಯಕ್ಷ ರಿಯಾಝ್ ಕೊಪ್ಪಳ, ಲೆಕ್ಕ ಪರಿಶೋಧಕ ಕೌಶಿಕ್ ಎಮ್.ಸಿ.ಎಫ್, ಗಲ್ಫ್ ಘಟಕದ ಫಾರೂಕ್ ಫ್ಯಾನ್ಸಿ, ನೌಶಾದ್ ದುಬೈ,,ಮಾಜಿ ಅಧ್ಯಕ್ಷ ಮುಬಾರಕ್ ಬೊಳ್ಳೂರು, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಅಝೀಝ್, ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು, ಝಮೀರ್ ಜಮ್ಮಿ, ಸದಸ್ಯರಾದ ಮಮ್ತಾಜ್ ಅಲಿ, ಸಿದ್ದೀಕ್ ಬೊಳ್ಳೂರು, ಝಿಯಾಹುಲ್ ಹಕ್, ಬಾವ ನವರಂಗ್, ರಿಯಾಜ್ ಇಂದಿರಾನಗರ, ಹಕೀಮ್ ಇಂದಿರಾನಗರ, ಅಕ್ರಮ್, ಕಬೀರ್ ಹಾರಿಸ್ ಇಂದಿರಾನಗರ ಮತ್ತಿತರರು ಪಾಲ್ಗೊಂಡಿದ್ದರು. ಆಶ್ರಮದ ಆರೋಗ್ಯ ನಿರ್ವಾಹಕ ಶಹದ್ ಮನಲ್ ಈ ವೇಳೆ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News