ಮನೆಯಲ್ಲಿದ್ದ ತಾಯಿಯ ಚಿನ್ನಾಭರಣ ಕಳವು ಪ್ರಕರಣ: ಪುತ್ರಿ ಸೇರಿ ಇಬ್ಬರು ಆರೋಪಿಗಳ ಬಂಧನ
Update: 2022-05-17 12:24 GMT
ಬೆಂಗಳೂರು, ಮೇ 17: ಪ್ರಿಯಕರನಿಗಾಗಿ ಮನೆಯಲ್ಲಿದ್ದ ತಾಯಿಯ ಚಿನ್ನಾಭರಣವನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಯುವತಿ ಸೇರಿ ಇಬ್ಬರನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಜಕ್ಕೂರು ಲೇಔಟ್ ನಿವಾಸಿ ರತ್ನಮ್ಮ ಎಂಬುವವರು ಪುತ್ರಿಯ ವಿರುದ್ಧ ನೀಡಿದ ದೂರಿನ ಮೇರೆಗೆ ದೀಪ್ತಿ ಹಾಗೂ ಮದನ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಜಕ್ಕೂರು ಲೇಔಟ್ನಲ್ಲಿ ರತ್ನಮ್ಮ ಹಾಗೂ ಪುತ್ರಿ ದೀಪ್ತಿ ವಾಸವಾಗಿದ್ದರು. ರತ್ನಮ್ಮ ಟೈಲರ್ ಕೆಲಸ ಮಾಡುತ್ತಿದ್ದರೆ, ಪುತ್ರಿ ದೀಪ್ತಿ ಇತ್ತೀಚಿಗೆ ಕಾರು ಚಾಲನೆ ತರಬೇತಿ ಪಡೆಯಲು ಮದನ್ ನಡೆಸುತ್ತಿದ್ದ ತರಬೇತಿ ಶಾಲೆಗೆ ಸೇರಿಕೊಂಡಿದ್ದಳು. ಆ ನಂತರ, ಹಂತ-ಹಂತವಾಗಿ ಚಿನ್ನಾಭರಣ ಕಳವು ಮಾಡಿ ಆತನಿಗೆ ಕೊಟ್ಟಿರುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ಆರೋಪಿಯಿಂದ 36 ಲಕ್ಷ ರೂ. ಮೌಲ್ಯದ 750 ಗ್ರಾಂ ಚಿನ್ನಾಭರಣ, ಮೂರು ಕಾರು ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.