ಬೆಂಗಳೂರು | ಬಿಬಿಎಂಪಿ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಕೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ

Update: 2022-05-15 07:29 GMT

ಬೆಂಗಳೂರು, ಮೇ 15: ಮುಂದಿನ ಬಿಬಿಎಂಪಿ ಚುನಾವಣೆಗೆ ಇವಿಎಂ (ವಿದ್ಯುನ್ಮಾನ ಮತಯಂತ್ರ) ಬದಲಿಗೆ ಮತಪತ್ರಗಳನ್ನೇ ರಾಜ್ಯ ಚುನಾವಣಾ ಆಯೋಗ ಬಳಕೆ ಮಾಡಬೇಕೆಂದು ಒತ್ತಾಯಿಸಿ ಕೆಪಿಸಿಸಿ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯರು ಧರಣಿ ನಡೆಸಿದರು.

ನಗರದಲ್ಲಿಂದು ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಮುಂಭಾಗ ಕೆಪಿಸಿಸಿ ಸೇವಾದಳ ಯಂಗ್ ಬ್ರಿಗೇಡ್ ಅಧ್ಯಕ್ಷ ಜುನೈದ್ ಪಿ.ಕೆ. ನೇತೃತ್ವದಲ್ಲಿ ಜಮಾಯಿಸಿದ ಸದಸ್ಯರು ಬಿಬಿಎಂಪಿ ಚುನಾವಣೆ ಘೋಷಣೆ ಮಾಡಿ ಮತ್ತು ಇವಿಎಂ ಬೇಡ, ಬ್ಯಾಲೆಟ್ ಪೇಪರ್ ಬಳಸಿ ಮತದಾನ ನಡೆಸಿ ಎಂದು ಘೋಷಣೆ ಕೂಗಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಜುನೈದ್ ಪಿ.ಕೆ., ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ 15 ದಿನಗಳ ಒಳಗೆ ನೋಟಿಫಿಕೇಷನ್ ಹೊರಡಿಸಿಬೇಕು ಎಂದಿದೆ. ರಾಜ್ಯ ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿ ಚುನಾವಣೆ ದಿನಾಂಕ ಘೋಷಣೆ ಮಾಡಬೇಕು. ಜತೆಗೆ  ಇವಿಎಂ ಮತಯಂತ್ರಗಳ ಬಗ್ಗೆ ದೇಶಾದ್ಯಂತ ಸಂಶಯ ವ್ಯಕ್ತವಾಗುತ್ತಿದೆ. ಹೀಗಾಗಿ ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ  ಬ್ಯಾಲೆಟ್‌ ಪೇಪರ್‌ಗಳನ್ನೇ ಬಳಸಿದರೆ ಒಳ್ಳೆಯದು ಎಂದು ಒತ್ತಾಯಿಸಿದರು.

ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರೂ ಮತ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅಮೆರಿಕ, ಜರ್ಮನಿಯಂತಹ ದೇಶಗಳು ಇವಿಎಂಗೆ ಹೋಗಿ  ಈಗ ಮತ್ತೆ ಬ್ಯಾಲೆಟ್‌ ಪೇಪರ್‌ ನಲ್ಲಿ ಚುನಾವಣೆ ನಡೆಸುತ್ತಿವೆ. ಇಲ್ಲೂ ಹಾಗೇ ಆಗಬೇಕು. ಅದು ಅದಲ್ಲದೇ, 2005-09ರಲ್ಲಿ ಇವಿಎಂ ಯಂತ್ರ ಬಳಸುತ್ತಿದ್ದ ಜರ್ಮನಿ ಇದೀಗ ಮರಳಿ ಬ್ಯಾಲೆಟ್ ಪೇಪರ್ ಪದ್ದತಿ ಅಳವಡಿಸಿಕೊಂಡಿದ್ದು, ಇವಿಎಂ ದುರ್ಬಳಕೆ ಕುರಿತು ವಿಶ್ವದ ಎಲ್ಲಾ ರಾಷ್ಟ್ರಗಳೂ ಚಕಾರವೆತ್ತಿವೆ. ಅದರಂತೆ ನೆದರ್ ಲ್ಯಾಂಡ್ ಕೂಡ 1990-2007ರವರೆಗೂ ಇವಿಎಂ ಬಳಸಿ ಮರಳಿ ಬ್ಯಾಲೆಟ್ ಪೇಪರ್ ಅನ್ನು ಅಪ್ಪಿಕೊಂಡಿದೆ. ಐರ್ಲ್ಯಾಂಡ್ 2002-04ರವೆಗೆ ಇವಿಎಂ ಬಳಿಸಿ ಮತ್ತೆ ಬ್ಯಾಲೆಟ್ ಪೇಪರ್ ಬಳಸುತ್ತಿದೆ ಎಂದರು.

ಇವಿಎಂ ಮತಯಂತ್ರದಲ್ಲಿ ದೋಷವಿದ್ದು, ಬ್ಯಾಲೆಟ್ ಪೇಪರ್ ಪದ್ದತಿಯನ್ನು ಮರುಜಾರಿಗೊಳಿಸಬೇಕು.ಇದು ಮೊಟ್ಟ ಮೊದಲು ಬಿಬಿಎಂಪಿ ಚುನಾವಣೆಯಿಂದಲೇ ಆರಂಭವಾಗಬೇಕು. ಹೀಗಾಗಿ, ರಾಜ್ಯ ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಲಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎನ್ಎಸ್ ಯುಐ ರಾಜ್ಯಾಧ್ಯಕ್ಷ ಕೀರ್ತಿಗಣೇಶ್,ಸುರೇಂದ್ರ, ಡಾ‌.ಭರತ್ ಶ್ರೀ,ವಿಜಯನ್,ಮಹೇಶ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News